ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯದ ಭವಿಷ್ಯ ಕತ್ತಲು: ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ
ಬೆಂಗಳೂರು, ಮಾ. 19: ಕೇಂದ್ರದ ಅನುದಾನ ಕಡಿತದ ಹಿನ್ನೆಲೆಯಲ್ಲಿ ರಾಜ್ಯದ ಮುಂದಿನ ಭವಿಷ್ಯಕ್ಕೆ ಕತ್ತಲು ಆವರಿಸುವ ಆತಂಕ ಕಾಡುತ್ತಿದೆ. ಇನ್ನೂ ಕಾಲ ಮಿಂಚಿಲ್ಲ, ನವೆಂಬರ್ 20ಕ್ಕೆ ಹಣಕಾಸು ಆಯೋಗ ಅಂತಿಮ ವರದಿ ನೀಡಲಿದೆ. ಅಷ್ಟರೊಳಗೆ ಪ್ರಧಾನಿ, ಹಣಕಾಸು ಸಚಿವರ ಜೊತೆ ಚರ್ಚಿಸಿ ಉಳಿದ 4 ವರ್ಷಗಳಿಗಾದರೂ ನ್ಯಾಯಯುತ ಪಾಲು ನೀಡುವಂತೆ ಮನವರಿಕೆ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಆಯವ್ಯಯ ಅಂದಾಜುಗಳ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯದಿಂದ ಆಯ್ಕೆಯಾಗಿರುವ 25 ಮಂದಿ ಸಂಸದರು, ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು, ಎಲ್ಲ ಶಾಸಕರು ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು.
15ನೆ ಹಣಕಾಸು ಆಯೋಗವು ಜನಸಂಖ್ಯೆ ಆಧಾರದ ಮೇಲೆ ರಾಜ್ಯಗಳ ಪಾಲು ಹಂಚಿಕೆ ಮಾಡಿದೆ. ಜನಸಂಖ್ಯಾ ನಿಯಂತ್ರಣವನ್ನು ಕರ್ನಾಟಕ ಸರಿಯಾಗಿ ನಿಭಾಯಿಸಿರುವುದಕ್ಕೆ ಬೋನಸ್ ನೀಡುವ ಬದಲು ನಮ್ಮ ಪಾಲು ಕಡಿತಗೊಳಿಸಿ ಬರೆ ಹಾಕಿದ್ದಾರೆ. ಇದ್ಯಾವ ರೀತಿಯ ನ್ಯಾಯ ಎಂದು ಪ್ರಶ್ನಿಸಿದರು.
ಪ್ರಸಕ್ತ ಸಾಲಿನ ರಾಜಸ್ವ ಆದಾಯ 1,77,255 ಕೋಟಿ ರೂ.ಇದೆ. ಇದರಲ್ಲಿ ಬದ್ಧತಾ ಖರ್ಚು 1,55,191 ಕೋಟಿ ರೂ., ಅಂದರೆ ಬೇರೆ ಅಭಿವೃದ್ಧಿ ಕಾರ್ಯಗಳಿಗೆ 22,064 ಕೋಟಿ ರೂ.ಹಣ ಉಳಿಯುತ್ತೆ. ಹೀಗಾದರೆ ರಾಜ್ಯದ ನೀರಾವರಿ ಯೋಜನೆಗಳಿಗೆ ಸರಕಾರ ಹಣ ಎಲ್ಲಿಂದ ತರುತ್ತದೆ ಎಂದು ಸಿದ್ದರಾಮಯ್ಯ ಕೇಳಿದರು.
2023-24 ರ ವೇಳೆಗೆ ರಾಜಸ್ವ ಆದಾಯ 2,07,230 ಕೋಟಿ ರೂ. ಇರಲಿದ್ದು, ರಾಜಸ್ವ ಖರ್ಚು 2,54,062 ಕೋಟಿ ರೂ.ಗೆ ತಲುಪಲಿದೆ. ಇದರಿಂದ 46,832 ಕೋಟಿ ರೂ.ರಾಜಸ್ವ ಕೊರತೆ ಎದುರಾಗಲಿದೆ. ಹೀಗಾದಾಗ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಹೇಗೆ ಸಾಧ್ಯ? ಇದರಿಂದ ಇನ್ನಷ್ಟು ಸಾಲದ ಮೊರೆ ಹೋಗಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.
2019-20ನೆ ಸಾಲಿಗೆ ಕೇಂದ್ರದ ಅನುದಾನ 19,840 ಕೋಟಿ ರೂ.ಬರಬೇಕಿತ್ತು, ಆದರೆ, ಅದು 15,444 ಕೋಟಿ ರೂ.ಗೆ ಇಳಿದಿದೆ. 15ನೆ ಹಣಕಾಸು ಆಯೋಗದ ವರದಿ ಪ್ರಕಾರ 2023-24ಕ್ಕೆ ಕೇಂದ್ರದಿಂದ ಬರುವ ಅನುದಾನ 16,705 ಕೋಟಿ ರೂ.ಆಗಲಿದೆ. ವರ್ಷ ಕಳೆದಂತೆ ಈ ಅನುದಾನದ ಪ್ರಮಾಣ ನಮ್ಮ ರಾಜ್ಯಕ್ಕೆ ಮಾತ್ರ ಕಡಿಮೆಯಾಗುವುದು ಏಕೆ ಎಂದು ಸಿದ್ದರಾಮಯ್ಯ ಟೀಕಿಸಿದರು.
