ಬೆಂಗಳೂರು: ಆರೆಸ್ಸೆಸ್ ಕಾರ್ಯಕರ್ತನಿಗೆ ಹಲ್ಲೆ; ಆರೋಪಿಗಳ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಿದ ಪೊಲೀಸರು

Update: 2020-01-17 13:06 GMT

ಬೆಂಗಳೂರು, ಜ.17: ಆರೆಸ್ಸೆಸ್ ಕಾರ್ಯಕರ್ತ ವರುಣ್ ಮೇಲಿನ ಮಾರಣಾಂತಿಕ ಹಲ್ಲೆ ಆರೋಪ ಪ್ರಕರಣ ಸಂಬಂಧ 6 ಜನ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರ್‌ಟಿನಗರ ನಿವಾಸಿ ಆಗಿರುವ ಟೈಲರ್ ಇರ್ಫಾನ್, ಸೆಯ್ಯದ್ ಅಕ್ಬರ್, ಸೆಯ್ಯದ್ ಸಿದ್ದಿಖ್ ಅಕ್ಬರ್, ಅಕ್ಬರ್ ಬಾಷಾ, ಸನಾವುಲ್ಲಾ ಹಾಗೂ ಸಾದಿಕ್ ಎಂಬುವರು ಬಂಧಿತರು ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರು ಎಂದು ಮಾಹಿತಿ ನೀಡಿದರು.

ಏನಿದು ಪ್ರಕರಣ?: ಸಿಎಎ ಮತ್ತು ಎನ್‌ಆರ್‌ಸಿ ಬೆಂಬಲಿಸಿ ಬೆಂಗಳೂರಿನ ಪುರಭವನ ಮುಂಭಾಗ ವಿವಿಧ ಸಂಘಟನೆಗಳಿಂದ ಜಾಗೃತಿ ಸಮಾವೇಶವನ್ನು ಡಿ.22ರಂದು ಏರ್ಪಡಿಸಲಾಗಿತ್ತು. ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವರುಣ್ ಎಂಬಾತ, ಮನೆಗೆ ತೆರಳುವಾಗ ಇಲ್ಲಿನ ಕುಂಬಾರ ಗುಂಡಿ ರಸ್ತೆಯಲ್ಲಿ ದುಷ್ಕರ್ಮಿಗಳ ತಂಡ, ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಸ್ಥಳೀಯರ ಸಹಾಯದಿಂದ ಗಾಯಾಳು ವರುಣ್ ಅನ್ನು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡಲಾಗಿತ್ತು. ಹಲ್ಲೆ ಪ್ರಕರಣ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಿ, ತನಿಖೆಗಾಗಿ ವಿಶೇಷ ತಂಡವೊಂದನ್ನು ರಚನೆ ಮಾಡಲಾಗಿತ್ತು ಎಂದು ಭಾಸ್ಕರ್ ರಾವ್ ವಿವರಿಸಿದರು.

ತನಿಖೆ ನಡೆಸಿದಾಗ ಬಂಧಿತ ಆರೋಪಿಗಳು ಎಸ್‌ಡಿಪಿಐ ಪಕ್ಷದ ಸಕ್ರಿಯ ಕಾರ್ಯಕರ್ತರು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಕೃತ್ಯವೆಸಗಿದ ನಂತರ, ಆರೋಪಿಗಳು ತಮ್ಮ ಬಟ್ಟೆ ತೆಗೆದು ರಸ್ತೆ ಮಧ್ಯೆ ಪೆಟ್ರೋಲ್ ಹಾಕಿ ಸುಟ್ಟಿದ್ದರು. ಅದೇ ರೀತಿ, ಮಾರಕಾಸ್ತ್ರಗಳನ್ನು ನೈಸ್ ರಸ್ತೆ ಬಳಿಯಿರುವ ಅಂಚೆಪಾಳ್ಯ ಕೆರೆಗೆ ಹಾಕಿದ್ದರು. ಹೆಲ್ಮೆಟ್‌ಗಳನ್ನು ರಾಮಮೂರ್ತಿ ನಗರದ ಹೊಂಡವೊಂದಕ್ಕೆ ಹಾಕಿ, ಪಾದರಕ್ಷೆಗಳನ್ನು ಬಾಣಸವಾಡಿ ಮೋರಿಯೊಂದರಲ್ಲಿ ಎಸೆದು ಪರಾರಿಯಾಗಿದ್ದರು ಎಂದು ಅವರು ಹೇಳಿದರು.

ಯುಎಪಿಎ, 800 ಸಿಸಿ ಟಿವಿ
ಆರೋಪಿಗಳ ಕೃತ್ಯ ಭೇದಿಸಲು ಸುಮಾರು 800 ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಯಿತು. ಬಂಧಿತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಮೊಕದ್ದಮೆ ದಾಖಲು ಮಾಡಿ, ತನಿಖೆ ಮುಂದುವರೆಸಲಾಗಿದೆ.

-ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ

‘10 ಸಾವಿರ ನೀಡುತ್ತಿದ್ದ ಎಸ್‌ಡಿಪಿಐ’
ಸಾರ್ವಜನಿಕವಾಗಿ ಗಲಾಟೆ, ಗಲಭೆ, ಬಸ್ಸುಗಳಿಗೆ ಕಲ್ಲು ತೂರಾಟ ನಡೆಸುವುದಕ್ಕಾಗಿಯೇ ಬಂಧಿತ ಆರೋಪಿಗಳಿಗೆ ಎಸ್‌ಡಿಪಿಐ ಪಕ್ಷದ ವತಿಯಿಂದ ಪ್ರತಿ ತಿಂಗಳು 10 ಸಾವಿರ ರೂ. ನೀಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆರೋಪ ಮಾಡಿದರು.

‘ಹಿಂದೂ ಮುಖಂಡನ ಹತ್ಯೆಗೆ ಸಂಚು’
ಬಂಧಿತ ಆರೋಪಿಗಳು ಹಿಂದೂ ಮುಖಂಡನನ್ನು ಕೊಲೆಗೈಯುವ ಉದ್ದೇಶದಿಂದ ಒಳಸಂಚು ರೂಪಿಸಿದ್ದು, ಸ್ಥಳದಲ್ಲಿ ಬಲವಾದ ಪೊಲೀಸ್ ಬಂದೋಬಸ್ತ್ ಇದ್ದುದರಿಂದ, ಅದು ಸಾಧ್ಯವಾಗದೇ ಇದ್ದ ಕಾರಣಕ್ಕೆ ವರುಣ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಆಯುಕ್ತರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News