×
Ad

ಸಂವಿಧಾನ ಅರ್ಥೈಸಿಕೊಂಡರೆ ತಾಯಿಯನ್ನು ಅರಿತುಕೊಂಡಂತೆ: ನ್ಯಾ.ನಾಗಮೋಹನ್ ದಾಸ್

Update: 2020-01-09 23:45 IST

ಬೆಳಗಾವಿ, ಜ.9: ಸಂವಿಧಾನವನ್ನು ಅರ್ಥ ಮಾಡಿಕೊಂಡರೆ ತಾಯಿಯನ್ನು ಅರ್ಥ ಮಾಡಿಕೊಂಡಂತೆ. ಆ ತಾಯಿ ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಮುಂದೆ ಸಾಗಬೇಕು. ರಾಷ್ಟ್ರಗೀತೆ, ಲಾಂಛನ ನೀಡಿ ನಿಜವಾದ ಭಾರತದ ನಿರ್ಮಾಣ ಮಾಡಿದ್ದು ನಮ್ಮ ಸಂವಿಧಾನ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಹೇಳಿದರು.

ಗುರುವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ವಕೀಲರ ಸಂಘ, ಸಮುದಾಯ ಕರ್ನಾಟಕ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ವತಿಯಿಂದ ಆಯೋಜಿಸಲಾಗಿದ್ದ ‘ಸಂವಿಧಾನ ಓದು’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ 70 ವರ್ಷಗಳಿಂದ ನಾವು ಹೊಸ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಿಲ್ಲ. ಹೊಸ ಚಿಂತನೆಗಳು ಬಂದರೆ ನಮ್ಮ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬಹುದು. ರಾಜಕೀಯ ಅಧಿಕಾರ ಎಂದರೆ ಕಾನೂನುಗಳನ್ನು ರಚನೆ ಮಾಡುವುದು, ಕಾನೂನುಗಳನ್ನು ಜಾರಿ ಮಾಡುವ ಅಧಿಕಾರ ಎಂದು ಅವರು ಹೇಳಿದರು.

ಒಂದು ಕಾಲದಲ್ಲಿ ರಾಜಕೀಯ ಅಧಿಕಾರ ರಾಜರ ಕೈಯಲ್ಲಿ ಇತ್ತು. ಬಳಿಕ ಆ ಅಧಿಕಾರ ಪ್ರಜಾಪ್ರಭುತ್ವ ವ್ಯವಸ್ಥೆಯ ಅಧೀನ ಬಂದಿದೆ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ವ್ಯವಸ್ಥೆ ಜಾರಿ ಆದವು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ನಿಯಮಗಳನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿ ಅದನ್ನು ನಾವು ಅರಿಯಬೇಕಿದೆ ಎಂದು ನಾಗಮೋಹನ್ ದಾಸ್ ಹೇಳಿದರು. ನಮಗೊಂದು ಸಂವಿಧಾನ ಬೇಕು, ಆ ಸಂವಿಧಾನದ ಮೂಲಕ ಅಧಿಕಾರ ಮುನ್ನಡೆಯಬೇಕು ಹಾಗಾಗಿ ಸಂವಿಧಾನ ಅರಿಯುವುದು ಮುಖ್ಯ. ರಾಷ್ಟ್ರಗೀತೆ, ರಾಷ್ಟ್ರ ಲಾಂಛನ ನೀಡಿ ನಿಜವಾದ ಭಾರತದ ನಿರ್ಮಾಣ ಆಗಿದ್ದು ಭಾರತದ ಸಂವಿಧಾನ ಜಾರಿ ಆದ ನಂತರ ಎಂದು ನಾಗಮೋಹನ್ ದಾಸ್ ತಿಳಿಸಿದರು.

ದೇಶದ ಎಲ್ಲ ಸಮುದಾಯದ ಜನರ ಜೀವನವನ್ನು ಉತ್ತಮ ಪಡಿಸಿದ್ದು ಭಾರತದ ಸಂವಿಧಾನ. ಜಾತಿ, ಭೇದ, ಲಿಂಗ ತಾರತಮ್ಯ ಮಾಡದೇ ಎಲ್ಲರಿಗೂ ಸಮಾನವಾದ ಹಕ್ಕು ನೀಡಿದ್ದು ಭಾರತದ ಸಂವಿಧಾನ. ಅಂತಹ ಸಂವಿಧಾನವನ್ನು ನಾವು ಯಾವಗಾದರೂ ಓದಿಕೊಂಡಿದ್ದಿವಾ ಎಂದು ಅವರು ಪ್ರಶ್ನಿಸಿದರು.

ಮಹಾತ್ಮ ಗಾಂಧಿ ಅವರ ಅಹಿಂಸಾ ಮಾರ್ಗ, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ, ಬುದ್ಧನ ಶಾಂತಿ ಮಾರ್ಗ ಹಾಗೂ ಬಸವಣ್ಣನವರ ಸಮಾನತೆಯ ಮಾರ್ಗದಿಂದ ಭಾರತದ ಸಂವಿಧಾನ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದು ನಾಗಮೋಹನ್ ದಾಸ್ ಹೇಳಿದರು.

ಜಿಲ್ಲಾ ನ್ಯಾಯಾಧೀಶ ಆರ್.ಜೆ.ಸತೀಶ್ ಮಾತನಾಡಿ, ದೇಶದಲ್ಲಿ ಪ್ರತಿಭಟನೆ ಆದರೆ ಸಾಕು ಸಾರ್ವಜನಿಕ ಆಸ್ತಿ ಹಾನಿ ಮಾಡಲು ನಮ್ಮ ಜನ ಮುಂದಾಗುತ್ತಾರೆ. ನಮ್ಮ ಮಕ್ಕಳಿಗೆ ನಾವು ಮನೆಯಿಂದಲೆ ಸಂಸ್ಕೃತಿಯನ್ನು ಕಲಿಸಬೇಕು. ನಮ್ಮ ಮನೆಯನ್ನು ಮೊದಲು ನಾವು ಸರಿಪಡಿಸಿಕೊಳ್ಳಬೇಕು. ಸಂವಿಧಾನವನ್ನು ಪ್ರತಿಯೊಬ್ಬರು ಓದವುದು ನಮ್ಮ ಆದ್ಯ ಕರ್ತವ್ಯ ಎಂದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ನಮಗೆ ಸಂವಿಧಾನ ಅರಿವು ಇಲ್ಲದೆ ಸಾಕಷ್ಟು ತಪ್ಪುಮಾಡುತ್ತೇವೆ. ಮೂಲ ಸಂವಿಧಾನವನ್ನು ಬಹಳ ಜನರು ಇನ್ನುವರೆಗೆ ಓದಿಕೊಂಡಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ದೇಶದ ಭವಿಷ್ಯಕ್ಕಾಗಿ ಸಂವಿಧಾನದ ರಚನೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ, ಬೆಳಗಾವಿಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ಎ.ಬಿ.ಪುಂಡಲೀಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜ ವರವಟ್ಟಿ, ಸಂವಿಧಾನ ಓದು ಅಭಿಯಾನ ಸಮಿತಿಯ ಸದಸ್ಯ ಕೆ.ಎಚ್.ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಉಮಾ ಸಾಲಿಗೌಡರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News