ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಮಹತ್ವವಾದುದು: ಸಚಿವ ಸುರೇಶ್ ಕುಮಾರ್
ಬೆಂಗಳೂರು, ಫೆ.11: ಸರಕಾರದ ಹಲವು ಶಿಕ್ಷಣ ಹಾಗೂ ಆರೋಗ್ಯ ಕಾರ್ಯಕ್ರಮಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಮಹತ್ವವಾದುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ನಡೆದ ಲಯನ್ಸ್ ಸಂಸ್ಥೆ ಜಿಲ್ಲೆ 317 ಎಫ್ ಪ್ರಾಂತೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಲಯನ್ಸ್ ಸಂಸ್ಥೆ ಮತ್ತು ಬಿಬಿಎಂಪಿ ಜತೆಗೂಡಿ ಜನ ಸಮಾನ್ಯರಿಗೆ ದಂತ ಚಿಕಿತ್ಸಾ ಕೇಂದ್ರಗಳು, ಆರೋಗ್ಯ ಚಿಕಿತ್ಸೆ ಕೇಂದ್ರಗಳನ್ನು ನಿರ್ವಹಿಸಲು ಒಪ್ಪಂದ ಮಾಡಿಕೊಂಡಿರುವ ಶ್ಲಾಘನೀಯ ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆಯು ಉಚಿತ ನೇತ್ರ ಚಿಕಿತ್ಸೆ, ಆರೋಗ್ಯ ತಪಾಸಣಾ ಶಿಬಿರಗಳು, ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿದೆ. ಇಂದಿನ ಸಮಾವೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಸೇವಾ ಚಟುವಟಿಕೆಗಳ ಮುಖಾಂತರ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಕೆಲಸ ಎಂದು ನುಡಿದರು.
ಈ ಸಂದರ್ಭದಲ್ಲಿ ನಾರಾಯಣ ನೇತ್ರಾಲಯದ ಡಾ. ಭುಜಂಗ್ ಶೆಟ್ಟಿ, ವಿಲ್ಸನ್ ಥಾಮಸ್, ಪ್ರಾಂತೀಯ ಅಧ್ಯಕ್ಷ ಲಯನ್ ಬರ್ನಾಡ್ ಆರ್ ಚೆಟ್ಟಿ, ಲಯನ್ ಚಿನ್ನಪ್ಪ ಥಾಮಸ್, ಲಯನ್ ಪ್ರಕಾಶ್ ಟಿ.ಎನ್, ಲಯನ್ ರಾಮನಾಥನ್ ಎನ್, ಡಾ.ಸಿ.ವಿ.ಗೀತಾ ಸೇರಿದಂತೆ ಹಲವರಿದ್ದರು.