×
Ad

ಮಂಗಳೂರಿನ ಯಾವುದೇ ಪೊಲೀಸ್ ಅಧಿಕಾರಿಯನ್ನು ದೂಷಿಸುವುದಿಲ್ಲ: ಡಿ.ಕೆ.ಶಿವಕುಮಾರ್

Update: 2019-12-24 16:06 IST

ಬೆಂಗಳೂರು, ಡಿ. 24: ‘ತಮ್ಮ ವಿರುದ್ಧ ಧ್ವನಿ ಎತ್ತಿದ ಯುವಕರು, ವಿದ್ಯಾರ್ಥಿಗಳು, ಬುದ್ಧಿಜೀವಿಗಳನ್ನು ನಗರ ನಕ್ಸಲರು ಎಂದು ಕರೆದು ಅವಮಾನ ಮಾಡಿರುವ ಪ್ರಧಾನಿ ಮೋದಿ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಮಂಗಳವಾರ ಸದಾಶಿವನಗರ ತನ್ನ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ನಗರ ನಕ್ಸಲರು ಎಂದು ಕರೆದಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳನ್ನು ನಿಂದಿಸುವ ಕೆಲಸ ಮಾಡಿದ್ದಾರೆ. ಯುವಕರು ಇಲ್ಲದಿದ್ದರೆ ನೀವು ಅಧಿಕಾರಕ್ಕೆ ಬರುತ್ತಿರಲಿಲ್ಲ. ಮೊದಲು ನೀವು ಕ್ಷಮೆ ಕೇಳಿ ಎಂದು ಆಗ್ರಹಿಸಿದರು.

ಈ ವಿಚಾರವಾಗಿ ಪ್ರಧಾನಿ ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತಿದ್ದೇನೆ. ಈ ರಾಷ್ಟ್ರದ ಯುವಕರು, ವಿದ್ಯಾರ್ಥಿಗಳು, ಚಿಂತಕರು ಇಲ್ಲದಿದ್ದರೆ ನೀವು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುತ್ತಿರಲಿಲ್ಲ. ನಿಮ್ಮನ್ನು ದೊಡ್ಡ ಪ್ರಮಾಣದಲ್ಲಿ ಗೆಲ್ಲಿಸಿದ್ದು, ಇವರನ್ನು ಬೀದಿಗಿಳಿದು ಪ್ರತಿಭಟನೆ ಮಾಡಿಸಲು ಅಲ್ಲ. ದೇಶದ ಜನ ಆರ್ಥಿಕವಾಗಿ ನರಳುತ್ತಿರುವ ಸಂದರ್ಭದಲ್ಲಿ, ಅವರ ಸ್ವಾಭಿಮಾನದ ಬದುಕಿಗೆ ಕಳಂಕ ತಂದು ಜೀವನದಲ್ಲಿ ಚೆಲ್ಲಾಟ ಆಡುತ್ತಿರುವುದು ಸಲ್ಲ ಎಂದು ಆಕ್ಷೇಪಿಸಿದರು.

ನಿಮಗೆ ಮತ ಹಾಕಿದ ಯುವಕರು ಸಂಸತ್ತಿನೊಳಗೆ ಬಂದು ನಿಮ್ಮನ್ನು ಪ್ರಶ್ನಿಸಲು ಆಗುವುದಿಲ್ಲ. ಹೀಗಾಗಿ ಅವರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೆ ಅವರ ಬಾಯಿ ಮುಚ್ಚಿಸುವ ಪ್ರಯತ್ನ, ಅವರು ನಿಮ್ಮ ವಿರುದ್ಧ ಧ್ವನಿ ಎತ್ತಿದರು ಎಂಬ ಮಾತ್ರಕ್ಕೆ ಅವರನ್ನು ನಗರ ನಕ್ಸಲರು ಎಂದು ಕರೆಯುವುದು ಖಂಡನೀಯ. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ ಎಂದು ವಾಗ್ದಾಳಿ ನಡೆಸಿದರು.