2013-14ರಲ್ಲಿ 1,04,000 ಕೋಟಿ ರೂ.ಗಳಿದ್ದ ಬಜೆಟ್ ಗಾತ್ರ 2018-19ಕ್ಕೆ 2,09,000 ಕೋಟಿ ರೂ.ಗೆ ಏರಿಕೆಯಾಗಿತ್ತು. 2018-19ರಲ್ಲಿ ನಮ್ಮ ಸರಕಾರ 41 ಸಾವಿರ ಕೋಟಿ ರೂ.ಸಾಲ ಮಾಡಿತ್ತು, ಈಗಿನ ಸರಕಾರ ರೂ. 52,918 ಕೋಟಿ ರೂ. ಸಾಲ ಮಾಡುತ್ತಿದೆ. ಈಗ ಹೇಳಲಿ ‘ಸಾಲ ಮಾಡಿ ಹೋಳಿಗೆ ತಿನ್ನುತ್ತಿರೋದು ಯಾರು’ ಅಂತ? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
‘ನೋಟು ರದ್ದತಿ, ಜಿಎಸ್ಟಿ ಜಾರಿ ನಂತರದಿಂದ ದೇಶದ ಜಿಡಿಪಿ ಇಳಿಮುಖದಲ್ಲಿ ಸಾಗುತ್ತಿದೆ. ಪ್ರಧಾನಿ ಮೋದಿಯವರು ಮೊದಲ ಬಾರಿ ಆಯ್ಕೆಯಾದಾಗ 5 ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದರು. ಈವರೆಗೆ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ಲೆಕ್ಕಕೊಡಲಿ’ ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದರು.
‘ನಿನ್ನೆ ಸಚಿವ ಸಿ.ಟಿ.ರವಿ ಭಾರತ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಬದಲಾಗಿದೆ ಅಂದಿದ್ದರು. ಹಾಗಾದರೆ ನಮ್ಮ ರಾಜ್ಯದ ತೆರಿಗೆ ಪಾಲು, ಜಿಎಸ್ಟಿ ಪರಿಹಾರ, ವಿಶೇಷ ಅನುದಾನಗಳಿಗೆ ಕೇಂದ್ರ ಕತ್ತರಿ ಹಾಕಿರುವುದು ಯಾಕೆ? ದೇಶದ ಜಿಡಿಪಿ ಕುಂಟುತ್ತಾ ಸಾಗುತ್ತಿರುವಾಗ ಆರ್ಥಿಕತೆ ಹೇಗೆ ಬೆಳೆಯುತ್ತದೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಂಪನ್ಮೂಲ ಕ್ರೋಡೀರಣಕ್ಕೆ ಆದಾಯದ ಮೂಲ ಹೆಚ್ಚಿಸಬೇಕು. ತೆರಿಗೆ ವಸೂಲಿ ಸಮರ್ಪಕವಾಗಿ ಮಾಡಬೇಕು. ಜಿಎಸ್ಪಿಯಲ್ಲಿನ ನ್ಯೂನತೆ ಸರಿಪಡಿಸಬೇಕು. ನೋಟು ರದ್ದತಿಯಿಂದ ಆಗಿರುವ ದುಷ್ಪರಿಣಾಮ ಸರಿಪಡಿಸಬೇಕು. ಅಲ್ಲದೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ನ್ಯಾಯಯುತ ಪಾಲು ಮತ್ತು ಅನುದಾನವನ್ನು ಪಡೆಯಲು ಶ್ರಮಿಸಬೇಕೆಂದು ಸಿದ್ದರಾಮಯ್ಯ ಸಲಹೆ ಮಾಡಿದರು.
‘ಹೊಸ ಉದ್ಯೋಗ ಸೃಷ್ಟಿಯ ಕತೆ ಇರಲಿ, ಕೋಟ್ಯಂತರ ಮಂದಿ ಇದ್ದ ಉದ್ಯೋಗವನ್ನೆ ಕಳೆದುಕೊಂಡಿದ್ದಾರೆ. ಬಿಜೆಪಿ ನಾಯಕರು ಒಮ್ಮೆ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ. ಅಲ್ಲಿನ ಬಹುತೇಕ ಉದ್ದಿಮೆಗಳು ಬಾಗಿಲು ಮುಚ್ಚುವ ಹಂತದಲ್ಲಿವೆ. ದೇಶದ ಆರ್ಥಿಕ ಸ್ಥಿತಿ ಪ್ರಗತಿ ಹಾದಿಯಲ್ಲಿದ್ದರೆ ಉದ್ದಿಮೆಗಳೇಕೆ ಬಾಗಿಲು ಮುಚ್ಚುತ್ತಿವೆ?’
-ಸಿದ್ದರಾಮಯ್ಯ, ವಿಪಕ್ಷ ನಾಯಕ