×
Ad

ಬೆಂಗಳೂರು: ಆಮ್ ಆದ್ಮಿ ಪಕ್ಷದಿಂದ ಜನ ಸಂಪರ್ಕ ಪಾದಯಾತ್ರೆ ಆರಂಭ

Update: 2020-02-12 23:01 IST

ಬೆಂಗಳೂರು, ಫೆ.12: ಆಮ್ ಆದ್ಮಿ ಪಕ್ಷದ ಬಿಬಿಎಂಪಿ ಚುನಾವಣಾ ತಯಾರಿ ಬಿರುಸು ಪಡೆದುಕೊಂಡಿದ್ದು, ಐದು ದಿನಗಳ ಕಾಲ ನಗರದಾದ್ಯಂತ ಪಾದಯಾತ್ರೆ ಅಭಿಯಾನವನ್ನು ಆರಂಭಿಸಿದೆ. ಇಂದು ನಗರದ ಮೌರ್ಯ ಸರ್ಕಲ್‌ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಪಾದಯಾತ್ರೆಗೆ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ಚಾಲನೆ ನೀಡಿದರು.

ನವೀನ ವಿಧಾನಗಳನ್ನು ಅಳವಡಿಸಿಕೊಂಡು, ಹೊಸ ಬೆಂಗಳೂರನ್ನು ನಿರ್ಮಿಸಲು ಸಂಕಲ್ಪತೊಟ್ಟಿರುವ ಆಮ್ ಆದ್ಮಿ ಪಕ್ಷವು, ಮುಂಬರುವ ಬಿಬಿಎಂಪಿ ಚುನಾವಣೆಗೆ ವ್ಯಾಪಕ ಕಾರ್ಯಯೋಜನೆ ರೂಪಿಸಿಕೊಂಡಿದೆ. ಎಲ್ಲ ವಾರ್ಡ್‌ಗಳಲ್ಲಿಯೂ ಹೊಸ ಬೆಂಗಳೂರು ಜನ ಸಂವಾದ ಕಾರ್ಯಕ್ರಮಗಳ ಮೂಲಕ ನಗರದ ಸಮಸ್ಯೆಗಳ ಪರಿಹಾರಕ್ಕೆ ನಾವೀನ್ಯ ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಹಲವಾರು ಸಮಸ್ಯೆಗಳಿಂದ ರೋಸಿಹೋಗಿರುವ ಬೆಂಗಳೂರಿಗರ ಸಮಸ್ಯೆಗಳು ಹಾಗೂ ಕುಂದು ಕೊರತೆಗಳನ್ನು ಅರಿತು, ಜನರ ಕನಸಿನ ಹೊಸ ಬೆಂಗಳೂರನ್ನು ಕಟ್ಟುವುದರಲ್ಲಿ ಪಕ್ಷದೊಂದಿಗೆ ಜನಸಾಮಾನ್ಯರನ್ನು ಒಳಗೊಳ್ಳುವ, ಬೆಂಗಳೂರನ್ನು ವಿಶ್ವದರ್ಜೆಯ ಮಹಾನಗರವನ್ನಾಗಿಸಲು ಅವರ ಸಲಹೆಗಳನ್ನು ಪಡೆಯುವ ಉದ್ದೇಶದಿಂದ ನಗರದಾದ್ಯಂತ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ತಿಳಿಸಿದರು.

ಪಕ್ಷದ ಕೆಲಸಗಳು, ಸಿದ್ಧಾಂತಗಳು, ಕಾರ್ಯಶೈಲಿಯನ್ನು ನೋಡಿ ಪಕ್ಷದ ಜೊತೆ ಕೈಜೋಡಿಸುವ ಜನರಿಗೆ ಪಕ್ಷದ ಸದಸ್ಯತ್ವವನ್ನು ನೀಡುವುದು ಹಾಗೂ ಸಮರ್ಥ, ಸೇವಾ ಮನೋಭಾವವುಳ್ಳ ಹಾಗೂ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾದ ಅಭ್ಯರ್ಥಿಗಳನ್ನು ಜನರ ಅಭಿಮತದೊಂದಿಗೆ ಆಯ್ಕೆ ಮಾಡಿ ಬಿಬಿಎಂಪಿ ಚುನಾವಣೆಯಲ್ಲಿ ಕಣಕ್ಕಿಳಿಸುವುದು ಪಾದಯಾತ್ರೆಯ ಉದ್ದೇಶವಾಗಿದೆ ಎಂದು ಬಿಬಿಎಂಪಿ ಚುನಾವಣಾ ಪ್ರಚಾರ ಉಸ್ತುವಾರಿ ಶಾಂತಲಾ ದಾಮ್ಲೆ ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನಿ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಪಕ್ಷದ ಬಿಬಿಎಂಪಿ ರಾಜಕೀಯ ಚಟುವಟಿಕೆಗಳ ಉಸ್ತುವಾರಿ ವಿ.ಲಕ್ಷ್ಮೀಕಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News