ಚೆಕ್ ಡ್ಯಾಂಗೆ ಟೆಂಡರ್ ಅವಶ್ಯಕತೆಯಿಲ್ಲ: ಸಚಿವ ಬಿ.ಸಿ.ಪಾಟೀಲ್
ಬೆಂಗಳೂರು, ಮಾ.11: ಅನುಷ್ಠಾನ ಮಾಡಲಾದ ಚೆಕ್ ಡ್ಯಾಂಗಳ ವೆಚ್ಚ 5 ಲಕ್ಷ ರೂ. ಒಳಗಿರುವುದರಿಂದ ಕೆಟಿಪಿಪಿ ಅನ್ವಯ ಟೆಂಡರ್ ಕರೆಯುವ ಅವಶ್ಯಕತೆಯಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು.
ಬುಧವಾರ ವಿಧಾನ ಪರಿಷತ್ನಲ್ಲಿ ಮಧ್ಯಾಹ್ನ ಭೋಜನ ನಂತರ ಆರಂಭವಾದ ಪ್ರಶ್ನೋತ್ತರ ವೇಳೆಯಲ್ಲಿ ಎನ್.ಅಪ್ಪಾಜಿಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರದ ಕೆಪಿಟಿಟಿ ನಿಯಮಾವಳಿ ಪ್ರಕಾರ 5 ಲಕ್ಷ ರೂ.ಗಿಂತಲೂ ಹೆಚ್ಚಿನ ಕಾಮಗಾರಿಗೆ ಇ-ಟೆಂಡರ್ ಮೂಲಕ ಹಾಗೂ 5 ಲಕ್ಷದೊಳಗಿನ ಕಾಮಗಾರಿಗೆ ರಾಜ್ಯದಲ್ಲಿ 1500 ಗ್ರಾಮ ಪಂಚಾಯತ್ ಅಧ್ಯಕ್ಷರ ಮಟ್ಟದಲ್ಲಿ ಜಲಾನಯನ ಸಮಿತಿಗಳಿವೆ. ಆ ಸಮಿತಿಯಿಂದ ಒಪ್ಪಿಗೆ ಪಡೆದು ಟೆಂಡರ್ ಕರೆಯಲಾಗುತ್ತದೆ ಎಂದರು.
ಕಳೆದ ಮೂರು ವರ್ಷಗಳಿಂದ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಜಲಾನಯನ ಅಭಿವೃದ್ಧಿ ಯೋಜನೆಯಡಿ 359 ಚೆಕ್ ಡ್ಯಾಂಗಳ ನಿರ್ಮಾಣ ಮಾಡಲಾಗಿದೆ. ಒಂದು ಚೆಕ್ ಡ್ಯಾಂ ನಿರ್ಮಾಣ ಮಾಡಲು ಸ್ಥಳ ಸೂಕ್ತತೆಗನುಗುಣವಾಗಿ ಗರಿಷ್ಠ 5 ಲಕ್ಷದವರೆಗೆ ಅಂದಾಜುಪಟ್ಟಿ ತಯಾರಿಸಲಾಗಿದೆ ಎಂದರು.
ಚೆಕ್ ಡ್ಯಾಂ ನಿರ್ಮಾಣ ಮಾಡಲು ನೀರು ಹರಿದು ಬರುವ ಕ್ಷೇತ್ರವು ಸಾಕಷ್ಟಿರಬೇಕು. ಚೆಕ್ ಡ್ಯಾಂ ನಲ್ಲಿ ಸಾಕಷ್ಟು ನೀರು ಸಂಗ್ರಹಣೆಗೆ ಅವಕಾಶವಿರಬೇಕು. ಯೋಜನಾ ವ್ಯಾಪ್ತಿಯ ಸಹಾಯಕ ಕೃಷಿ ಅಧಿಕಾರಿಯು ಜಾಗವನ್ನು ಗುರುತಿಸಿ ನಿಯಮಾನುಸಾರ ಅಂದಾಜುಪಟ್ಟಿ ತಯಾರಿಸಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಪರಿಶೀಲನೆಯೊಂದಿಗೆ ಮಂಜೂರಾತಿಗಾಗಿ ಉಪ ನಿರ್ದೇಶಕರಿಗೆ ಸಲ್ಲಿಸಲಾಗುತ್ತದೆ.
ನಂತರ ಸಂಬಂಧಪಟ್ಟ ಉಪ ಕೃಷಿ ನಿರ್ದೇಶಕರು ಪ್ರದತ್ತವಾದ ಅಧಿಕಾರದನ್ವಯ ಸದರಿ ಅಂದಾಜು ಪಟ್ಟಿಗಳನ್ನು ಪರಿಶೀಲಿಸಿ ತಾಂತ್ರಿಕ ಮಂಜೂರಾತಿ ನೀಡಲಾಗುತ್ತದೆ ಎಂದ ಅವರು, ಅನುಷ್ಠಾನ ಮಾಡಲಾದ ಚೆಕ್ ಡ್ಯಾಂಗಳ ವೆಚ್ಚ 5 ಲಕ್ಷ ರೂ. ಒಳಗಿರುವುದರಿಂದ ಕೆಟಿಪಿಪಿ ಅನ್ವಯ ಟೆಂಡರ್ ಕರೆಯುವ ಅವಶ್ಯಕತೆಯಿಲ್ಲದಿರುವ ಕಾರಣ ಟೆಂಡರ್ ಕರೆಯಲಾಗುವುದಿಲ್ಲ ಎಂದು ವಿವರಿಸಿದರು.