ಕಚೇರಿಯಲ್ಲೇ ಗುಂಡು ಹಾರಿಸಿ ಮುಖ್ಯಪೇದೆ ಆತ್ಮಹತ್ಯೆ

Update: 2020-03-26 13:04 GMT

ಬೆಂಗಳೂರು, ಮಾ.26: ರಾಜ್ಯ ಮೀಸಲು ಪಡೆಯ(ಕೆಎಸ್‍ಆರ್‍ಪಿ) ಮುಖ್ಯಪೇದೆಯೊಬ್ಬರು ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.

ಗುರುವಾರ ಮುಂಜಾನೆ ಈ ಘಟನೆ ನಡೆದಿದ್ದು, ಮಂಡ್ಯ ಮೂಲದ ