‘ಆರೋಗ್ಯ ನಗರ’ವಾಗಿ ರಾಮನಗರ ಅಭಿವೃದ್ಧಿ: ಡಾ.ಸಿ.ಎನ್.ಅಶ್ವಥ್ ನಾರಾಯಣ

Update: 2019-12-28 14:09 GMT

ಬೆಂಗಳೂರು, ಡಿ.27: ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಹಾಗೂ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ತಿಳಿಸಿದರು.

ಶನಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ಪ್ರಶ್ನೆಯೇ ಇಲ್ಲ. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಹೆಚ್ಚು ಸೌಲಭ್ಯಗಳನ್ನು ಒದಗಿಸುವುದರ ಮೂಲಕ ರಾಮನಗರವನ್ನು ‘ಆರೋಗ್ಯ ನಗರ’ವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಆರೋಗ್ಯ ಪ್ರವಾಸೋದ್ಯಮಕ್ಕೆ ಇದರಿಂದ ಉತ್ತೇಜನ ದೊರೆಯಲಿದೆ. ರಾಜ್ಯದ ಯಾವ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಇಲ್ಲವೋ ಅಂತಹ ಕಡೆ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ಅಶ್ವತ್ಥ ನಾರಾಯಣ ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿಯನ್ನು ದೇಶದಿಂದ ಮುಕ್ತ ಮಾಡುವುದಾಗಿ ಹೇಳಿದ್ದಾರೆ. ಬೇರೆಯವರನ್ನು ಮುಕ್ತ ಮಾಡಲು ಹೊರಟಿರುವ ಅವರೇ ಮುಕ್ತವಾಗಿದ್ದಾರೆ. ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ, ಎಂತಹ ಪರಿಸ್ಥಿತಿಯಲ್ಲಿ ಯಾರನ್ನು ಬೇಕಾದರೂ ಸೇರುತ್ತದೆ ಎಂದು ಅವರು ಟೀಕಿಸಿದರು.

ಕಾಂಗ್ರೆಸ್ ಪಕ್ಷದ್ದು ಅವಕಾಶವಾದದ ರಾಜಕಾರಣವಾಗಿದೆ. ಅದಕ್ಕೆ ಯಾವುದೇ ಸಿದ್ಧಾಂತ, ಚಿಂತನೆ, ದೂರದೃಷ್ಟಿ ಯಾವುದೂ ಇಲ್ಲ. ಭಾರತಕ್ಕೆ ತನ್ನದೇ ಸಂಸ್ಕೃತಿ, ಆಚಾರ-ವಿಚಾರವಿದೆ. ಕಾಂಗ್ರೆಸ್ ನಾಯಕರು ದೇಶದ ಸಂಸ್ಕೃತಿ ವಿರುದ್ಧ ಮತ್ತು ದೇಶದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಅಶ್ವತ್ಥ ನಾರಾಯಣ ಆಗ್ರಹಿಸಿದರು.

ನೆರೆಯ ದೇಶಗಳಲ್ಲಿ ಹಿಂಸೆ, ದೌರ್ಜನ್ಯ ಎದುರಿಸಿ ಭಾರತಕ್ಕೆ ಬಂದಿರುವ ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ. ಆದರೆ, ಅದಕ್ಕೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.

ಕನಕಪುರದ ಕಪಾಲಬೆಟ್ಟ ಸಾಧು-ಸಂತರು ಧ್ಯಾನ ಮಾಡಿದ ಪವಿತ್ರ ಸ್ಥಳವಾಗಿದೆ. ಇಂತಹ ಸ್ಥಳದಲ್ಲಿ ಬೇರೊಂದು ಧರ್ಮಕ್ಕೆ ಸೇರಿದವರ ಪ್ರತಿಮೆಯನ್ನು ಸ್ಥಾಪಿಸುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಪ್ರತಿಮೆ ಸ್ಥಾಪಿಸಲು ಉದ್ದೇಶಿಸಿರುವ ಜಾಗ ಗೋಮಾಳಕ್ಕೆ ಸೇರಿದ್ದು ಎನ್ನಲಾಗಿದ್ದು, ಈ ಕುರಿತು ವರದಿ ಬಂದ ನಂತರ ಜಾಗವನ್ನು ವಶಕ್ಕೆ ಪಡೆಯುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅಶ್ವಥ್ ನಾರಾಯಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News