ಹೂಡಿಕೆಗೆ ವಿದೇಶದವರು ಹಿಂದೇಟು ಹಾಕಿದ್ದಾರೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೊಸ ಕಾನೂನನ್ನ ಎಲ್ಲರೂ ವಿರೋಧ ಮಾಡುತ್ತಿದ್ದಾರೆ. ನಿಮಗೆ ಬೆಂಬಲ ನೀಡಿರುವ ಎಐಎಡಿಎಂಕೆ, ವೈಎಸ್‌ಆರ್ ಕಾಂಗ್ರೆಸ್, ಬಿಜು ಜನತಾದಳ ನಾಯಕರು, ನಿತೀಶ್ ಕುಮಾರ್ ಸೇರಿ ಹಲವರು ಈ ವಿಚಾರದಲ್ಲಿ ನಿಮಗೆ ಮತ ನೀಡಿ ತಪ್ಪು ಮಾಡಿದ್ದೀವಿ ಎಂದು ಹೇಳುತ್ತಿದ್ದಾರೆ. ಮೊದಲು ಅವರನ್ನು ಸಮಾಧಾನ ಮಾಡಿ, ಆನಂತರ ಬೇರೆ ವಿಚಾರ ಮಾತಾಡಿ ಎಂದು ಸಲಹೆ ಮಾಡಿದರು.

ನಿಮಗೆ ಬೆಂಬಲ ನೀಡಿದ ಯುವಕರು ಮತ್ತು ಪಕ್ಷಗಳು ನಿಮ್ಮ ಧೋರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ವಿಡಿಯೋ ಹಳೆಯದು. 144 ಸೆಕ್ಷನ್ ಹಾಕುವುದಕ್ಕೆ ಹೇಳಿದ್ದು ಯಾರು? ಇನ್ನೂ ಸಾಯಲಿಲ್ಲವಾ ಅಂತ ಕೇಳಿದ್ದು ಯಾರು? ಪೊಲೀಸರು ಅಲ್ವಾ? ಎಂದು ಪ್ರಶ್ನಿಸಿದರು.

ಈ ವಿಚಾರದಲ್ಲಿ ನಾನು ಮಂಗಳೂರಿನ ಯಾವುದೇ ಪೊಲೀಸ್ ಅಧಿಕಾರಿಯನ್ನು ದೂಷಿಸುವುದಿಲ್ಲ. ಕಾರಣ, ನಮ್ಮಲ್ಲಿ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ಗೊತ್ತಿದೆ. ಸರಕಾರದ ಆದೇಶ ಇಲ್ಲದೇ ಯಾವುದೇ ಪೊಲೀಸ್ ಅಧಿಕಾರಿ ಈ ರೀತಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮಂಗಳೂರು ಹಾಗೂ ರಾಜ್ಯದ ಘಟನೆಗೆ ಜವಾಬ್ದಾರಿ ರಾಜ್ಯ ಸರಕಾರ. ಮಂಗಳೂರಿನಲ್ಲಿರುವ ಬಹಳ ಜನ ಹೊರದೇಶದಲ್ಲಿ ಇದ್ದಾರೆ. ಅವರಿಗೆ ಇದು ಬೇಕಿಲ್ಲ. ಅಲ್ಲಿ ಗಲಭೆ ಮಾಡುವವರಿಗೆ ಇದು ಬೇಕು ಎಂದು ಟೀಕಿಸಿದರು.

ನೋಟು ರದ್ದು ಮಾಡಿದ ನಿರ್ಧಾರದಿಂದ ಇನ್ನು ಆರ್ಥಿಕತೆ ಚೇತರಿಸಿಕೊಂಡಿಲ್ಲ. ಈಗ ಮತ್ತೇ ನೋಟು ರದ್ದತಿ ಬಗ್ಗೆ ಚಿಂತನೆ ನಡೆಸುತ್ತಿದ್ದೀರಿ. 2 ಸಾವಿರ ರೂ.ನೋಟು ವಾಪಸ್ ನೀಡಬೇಡಿ ಎಂದು ಬ್ಯಾಂಕ್‌ನವರಿಗೆ ಹೇಳುತ್ತಿದ್ದೀರಿ. ಈ ಬಗ್ಗೆ ನೀವೇ ಚರ್ಚೆ ಮಾಡುತ್ತಿದ್ದೀರಿ. ಈ ರೀತಿ ಜನರಿಗೆ ತೊಂದರೆ ಯಾಕೆ ನೀಡುತ್ತೀರಿ. ಅಧಿಕಾರ ಇರುವುದು ಜನರಿಗೆ ತೊಂದರೆ ಕೊಡುವುದಕ್ಕೆ ಅಲ್ಲ. ನಿಮಗೆ ಅಧಿಕಾರ ಇದೆ ಎಂದು ಒಂದೊಂದೇ ವರ್ಗವನ್ನು ಗುರಿಯಾಗಿಸಿ ತೊಂದರೆ ಕೊಡುತ್ತಿದ್ದೀರಲ್ಲಾ, ಭಾರತೀಯರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಸಿದರು.

