ಹೊಸ ಮರಳು ನೀತಿ: ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಚರ್ಚೆ

Update: 2020-02-11 16:37 GMT

ಬೆಂಗಳೂರು, ಫೆ.11: ರಾಜ್ಯದ ಎಲ್ಲ ವರ್ಗದ ಜನರಿಗೆ ಹಾಗೂ ಸರಕಾರದ ಪ್ರಮುಖ ಯೋಜನೆಗಳಿಗೆ ಸುಲಭ ದರದಲ್ಲಿ ಮರಳು ದೊರೆಯುವಂತೆ ಮಾಡಲು ಸಚಿವ ಸಂಪುಟ ಉಪ ಸಮಿತಿಯ ಶಿಫಾರಸ್ಸಿನ ಅನ್ವಯ ರಚಿಸಲಾದ ಹೊಸ ಮರಳು ನೀತಿಯ ಕರಡಿನ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚರ್ಚೆ ನಡೆಸಿದರು.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಹೊಸ ಮರಳು ನೀತಿ ಕುರಿತು ಸಭೆ ನಡೆಸಿದ ಅವರು, ಈ ಮರಳು ನೀತಿಯ ಕರಡನ್ನು ಸಚಿವ ಸಂಪುಟದ ಅನುಮೋದನೆಗೆ ಮಂಡಿಸುವಂತೆ ಸೂಚಿಸಿದರು. ಅಲ್ಲದೇ, ನೂತನ ಮರಳು ನೀತಿಯಿಂದ ರಾಜ್ಯದಲ್ಲಿರುವ ಮರಳಿನ ಕೊರತೆಯನ್ನು ನೀಗಿಸಲು ಸಾಧ್ಯವಾಗಲಿದೆ ಎಂಬ ಆಶಾಭಾವವನ್ನು ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅಂದಾಜು 45 ದಶಲಕ್ಷ ಮೆಟ್ರಿಕ್ ಟನ್ ಮರಳಿನ ಬೇಡಿಕೆ ಇದೆ. ಈ ಪೈಕಿ 30 ದಶಲಕ್ಷ ಮೆಟ್ರಿಕ್ ಟನ್ ಮರಳನ್ನು ಎಂ ಸ್ಯಾಂಡ್ ಘಟಕಗಳಿಂದ ಹಾಗೂ ನದಿ ಪಾತ್ರಗಳಲ್ಲಿ, ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆ ಲೈಸೆನ್ಸ್ ಪ್ರದೇಶಗಳಿಂದ ಒಟ್ಟು 4.5 ದಶಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ಹೊರ ರಾಜ್ಯಗಳಿಂದ ಅಂದಾಜು 2 ಲಕ್ಷ ಮೆಟ್ರಿಕ್ ಟನ್ ಎಂ-ಸ್ಯಾಂಡ್ ಮತ್ತು ನದಿ ಮರಳು ರಾಜ್ಯದಲ್ಲಿ ಪೂರೈಕೆಯಾಗುತ್ತಿದೆ. ಬೇಡಿಕೆ ಮತ್ತು ಸರಬರಾಜಿಗೆ 8.5 ದಶಲಕ್ಷ ಮೆಟ್ರಿಕ್ ಟನ್ ಕೊರತೆಯನ್ನು ನೀಗಿಸಲು ಸರಕಾರ ಕರ್ನಾಟಕ ಉಪಖನಿಜ ರಿಯಾಯಿತಿ(ತಿದ್ದುಪಡಿ) ನಿಯಮಾವಳಿ 2017ನ್ನು ಜಾರಿಗೆ ತಂದಿದೆ.

ನೂತನ ಮರಳು ನೀತಿಯ ಮುಖ್ಯಾಂಶಗಳು: ಮೊದಲನೆ ಮತ್ತು ಎರಡನೆ ಶ್ರೇಣಿಯ ಹಳ್ಳ ತೊರೆಗಳಲ್ಲಿ ಲಭ್ಯವಿರುವ ಮರಳು ನಿಕ್ಷೇಪಗಳನ್ನು ಗುರುತಿಸಿ, ಸೂಕ್ತ ಅನುಮೋದನೆ ಪಡೆದು, ಸ್ಥಳೀಯ ಕಡಿಮೆ ವರಮಾನದ ವಸತಿ ಯೋಜನೆ, ಶೌಚಾಲಯ ನಿರ್ಮಾಣ ಹಾಗೂ ಇತರೆ ಸ್ಥಳೀಯ ನಿರ್ಮಾಣ ಕಾಮಗಾರಿಗಳಿಗೆ ಮಾತ್ರ ಖನಿಜ ರವಾನೆ ಪರವಾನಗಿಯೊಂದಿಗೆ ಮರಳನ್ನು ಗ್ರಾಮಪಂಚಾಯತ್ ಮೂಲಕ ಸರಕಾರ ನಿಗದಿಪಡಿಸಿದ ದರದಲ್ಲಿ ವಿಲೇವಾರಿ ಮಾಡುವುದು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲಘು ವಾಹನಗಳಲ್ಲಿ ಮಾತ್ರ ಮರಳು ಸಾಗಾಣಿಕೆಗೆ ಅನುಮತಿ ನೀಡುವುದು. 3, 4, 5ನೆ ಕ್ರಮಾಂಕದಂತೆ ಲಭ್ಯವಿರುವ ಮರಳನ್ನು ಪರವಾನಗಿ ಪಡೆದ ರಾಜ್ಯ ಸರಕಾರಿ ಸ್ವಾಮ್ಯದ ಸಂಸ್ಥೆ/ ನಿಗಮ, ಕಾರ್ಪೊರೇಷನ್‌ಗಳು ಮರಳು ಗಣಿಗಾರಿಕೆ, ಸಾಗಾಣಿಕೆ, ಸಂಗ್ರಹಣೆ ಮತ್ತು ಮರಳು ವಿಲೇವಾರಿ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸಬೇಕು.

