ನಿತ್ಯಾನಂದನಿಗೆ ನೋಟಿಸು ನೀಡಲು ಸಾಧ್ಯವಾಗಿಲ್ಲ :ನ್ಯಾಯಾಲಯಕ್ಕೆ ತಿಳಿಸಿದ ರಾಜ್ಯ ಪೊಲೀಸರು
ಬೆಂಗಳೂರು, ಫೆ. 3: ಅತ್ಯಾಚಾರ ಆರೋಪಿ ನಿತ್ಯಾನಂದ ಆಧ್ಯಾತ್ಮಿಕ ಪ್ರವಾಸದಲ್ಲಿ ಇದ್ದಾನೆಂದು ತಿಳಿಸಿರುವುದರಿಂದ ಆತನಿಗೆ ನೋಟಿಸು ಜಾರಿಮಾಡಲು ಸಾಧ್ಯವಾಗಿಲ್ಲ ಎಂದು ಕರ್ನಾಟಕ ಪೊಲೀಸ್ ಸೋಮವಾರ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ನಿತ್ಯಾನಂದನಿಗೆ ವೈಯಕ್ತಿಕ ನೋಟಿಸು ಜಾರಿ ಮಾಡಲು ಅಸಾಧ್ಯವಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ಅಫಿದಾವಿತ್ನಲ್ಲಿ ಪೊಲೀಸರು ತಿಳಿಸಿದ್ದಾರೆ. ಜಾಮೀನು ಅರ್ಜಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ನೋಟಿಸು ಜಾರಿ ಮಾಡುವಂತೆ ನ್ಯಾಯಾಲಯ ತನಿಖಾ ಸಂಸ್ಥೆಗೆ ಆದೇಶಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಬಿಡದಿ ಆಶ್ರಮದಲ್ಲಿರುವ ಕುಮಾರಿ ಅರ್ಚನಾನಂದ ಅವರಿಗೆ ನೋಟಿಸು ನೀಡಲಾಗಿದೆ. ಆದರೆ, ನಿತ್ಯಾನಂದ ಎಲ್ಲಿದ್ದಾನೆ ಎಂಬುದು ತನಗೆ ತಿಳಿದಿಲ್ಲ ಎಂದು ಕುಮಾರಿ ಅರ್ಚನಾನಂದ ಹೇಳಿದ್ದಾರೆ.
ಅಲ್ಲದೆ ಜನವರಿ 31ರಂದು ನೀಡಲಾದ ನೋಟಿಸನ್ನು ಸ್ವೀಕರಿಸುವಂತೆ ತನಗೆ ಬಲವಂತ ಮಾಡಲಾಗಿತ್ತು ಎಂದು ಹೇಳಿ ಅಫಿದಾವಿತ್ ಸಲ್ಲಿಸಿದ್ದಾರೆ ಎಂದು ಪೊಲೀಸ್ ಉಪ ಅಧೀಕ್ಷಕ ಬಲ್ರಾಜ್ ಬಿ. ನ್ಯಾಯಾಲಯಕ್ಕೆ ತಿಳಿಸಿದರು.