ಅನುಮಾನ, ಕಲ್ಪನೆ ಆಧಾರದಲ್ಲಿ ಪಿಐಎಲ್ ಸಲ್ಲಿಸಬೇಡಿ: ಹೈಕೋರ್ಟ್
Update: 2020-02-28 14:39 GMT
ಬೆಂಗಳೂರು, ಫೆ.28: ಅಕ್ರಮ ನಡೆದಿದೆ ಎಂದು ಅನುಮಾನ ಹಾಗೂ ಕಲ್ಪನೆಗಳ ಆಧಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಾಕುವುದನ್ನು ನಿಲ್ಲಿಸುವ ಅವಶ್ಯಕತೆ ಇದೆ ಎಂದು ಹೈಕೋರ್ಟ್ ಹೇಳಿದೆ.
2015ನೆ ಸಾಲಿನ ಕೆಎಎಸ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ನ್ಯಾಯಪೀಠ, ಅನುಮಾನದ ಆಧಾರದ ಮೇಲೆ ಪಿಐಎಲ್ಗಳನ್ನು ಹಾಕಿದರೆ, ಪಿಐಎಲ್ ಜಾರಿಗೆ ತಂದಿರುವ ಉದ್ದೇಶಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿತು.
ಅರ್ಜಿಯನ್ನು ವಾಪಸ್ ತೆಗೆದುಕೊಳ್ಳಿ ಇಲ್ಲವೇ ಈ ಅರ್ಜಿಯನ್ನು ವಜಾಗೊಳಿಸಲಾಗುವುದು ಎಂದು ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠವು ತಿಳಿಸಿತು. ಅರ್ಜಿಯನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಅರ್ಜಿದಾರರು ಹೇಳಿದ ಹಿನ್ನೆಲೆಯಲ್ಲಿ ಅರ್ಜಿಯನ್ನು ಇತ್ಯರ್ಥಪಡಿಸಿತು.