ಸದಾನಂದ ಗೌಡರಿಂದ 'ದೇಶದ್ರೋಹಿ' ಎನಿಸಿಕೊಂಡವ ಸುರೇಶ್ ಕುಮಾರ್ ಅವರಿಗೆ 'ದೇಶಪ್ರೇಮಿ'!

Update: 2020-01-22 12:39 GMT

ಬೆಂಗಳೂರು, ಜ.22: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಬುಧವಾರ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ನನ್ನನ್ನು ದೇಶದ್ರೋಹಿ, ಪಾಕಿಸ್ತಾನ ಪರ ವಾದಿ ಎಂದು ಕೂಗು ಮಾರಿಯಂತೆ ಅರಚುತ್ತಿರುವ ಪ್ರಹ್ಲಾದ್ ಜೋಶಿ ಅವರೇ, ದಿನಬೆಳಗಾದರೆ ಪಾಕಿಸ್ತಾನವನ್ನೇ ಜಪಿಸುವ ನಿಮ್ಮ ಮೂಲ ಪಾಕ್ ಇರಬಹುದೇನೋ ನನಗೆ ಗೊತ್ತಿಲ್ಲ. ಪಾಕಿಸ್ತಾನದ ನೆಲ ಸ್ಪರ್ಶಿಸಿ, ಬಿರಿಯಾನಿ ತಿಂದು ಬಂದ ಪ್ರಧಾನಿಯ ಮಂತ್ರಿಮಂಡಲದಲ್ಲಿರುವ ನೀವು ದೇಶಭ್ರಷ್ಟರು. ನಾನು ಈ ಮಣ್ಣಿನವ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನ ಎಂಬ ದೇಶ ಈ ಭೂಪಟದಲ್ಲಿ ಇರದೇ ಹೋಗಿದ್ದರೆ ನೀವಿಲ್ಲಿ ಒಂದು ವೋಟು ಪಡೆಯಲೂ ಸಾಧ್ಯವಿರುತ್ತಿರಲಿಲ್ಲ. ಅದಕ್ಕಾಗಿಯೇ ಪಾಕ್ ನಾಮಸ್ಮರಣೆ ನಿಮ್ಮ ಕಾಯಕವಾಗಿಬಿಟ್ಟಿದೆ. ನಿಮ್ಮದೂ ರಾಜಕಾರಣವೇ? ನಿಮ್ಮದೂ ದೇಶ ಪ್ರೇಮವೇ? ಎಂಥ ಯಕಶ್ಚಿತ್ ಬದುಕು....? ಎಂದು ಅವರು ಪ್ರಶ್ನಿಸಿದ್ದಾರೆ.

ಸಮಾಜ ವಿರೋಧಿ ಕಾರಣಕ್ಕೆ ಭಾರತಾಂಬೆ ಮಡಿಲಲ್ಲಿ ಬಾಂಬ್ ಇಡುವವರು ದೇಶದ್ರೋಹಿಗಳೇ. ಚಿಕ್ಕಮಗಳೂರಿನ ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುತ್ತೇನೆ ಎಂದಿದ್ದ ನಿಮ್ಮದೇ ಸಿದ್ಧಾಂತ ಪ್ರತಿಪಾದಕರೂ ದೇಶದ್ರೋಹಿಗಳೇ ಅಲ್ಲವೇ ಬಿಜೆಪಿ ನಾಯಕರೇ? ಎಂದು ಕುಮಾರಸ್ವಾಮಿ ಕೇಳಿದ್ದಾರೆ.

ರೈತರ ಸಾಲಮನ್ನಾ, ಬಡವರ ಬಂಧು, ಸಾಲ ಋಣಮುಕ್ತ ಕಾಯ್ದೆ ಇವೆಲ್ಲವೂ ನಾನು ತಂದ ಕಾರ್ಯಕ್ರಮಗಳು. ಇವು ದೇಶವಿರೋಧಿಯೇ? ನಿಮ್ಮ ಸರಕಾರ ಜಾರಿಗೆ ತಂದಿರುವ ದೇಶಭಕ್ತಿಯ ಕಾರ್ಯಕ್ರಮಗಳನ್ನು ತೋರಿಸಿ ನೋಡೋಣ. ಬಡವ ಬಲ್ಲಿದರು ಬೇಕಿಲ್ಲದ ನಿಮಗೆ ಕೋಮು ಭಾವನೆಗಳೆ ಬಂಡವಾಳ. ನಿಮ್ಮಂಥ ದೇಶಪ್ರೇಮ(ದ್ರೋಹ) ನಮಗೆ ಬೇಕಿಲ್ಲ ಸುರೇಶ್ ಅವರೇ ಎಂದು ಅವರು ಕಿಡಿಗಾರಿದ್ದಾರೆ.

