ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಸಿಯೂಟ ನೌಕರರ ಧರಣಿ

Update: 2020-01-21 16:07 GMT

ಬೆಂಗಳೂರು, ಜ.21: ಬಿಸಿಯೂಟ ಯೋಜನೆ ಖಾಸಗೀಕರಣ ವಿರೋಧಿಸಿ, ಕನಿಷ್ಠ ವೇತನ ಜಾರಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ಸಾವಿರಾರು ನೌಕರರಿಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಮಂಗಳವಾರ ನಗರದ ಸಂಗೊಳ್ಳಿ ರಾಯಣ್ಣ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವರೆಗೂ ಬೃಹತ್ ಮೆರವಣಿಗೆ ನಡೆಸಿ, ಬಿಸಿಯೂಟ ಖಾಸಗೀಕರಣಕ್ಕೆ ಮುಂದಾಗಿರುವ ಸರಕಾರಗಳ ಕ್ರಮವನ್ನು ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರ ಉದ್ಯಾನವನದಲ್ಲಿರುವ ಕಾಳಿದಾಸ ಮಾರ್ಗ ರಸ್ತೆಯಲ್ಲಿ ಮಕ್ಕಳ ಜತೆಗೆ ಸಾವಿರಾರು ಸಿಬ್ಬಂದಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಧರಣಿ ನಡೆಸುತ್ತಿದ್ದಾರೆ. ನಾಳೆಯೂ ಧರಣಿ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಕೆಗೆ ಸರಕಾರ ಮುಂದಾಗಲಿಲ್ಲ ಎಂದರೆ, ಅಹೋರಾತ್ರಿ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಐಟಿಯುಸಿ ರಾಜ್ಯಾಧ್ಯಕ್ಷ ಅನಂತಸುಬ್ಬರಾವ್, ಸುಪ್ರೀಂಕೋರ್ಟ್ ಕನಿಷ್ಠ ವೇತನ ನೀಡುವಂತೆ ಸೂಚನೆ ನೀಡಿದೆ. ಆದರೆ, ಆಳುವವರು, ಕೋರ್ಟ್ ಸೂಚನೆಯನ್ನು ಜಾರಿಗೆ ಮುಂದಾಗಿಲ್ಲ. ಕೇಳಿದರೂ ಕೇಳದಂತ ಕಿವುಡರಂತಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಕ್ಷಾಂತರ ಸಂಖ್ಯೆಯಲ್ಲಿರುವ ಬಿಸಿಯೂಟ ನೌಕರರು ಮಕ್ಕಳಿಗೆ ಪೌಷ್ಠಿಕ ಹಾಗೂ ಗುಣಮಟ್ಟದ ಆಹಾರ ನೀಡಲು ಶ್ರಮಿಸುತ್ತಾರೆ. ಆದರೆ, ಅವರು ನಿವೃತ್ತಿ ಬಳಕ ಯಾವುದೇ ಫಲವಿಲ್ಲದೆ ಮನೆಗೆ ಹೋಗಬೇಕು. ವೇತ ಹೆಚ್ಚಳ ಮಾಡುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿ ಸರಕಾರವನ್ನು ಒತ್ತಾಯಿಸಲಾಗಿದೆ. ಆದರೂ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. 2700 ರೂ.ಗಳಲ್ಲಿ ಜೀವನ ನಡೆಸಲಾಗುತ್ತಿದ್ದು. ಜೀವನ ದುಸ್ತರವಾಗಿದೆ. ಹೀಗಾಗಿ, ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸದ ಜನ ಪ್ರತಿನಿಧಿಗಳು: ಮಂಗಳವಾರ ಬೆಳಗ್ಗೆಯಿಂದ ಸಾವಿರಾರು ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲದೆ, ಸಣ್ಣ ಮಕ್ಕಳೊಂದಿಗೆ ಮನೆಗಳಿಂದ ತಂದಿದ್ದ ಊಟವನ್ನು ರಸ್ತೆಯಲ್ಲಿ ಕುಳಿತು ತಿಂದು ಬೆಳಗ್ಗೆಯಿಂದ ಸುಡು ಬಿಸಿಲಿನಲ್ಲಿ ಕುಳಿತಿದ್ದರು. ಆದರೆ, ಸರಕಾರದಿಂದ ಜನ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಥಳಕ್ಕೆ ಆಗಮಿಸಲಿಲ್ಲ. ಶಿಕ್ಷಣ ಸಚಿವರು ಸ್ಥಳಕ್ಕೆ ಆಗಮಿಸಿ ಭರವಸೆ ನೀಡುವವರೆಗೂ ಯಾವುದೇ ಕಾರಣಕ್ಕೂ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಾ ನಿರತರು ತಿಳಿಸಿದ್ದಾರೆ.

ಬೇಡಿಕೆಗಳು:

- ಕನಿಷ್ಠ ವೇತನ ಜಾರಿಗೆ ತರಬೇಕು.

- ಬಿಸಿಯೂಟ ಪೂರೈಕೆಯನ್ನು ಖಾಸಗಿ ಸಂಸ್ಥೆಗಳಿಗೆ ಕೊಡುವುದು ಕೈಬಿಡಬೇಕು.

- ಬಿಸಿಯೂಟ ತಯಾರಿಕರನ್ನು ಶಾಲಾ ಸಿಬ್ಬಂದಿಯನ್ನಾಗಿ ಪರಿವರ್ತಿಸಬೇಕು.

 - ಪ್ರತಿ ತಿಂಗಳ 5 ನೇ ತಾರೀಖಿನ ಒಳಗೆ ವೇತನ ಪಾವತಿ ಮಾಡಬೇಕು.

- ಬಿಸಿಯೂಟ ತಯಾರಿಕಾ ನೌಕರರನ್ನು ಕಾರ್ಮಿಕ ಕಾಯ್ದೆಯಡಿ ತರಬೇಕು.

- ಬಿಸಿಯೂಟ ನೌಕರರಿಗೂ ಪಿಎಫ್ ಮತ್ತು ಇಎಸ್‌ಐ ಜಾರಿ ಮಾಡಬೇಕು.

- ಎರಡು ಲಕ್ಷ ರೂ.ಗಳ ಅಪಘಾತ ಪರಿಹಾರ ಹಾಗೂ 5 ಲಕ್ಷ ರೂ.ಗಳ ಮರಣ ಪರಿಹಾರ ನೀಡುವುದು ಜಾರಿ ಮಾಡಬೇಕು.

- ದಸರಾ ರಜಾ ಹಾಗೂ ಬೇಸಿಗೆ ರಜೆ ದಿನಗಳಿಗೂ ವೇತನ ನೀಡಬೇಕು.

- ಉದ್ಯೋಗ ಭದ್ರತೆ ಒದಗಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News