ಮರಳನ್ನು ಬಳಕೆದಾರರಿಗೆ ಆನ್‌ಲೈನ್ ಬುಕಿಂಗ್ ಮೂಲಕ ತಲುಪಿಸುವ ವ್ಯವಸ್ಥೆ ಕಲ್ಪಿಸುವುದು. ಮರಳು ಸಾಗಾಣಿಕೆ ವಾಹನಗಳ ಚಲನ ವಲನಗಳ ಮೇಲೆ Sand Vehicle Tracking System ಮೂಲಕ ನಿಗಾ ವಹಿಸುವುದು. ಸರಕಾರಿ ಕಾಮಗಾರಿ, ಬೃಹತ್ ಯೋಜನೆಗಳನ್ನು ನಿರ್ವಹಿಸುವ ಖಾಸಗಿ ಸಂಸ್ಥೆ,ಗುತ್ತಿಗೆದಾರರು ಜಿಲ್ಲಾ ಮರಳು ಸಮಿತಿ ನಿರ್ಧರಿಸಿದ ದರವನ್ನು ಸರಕಾರಕ್ಕೆ ಪಾವತಿಸಿ ಮರಳು ಬ್ಲಾಕ್‌ಗಳನ್ನು ಮೀಸಲಿರಿಸಿ ಕಾಮಗಾರಿ, ಬೃಹತ್ ಯೋಜನೆಗಳಿಗೆ ಬಳಸಿಕೊಳ್ಳಬಹುದು.

ಹೊರರಾಜ್ಯಗಳಿಂದ ಸಾಗಣೆಯಾಗುವ ಮರಳನ್ನು ರಾಜ್ಯದಲ್ಲಿ ಮಾರಾಟ ಮಾಡಬೇಕಿದ್ದಲ್ಲಿ ಸರಕಾರ ನಿಗದಿಪಡಿಸಿರುವ ನಿಯಂತ್ರಣ ಶುಲ್ಕವನ್ನು ಪಾವತಿಸಬೇಕು. ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆಯನ್ನು ಪಟ್ಟಾದಾರರಿಗೆ ಅಥವಾ ಪಟ್ಟಾದಾರರಿಂದ ಪಡೆದ ಒಪ್ಪಿಗೆ ಪ್ರಮಾಣ ಪತ್ರವನ್ನು ಸಲ್ಲಿಸಿದವರಿಗೆ ಪರವಾನಗಿ ನೀಡುವುದು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧೀನದಲ್ಲಿ ಮಿನರಲ್ ಪ್ರೊಟೆಕ್ಷನ್ ಫೋರ್ಸ್ ಸ್ಥಾಪಿಸಿ ಅನಧಿಕೃತ ಮರಳು ಗಣಿಗಾರಿಕೆ ದಾಸ್ತಾನು ಮತ್ತು ಸಾಗಾಣಿಕೆ ವಿರುದ್ಧ ಕ್ರಮ ಜರುಗಿಸುವುದು. ಕರ್ನಾಟಕ ಉಪಖನಿಜ ರಿಯಾಯಿತಿ(ತಿದ್ದುಪಡಿ) ನಿಯಮಾವಳಿ 2016 ರಂತೆ ಟೆಂಡರ್ ಕಂ ಹರಾಜು ಮೂಲಕ ಮಂಜೂರಾದ ಮರಳು ಗುತ್ತಿಗೆ ಪ್ರದೇಶಗಳಲ್ಲಿ ಗುತ್ತಿಗೆ ಅವಧಿ ಮುಗಿಯುವವರೆಗೆ ಗಣಿಗಾರಿಕೆ ಮಾಡಲು ಅವಕಾಶ ಕಲ್ಪಿಸುವುದು.ಮರಳು ನೀತಿಯನ್ನು ಜಾರಿಗೊಳಿಸಲು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿಗಳು 1994 ಸೂಕ್ತ ತಿದ್ದುಪಡಿ ತರಲಾಗುವುದು. 

ಸಭೆಯಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಸಂದೀಪ್ ದವೆ, ಗೃಹ ಮತ್ತು ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಯ ಸಲಹೆಗಾರ ಎಂ.ಲಕ್ಷ್ಮಿ ನಾರಾಯಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News