ಕಾವೇರಿ ನೀರಿನ ದರ ಏರಿಕೆಗೆ ಮುಂದಾದ ಜಲಮಂಡಳಿ: ಸರಕಾರಕ್ಕೆ ಮೂರು ಮಾದರಿ ಪ್ರಸ್ತಾವನೆ ರವಾನೆ

Update: 2020-02-07 18:09 GMT

ಬೆಂಗಳೂರು, ಫೆ.7: ಜಲಮಂಡಳಿಯು ಕಾವೇರಿ ನೀರಿನ ದರ ಏರಿಕೆ ಕುರಿತಂತೆ ಕೆಲ ತಿಂಗಳ ಹಿಂದೆ ಸಿದ್ಧಪಡಿಸಿದ್ದ ಶೇ.10 ರಿಂದ 20ರಷ್ಟು ದರ ಏರಿಸುವ ಪ್ರಸ್ತಾವನೆ ಕೈಬಿಟ್ಟು, ಜಲಮಂಡಳಿ ಹಾಗೂ ಸಾರ್ವಜನಿಕರಿಬ್ಬರಿಗೂ ಹೊರೆಯಾಗದಂತೆ ಮೂರು ಮಾದರಿ ಪ್ರಸ್ತಾವನೆ ಸಿದ್ಧಪಡಿಸಿದೆ.

ಮೊದಲ ಪ್ರಸ್ತಾವನೆಯು, ಜಲಮಂಡಳಿಯ ವಿವಿಧ ಯೋಜನೆಗಳಿಗಾಗಿ ಮಾಡಿರುವ ಎಲ್ಲ ಬಗೆಯ ಸಾಲ ತೀರಿಸುವ ಹಾಗೂ ನಿರ್ವಹಣೆ ವೆಚ್ಚ ಭರಿಸುವಂತಹ ದರ ಪರಿಷ್ಕರಣೆಯನ್ನು ಹೊಂದಿದೆ. ಎರಡನೇ ಪ್ರಸ್ತಾವನೆಯು ಹಣಕಾಸು ಸಂಸ್ಥೆಗಳಿಂದ ಮಾತ್ರ ಪಡೆದ ಸಾಲಗಳನ್ನು ತೀರಿಸುವಂತಹ ದರ ಪರಿಷ್ಕರಣೆ ಹಾಗೂ ಮೂರನೇ ಪ್ರಸ್ತಾವನೆಯು ನಿರ್ವಹಣೆ ವೆಚ್ಚ ಮಾತ್ರ ಭರಿಸುವಂತಹ ದರ ಪರಿಷ್ಕರಣೆ ಹೊಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ರಾಜ್ಯ ಸರಕಾರ ಈ ಮೂರು ಪ್ರಸ್ತಾವನೆ ಪರಿಶೀಲಿಸಿ, ಸೂಕ್ತವಾದುದನ್ನು ಆಯ್ಕೆ ಮಾಡಿ ಸಚಿವ ಸಂಪುಟ ಒಪ್ಪಿಗೆ ಪಡೆದು ದರ ಪರಿಷ್ಕರಣೆಗೆ ಸೂಚನೆ ನೀಡಲಿದೆ.

ಮೂರು ಬಗೆಯ ಪ್ರಸ್ತಾವಗಳನ್ನು ಸಿದ್ಧಪಡಿಸಿ ನಾಲ್ಕು ದಿನಗಳ ಹಿಂದೆ ಸರಕಾರಕ್ಕೆ ಸಲ್ಲಿಸಲಾಗಿದೆ. ಸರಕಾರವು ಶೀಘ್ರದಲ್ಲೇ ಜಲಮಂಡಳಿ ಅಧಿಕಾರಿಗಳೊಂದಿಗೆ ದರ ಪರಿಷ್ಕರಣೆಗೆ ಕಾರಣ ಕುರಿತು ಚರ್ಚಿಸಲಿದೆ. ಸಲ್ಲಿಸಿರುವ ಮೂರು ಪ್ರಸ್ತಾವನೆಗಳ ಪೈಕಿ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳನ್ನು ತೀರಿಸುವಂತಹ ದರ ಪರಿಷ್ಕರಣೆ ಆದ್ಯತೆ ನೀಡಬೇಕೆಂದು ಕೋರಲಾಗಿದೆ. ಸಾರ್ವಜನಿಕ ಹಿತೃಷ್ಟಿಯನ್ನು ಜಲಮಂಡಳಿ ಹೊಂದಿದ್ದು, ದರ ಪರಿಷ್ಕರಣೆ ಹೊರೆಯಾಗುವ ಆತಂಕ ಬೇಡ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News