2023ರಲ್ಲಿ ಜೆಡಿಎಸ್ ಅನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ: ಎಚ್.ಡಿ.ದೇವೇಗೌಡ

Update: 2020-02-11 13:42 GMT

ಬೆಂಗಳೂರು, ಫೆ.11: ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಅನೇಕ ಜನ ನನ್ನ ಸ್ನೇಹಿತರಿದ್ದಾರೆ. ಅವರ್ಯಾರಿಗೂ ಆ ಎರಡು ಪಕ್ಷದಲ್ಲಿ ಇರೋಕೆ ಇಷ್ಟ ಇಲ್ಲ. ಆದರೆ, ಕೆಲವು ಅಧಿಕಾರಶಾಹಿಗಳಿಗೆ ಹೆದರಿ ಆ ಪಕ್ಷದಲ್ಲಿ ಇದ್ದಾರೆಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾ ಪರಿವಾರದ ಹಲವು ನಾಯಕರು ಸದ್ಯ ಬೇರೆ ಬೇರೆ ಪಕ್ಷಗಳಲ್ಲಿ ಇದ್ದಾರೆ. ಅವರನ್ನೆಲ್ಲಾ ಒಗ್ಗೂಡಿಸುವಂತೆ ನಾಯಕರು ಮನವಿ ಮಾಡಿದ್ದಾರೆ. ಕೆಲ ರಾಷ್ಟ್ರೀಯ ನಾಯಕರು ನನ್ನನ್ನು ಸಂಪರ್ಕಿಸಿದ್ದು, ಒಗ್ಗೂಡುವಂತೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಮಗೆ ಸಮಯಾವಕಾಶ ಬೇಕು. ಡಿಸೆಂಬರ್ 2020ರೊಳಗೆ ನಮ್ಮ ಪಕ್ಷಕ್ಕೆ ಬರುವವರನ್ನೆಲ್ಲಾ ಒಗ್ಗೂಡಿಸಲು ಯತ್ನಿಸಲಾಗುತ್ತದೆ ಎಂದು ಹೇಳಿದರು.

ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಉತ್ತರ ಈಗ ಕೊಡುವುದಿಲ್ಲ. ನನಗೆ ವಯಸ್ಸು 82 ಇರಬಹುದು, ಆದರೆ ಆ ವಯಸ್ಸು ನನಗೆ ಯಾವುದೇ ಅಡ್ಡಿ ಆಗಲ್ಲ. 2023ರಲ್ಲಿ ಜೆಡಿಎಸ್ ಅನ್ನು ಮತ್ತೆ ಅಧಿಕಾರಕ್ಕೆ ತರಲಿದ್ದೇನೆ. ಅದಕ್ಕಾಗಿ ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.

2023ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡಲಿದ್ದೇನೆ. ಯಾರಿಗೂ ಹೆದರುವ ಅಗತ್ಯ ಇಲ್ಲ. ನಾನು ಹೋರಾಟ ಮಾಡಲು ಸಿದ್ಧನಿದ್ದೇನೆ. ಪಕ್ಷದ ಸಂಘಟನೆಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ. ಮಂತ್ರಿಗಳಿಗೆ, ಪೊಲೀಸರಿಗೆ ಹೆದರುವ ಅಗತ್ಯವಿಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ಕೈ ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ 45,000 ಮಹಿಳೆಯರನ್ನು ಒಟ್ಟುಗೂಡಿಸಿ ಅರಮನೆ ಮೈದಾನದಲ್ಲಿ ಮಹಿಳಾ ಸಮಾವೇಶ ಮಾಡಲಿದ್ದೇವೆ ಎಂದು ಅವರು ಹೇಳಿದರು.

ಅರವಿಂದ್ ಕೇಜ್ರಿವಾಲ್ ತಾನು ಕಟ್ಟಿದ ಪಕ್ಷಕ್ಕೆ ನಿಷ್ಠೆಯಿಂದ ಇದ್ದವರು. ಮೊದಲ ಬಾರಿ ಅಧಿಕಾರ ಕಳೆದುಕೊಂಡರು. ಎರಡನೇ ಬಾರಿ ಅಧಿಕಾರ ಪಡೆದರು. ಅವರ ನಿರಂತರ ಹೋರಾಟ ಪರಿಶ್ರಮದಿಂದ ಇವತ್ತು ಎಎಪಿ ಜಯ ಗಳಿಸಿದೆ. ಕೇಜ್ರಿವಾಲ್ ಜನರ ಸಾಮಾನ್ಯ ಸಮಸ್ಯೆಗಳತ್ತ ಗಮನ ಹರಿಸಿ ಜನಪರ ಯೋಜನೆಗಳನ್ನು ತಂದರು. ಶಿಕ್ಷಣ, ನೀರಾವರಿ, ಸಾರಿಗೆ ಸೇರಿದಂತೆ ಜನಸಾಮಾನ್ಯರ ಅಗತ್ಯತೆಗಳಿಗೆ ವಿಶೇಷ ಒತ್ತು ನೀಡಿದರು. ಅದರ ಪರಿಣಾಮವಾಗಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ.

-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News