ಬಿಜೆಪಿ ನಾಯಕರು ಏನಾದರೂ ಹೇಳಲಿ, ಕಾಂಗ್ರೆಸ್ ತಲೆಗಾದರೂ ಕಟ್ಟಲಿ ಬಿಡಲಿ, ನಾವು ಅದಕ್ಕೆ ಹೆದರುವುದಿಲ್ಲ. ಇಂದು ನಾಗರಿಕರು ಪಕ್ಷಾತೀತ, ಜಾತ್ಯತೀತವಾಗಿ ರಸ್ತೆಗಿಳಿದು ದಂಗೆ ಎದ್ದಿದ್ದಾರೆ. ಅವರ ಭಾವನೆ ಕೆರಳಿಸಬೇಡಿ. ಇಡೀ ಭಾರತ ಅಭಿವೃದ್ಧಿಯಾಗಬೇಕೆಂದು ಪ್ರಪಂಚ ಎದುರು ನೋಡುತ್ತಿದೆ. ಬೇರೆ ದೇಶಕ್ಕೆ ಹೋಗಿ ಯಾವುದೋ ವ್ಯಕ್ತಿ ಅಥವಾ ಪಕ್ಷದ ಬಗ್ಗೆ ಮಾತನಾಡಿ ನಮ್ಮ ದೇಶದ ಗೌರವವನ್ನು ಹಾಳು ಮಾಡಬೇಡಿ ಎಂದು ಶಿವಕುಮಾರ್ ಕೋರಿದರು.

ದೇಶದಲ್ಲಿ ಯಾರೂ ಪಂಚರ್ ಹಾಕ್ಬಾರ್ದಾ? ಕಸ ಗುಡಿಸಬಾರದಾ? ನಿಮ್ಮ ಮನೆ ಮುಂದೆ ಬಂದು ಯಾರಾದರೂ ಕಸ ಹಾಕಿದರೆ ಅದನ್ನು ಸ್ವಚ್ಛ ಮಾಡುವವರು ಯಾರು? ಹಿಂದೆ ಗುಜರಾತಲ್ಲಿ ಹೊಟ್ಟೆ ಸೀಳಿದ್ದು ಆಯ್ತು, ಈಗ ಎದೆ ಸೀಳಲು ಮುಂದಾಗುತ್ತೀರಾ? ಇದೇನಾ ನಮ್ಮ ಸಂಸ್ಕೃತಿ, ನಿಮ್ಮ ಧರ್ಮದಲ್ಲಿ ಇದನ್ನೇ ಹೇಳಿಕೊಟ್ಟಿದ್ದಾರಾ? ಈ ದೇಶದಲ್ಲಿ ವಿದ್ಯಾವಂತರು, ಬುದ್ಧಿವಂತರು ಇಲ್ಲದಿದ್ದರೂ ನಡೆಯುತ್ತದೆ, ಪ್ರಜ್ಞಾವಂತಿಕೆ ಇದ್ದರೆ ಸಾಕು. ಅದು ಈ ದೇಶದ ಬಡ ಜನತೆಯಲ್ಲಿದೆ. ಇದನ್ನು ಮರೆಯಬಾರದು ಎಂದು ಹರಿಹಾಯ್ದರು.

‘ಜಾರ್ಖಂಡ್ ವಿಧಾನಸಭೆ ಚುನಾವಣೆ ಬಗ್ಗೆ ನಾನೇನು ಹೆಚ್ಚು ಹೇಳುವುದಿಲ್ಲ. ಅಲ್ಲಿನ ಜನತೆ ಈಗಾಗಲೇ ಉತ್ತರ ನೀಡಿದ್ದಾರೆ. ಇದು ಬಿಜೆಪಿಯ ಅಂತ್ಯಕ್ಕೆ ಮುನ್ನುಡಿ’

-ಡಿ.ಕೆ.ಶಿವಕುಮಾರ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News