ಸಂಕ್ರಾಂತಿ ಸಂಭ್ರಮ: ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಭರ್ಜರಿ ವ್ಯಾಪಾರ

Update: 2020-01-13 17:06 GMT

ಬೆಂಗಳೂರು, ಜ. 13: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಕಪ್ಪು ಮತ್ತು ಬಿಳಿ ಕಬ್ಬುಗಳ ರಾಶಿ ಪೂರೈಕೆಯಾಗಿದ್ದು, ಎಲ್ಲೆಡೆ ಕಳೆಗಟ್ಟಿದೆ.

ನಗರದ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಯಶವಂತಪುರ, ಕೋರಮಂಗಲ ಸೇರಿದಂತೆ ವಿವಿಧ ಮಾರುಕಟ್ಟೆಗಳು ಹಬ್ಬದ ಖರೀದಿ ಭರಾಟೆಯೂ ಜೋರಾಗಿ ನಡೆದಿದೆ. ಎಳ್ಳು-ಬೆಲ್ಲ ಮಿಶ್ರಣ, ಬಣ್ಣ ಬಣ್ಣದ ಸಕ್ಕರೆ ಅಚ್ಚು, ಅವರೆಕಾಯಿ, ಗೆಣಸು, ಕಡಲೇಕಾಯಿ ಖರೀದಿ ಜೋರಾಗಿ ನಡೆಯುತ್ತಿದೆ. ಮಾರುಕಟ್ಟೆಗಳಲ್ಲಿ ಸಿದ್ಧಪಡಿಸಿದ ಎಳ್ಳು-ಬೆಲ್ಲ ಮಿಶ್ರಣ, ಸಕ್ಕರೆ ಅಚ್ಚುಗಳ ಮಾರಾಟಕ್ಕಾಗಿ ಪ್ರತ್ಯೇಕ ಮಳಿಗೆ ತೆರೆಯಲಾಗಿದೆ. ಇದಲ್ಲದೆ ಪ್ರಾವಿಷನ್ ಸ್ಟೋರ್ ಮತ್ತಿತರ ಮಳಿಗೆಗಳಲ್ಲೂ ಮಾರಾಟವಾಗುತ್ತಿದೆ.

ಕಬ್ಬು ಪ್ರತಿ ಜೊತೆಗೆ 50-60 ರೂ., ಮಿಶ್ರಣ ಎಳ್ಳುಬೆಲ್ಲ ಪ್ಯಾಕ್ ಕೆ.ಜಿ.ಗೆ 250 ರೂ., ಎಳ್ಳು ಕೆ.ಜಿ.ಗೆ 170-260 ರೂ., ಅಚ್ಚು ಬೆಲ್ಲ 20, ಜೀರಿಗೆ ಮಿಠಾಯಿ 100 ಗ್ರಾಂ 20 ರೂ., ಸಕ್ಕರೆ ಕೆ.ಜಿ. 80-100 ರೂ., ಕಪ್ಪುಎಳ್ಳು 200-250 ರೂ. ವಿಳ್ಯೆದೆಲೆ ಕಟ್ಟು 20-30 ರೂ., ಕೊಬ್ಬರಿ ಕೆ.ಜಿ.ಗೆ 400-450 ರೂ. ಬೆಲೆ ಇದೆ.

ಹಬ್ಬಕ್ಕೆ ಎರಡು ದಿನ ಬಾಕಿ ಇದ್ದಂತೆಯೇ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕುಸಿದಿದೆ. ಈ ಬಾರಿ ಹೂವಿನ ಇಳುವರಿ ಉತ್ತಮವಾಗಿದ್ದು, ಧಾರಣೆ ಕಡಿಮೆ ಇದೆ. ಇತರೆ ಹಬ್ಬಗಳಲ್ಲಿ ದುಬಾರಿ ಎನಿಸುತ್ತಿದ್ದ ಸೇವಂತಿಗೆ, ಸುಗಂಧರಾಜ, ಗುಲಾಬಿ, ಮಲ್ಲಿಗೆಗೆ ಬೇಡಿಕೆ ಇಲ್ಲವಾಗಿದೆ. ಸೇವಂತಿ ಹೂ ಕೆ.ಜಿ.ಗೆ 40-50 ರೂ., ಕನಕಾಂಬರ ಕೆ.ಜಿ. 400 ರೂ., ದುಂಡು ಮಲ್ಲಿಗೆ ಕೆ.ಜಿ.ಗೆ 1,000 ರೂ.ಗೆ ಮಾರಾಟವಾಗುತ್ತಿವೆ. ಕಳೆದ ಎರಡು ವಾರಗಳಿಂದ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಬಿಸಿ ಮುಟ್ಟಿಸಿದ್ದ ಈರುಳ್ಳಿ, ಟೊಮೊಟೊ, ಹಣ್ಣುಗಳ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News