ಹಾರ್ದಿಕ್ ಪಟೇಲ್ಗೆ ಬಿಜೆಪಿಯಿಂದ ನಿರಂತರ ಕಿರುಕುಳ: ಪ್ರಿಯಾಂಕಾ ಆರೋಪ
Update: 2020-01-19 14:57 GMT
ಹೊಸದಿಲ್ಲಿ, ಜ.19: ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ಗೆ ಬಿಜೆಪಿ ನಿರಂತರ ಕಿರುಕುಳ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
2015ರಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಹಾಜರಾಗಲು ವಿಫಲರಾದ ಕಾರಣಕ್ಕೆ ಹಾರ್ದಿಕ್ ಪಟೇಲರನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ, ಹಾರ್ದಿಕ್ ಪಟೇಲ್ ಯುವಜನತೆಗೆ ಉದ್ಯೋಗ, ರೈತರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಇವರಿಗೆ ಬಿಜೆಪಿ ನಿರಂತರ ಕಿರುಕುಳ ನೀಡುತ್ತಿದೆ ಎಂದಿದ್ದಾರೆ.
ಸಮಾಜದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಅವರಿಗೆ ಉದ್ಯೋಗ, ಸ್ಕಾಲರ್ಶಿಪ್ ಸೌಲಭ್ಯ ದೊರಕಿಸಿಕೊಡಲು ಹೋರಾಟ ನಡೆಸುತ್ತಿದ್ದಾರೆ. ರೈತರ ಪರವಾಗಿ ಅಭಿಯಾನ ನಡೆಸುತ್ತಿದ್ದು ಬಿಜೆಪಿ ಇದನ್ನು ದೇಶದ್ರೋಹ ಎನ್ನುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.