‘ದೇಶದಾದ್ಯಂತ 1.5 ಲಕ್ಷ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೇರಿಸಲು ಕ್ರಮ’

Update: 2020-02-24 16:56 GMT

ಬೆಂಗಳೂರು, ಫೆ.24: ರಾಜ್ಯದ 9 ಸಾವಿರ ಆರೋಗ್ಯ ಕೇಂದ್ರಗಳನ್ನೊಳಗೊಂಡಂತೆ ದೇಶದ 1.5 ಲಕ್ಷ ಆರೋಗ್ಯ ಕೇಂದ್ರಗಳನ್ನು 2022 ರ ವೇಳೆಗೆ ‘ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ’ಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ವಿಕಾಸ್ ಶೀಲ್ ತಿಳಿಸಿದ್ದಾರೆ.

ಸೋಮವಾರ ನಗರದ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಗುಣಮಟ್ಟದ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ಕೆಳಹಂತದಲ್ಲಿಯೇ ಗರಿಷ್ಠಮಟ್ಟದಲ್ಲಿ ಆರೋಗ್ಯ ಸೇವೆ ಒದಗಿಸವ ಉದೇಶದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ 2018ರಲ್ಲಿ ದೇಶದೆಲ್ಲೆಡೆ 5 ಸಾವಿರ ಜನಸಂಖ್ಯೆಯುಳ್ಳ ಗ್ರಾಮೀಣ ಪ್ರದೇಶದಲ್ಲಿರುವ ಉಪ-ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ‘ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ’ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ವಿವರಿಸಿದರು.

ದೇಶದಲ್ಲಿ ಈಗಾಗಲೇ 40 ಸಾವಿರದಷ್ಟು ಕ್ಷೇಮ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳ ಸಂಖ್ಯೆಯನ್ನು ಮುಂದಿನ ಎರಡು ವರ್ಷಗಳಲ್ಲಿ 1.5 ಲಕ್ಷಕ್ಕೇರಿಸಲಾಗುವುದು. ಅದರ ಭಾಗವಾಗಿಯೇ ಕರ್ನಾಟಕದಲ್ಲಿ ಈಗಾಲೇ 1930 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಸಂಖ್ಯೆಯನ್ನು 9 ಸಾವಿರಕ್ಕೇರಿಸಲಾಗುವುದು ಎಂದು ವಿಕಾಸ್ ಶೀಲ್ ಹೇಳಿದರು.

ಸೇವೆಗಳ ಹೆಚ್ಚಳ: ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ವಿಸ್ತರಣೆ ಜತೆಗೆ ಈ ಕೇಂದ್ರಗಳಲ್ಲಿ ಸದ್ಯ ಸಿಗುತ್ತಿರುವ ಏಳು ಆರೋಗ್ಯ ಸೇವೆಗಳನ್ನು ಕೆಲ ದಿನಗಳಲ್ಲಿಯೇ 12ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಹೆಚ್ಚುವರಿ ಸೇವೆಗಳಾಗಿ ಕ್ಷಯ, ಕುಷ್ಟ ರೋಗಗಳ ತಪಾಸಣೆ, ಆಹಾರ ಪರಿಶೀಲನೆ, ರೋಗ ಉಪಶಮನ ಹಾಗೂ ವಯೋವೃದ್ಧರ ಚಿಕಿತ್ಸಾ ಕೇಂದ್ರ ಆರಂಭಿಸಲಾಗುತ್ತಿದೆ ಎಂದರು.

ಸೇವೆಗಳ ಹೆಚ್ಚಳಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಲಿ ಇರುವ ಮಾನವ ಸಂಪನ್ಮೂಲ, ಉಪಕರಣಗಳು ಮತ್ತು ಉತ್ತಮವಾದ ಕಟ್ಟಡಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ವಿಕಾಸ್ ಶೀಲ್ ವಿವರಿಸಿದರು.

2019-20 ರ ಆರ್ಥಿಕ ವರ್ಷದ ಅಂತ್ಯದವರೆಗೆ ರಾಜ್ಯದಲ್ಲಿ 3339 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಮಂಜೂರು ಮಾಡಲಾಗಿದ್ದು, ಫೆಬ್ರವರಿಯಲ್ಲಿ 1930 ಕಾರ್ಯರೂಪಕ್ಕೆ ಬಂದಿವೆ. 2021-22 ರ ಅಂತ್ಯಕ್ಕೆ ರಾಜ್ಯದ ಎಲ್ಲ ಪಿಎಚ್‌ಸಿ ಮತ್ತು ಉಪ ಕೇಂದ್ರಗಳು ಉಚಿತ ಔಷಧ, ರೋಗ ನಿರ್ಣಯ ಮತ್ತು ಸಮುದಾಯವನ್ನು ತಲುಪುವ ಚಟುವಟಿಕೆಗಳೊಂದಿಗೆ ಕಾರ್ಯ ನಿರ್ವಹಿಸುತ್ತವೆ ಎಂದು ಹೇಳಿದರು.

ಕರ್ನಾಟಕಕ್ಕೆ 2017 ರಿಂದ 2025 ವರೆಗೆ ಸುಮಾರು 1.30 ಲಕ್ಷ ಜನರಲ್ಲಿ ಕ್ಷಯ ರೋಗದ ಪತ್ತೆಯನ್ನು ಗುರುತಿಸಲು ಗುರಿ ನೀಡಲಾಗಿತ್ತು. ಅದರಂತೆ 2019 ರಲ್ಲಿ 91,318 ಜನರನ್ನು ಗುರುತಿಸಿ, ಶೇ.70 ರಷ್ಟು ಗುರಿ ಸಾಧನೆ ಮಾಡಲಾಗಿದೆ. ಖಾಸಗಿ ವಲಯದಲ್ಲಿ ಶೇ.35 ರಷ್ಟು ಸಾಧನೆಯಾಗಿದೆ. ಜನವರಿ, ಜುಲೈ ಹಾಗೂ ಡಿಸೆಂಬರ್‌ನಲ್ಲಿ ನಡೆದ ಕ್ಷಯರೋಗ ಪ್ರಕರಣಗಳ ಶೋಧ ಕಾರ್ಯಕ್ರಮವನ್ನು ಸಕ್ರಿಯವಾಗಿ ಬಳಸಿಕೊಳ್ಳಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News