‘ಆತ’ನ ದೇಶಭಕ್ತಿಗೆ ಸಾಕ್ಷ ಕೊಡುವ ಸುರೇಶ್ ಕುಮಾರ್ ಅವರೇ, ನನ್ನ ಮನೆಗೆ ಒಮ್ಮೆ ಬನ್ನಿ. ನಿತ್ಯವೂ ಸಾವಿರಾರು ಮಂದಿ ನೆರವು ಕೋರಿ ನನ್ನ ಹುಡುಕಿ ಬರುತ್ತಾರೆ. ಬಾಲ್ಯದಿಂದ ಈವರೆಗೆ ಜಾತಿ, ಮತ, ಪಕ್ಷವೆಂದು ನೋಡದೆ ಲಕ್ಷಾಂತರ ಮಂದಿಗೆ ಹೆಗಲಾಗಿದ್ದೇನೆ. ಅದನ್ನು ನಾನು ವರ್ಣಿಸಿಕೊಳ್ಳಬೇಕಿಲ್ಲ. ಹಾಗೇ ನಿಮ್ಮಿಂದ ದೇಶ ಭಕ್ತಿ ತಿಳಿಯಬೇಕಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಸಾಲುಮರಗಳನ್ನು ಬೆಳೆಸಿದ ತಿಮ್ಮಕ್ಕ ನಿಮಗೆ ದೇಶಪ್ರೇಮಿ ಎನಿಸರು, ಕೆರೆ ಕಟ್ಟಿದ ಕಾಮೇಗೌಡ ನಿಮಗೆ ದೇಶಪ್ರೇಮಿಯಾಗರು. ರಾಜಕೀಯಕ್ಕಾಗಿ ಧರ್ಮಗಳನ್ನು ಬಳಸಿಕೊಳ್ಳುವ, ಕೋಮು ದಳ್ಳುರಿ ಬಿತ್ತುವವರಲ್ಲಿ ದೇಶಪ್ರೇಮ ಕಂಡ ನೀವು ನಿಮ್ಮಲ್ಲಿರುವ ಮಾನಸಿಕ ಭ್ರಷ್ಟಾಚಾರಿಯನ್ನು ಸಮಾಜದೆದುರು ಅನಾವರಣ ಮಾಡಿದ್ದೀರಿ ಎಂದು ಅವರು ಹೇಳಿದ್ದಾರೆ.

ದೇಶಪ್ರೇಮಕ್ಕೆ ರ‍್ಯಾಂಕ್ ಕೊಡುತ್ತಾರೆ ಸುರೇಶ್ ಕುಮಾರ್. ತಾಯಿ ಮೇಲಿನ ಪ್ರೀತಿಗೆ ರ‍್ಯಾಂಕ್ ನೀಡಲು ಸಾಧ್ಯವೇ? ರಾಜಕೀಯಕ್ಕೆ ದೇಶಪ್ರೇಮವನ್ನು ಬಳಸಿಕೊಂಡ ನಿಮ್ಮ ಬೌದ್ಧಿಕ ದಿವಾಳಿತನ ನಿಜಕ್ಕೂ ನನ್ನಲ್ಲಿ ಬೇಸರ ತರಿಸಿದೆ. ಸಜ್ಜನರಾದ ನಿಮ್ಮ ಮೇಲಿನ ನನ್ನ ಅಭಿಮಾನಕ್ಕೆ ಕುಂದುಂಟಾಗಿದೆ.ದೇಶಪ್ರೇಮದ ವಿಚಾರದಲ್ಲಿ ರ‍್ಯಾಂಕ್ ಕೊಟ್ಟರೆ ‘ಆತ’ ಕೊನೇ ರ‍್ಯಾಂಕ್ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಹೈದರಾಬಾದಿನ ಪಶುವೈದ್ಯೆ ಅತ್ಯಾಚಾರಿಗಳಲ್ಲೂ ಧರ್ಮ ಹುಡುಕಿದವ, ಮತ ಕೇಳಲು ವೀರಯೋಧ ಅಭಿನಂದನ್ ವರ್ದಮಾನ್ ಫೋಟೊ ಬಳಸಿದವ, ಪೂರ್ಣಪ್ರಜ್ಞಾ ವಿದ್ಯಾಪೀಠದ ಪವಿತ್ರ ಆವರಣವನ್ನು ರಾಜಕೀಯಕ್ಕೆ ಬಳಸಿಕೊಂಡವ, ಬಿಜೆಪಿ ನಾಯಕ ಸದಾನಂದಗೌಡರಿಂದಲೇ ದೇಶದ್ರೋಹಿ ಎನಿಸಿಕೊಂಡವ ಸುರೇಶ್ ಕುಮಾರ್ ಅವರಿಗೆ ದೇಶಪ್ರೇಮಿ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News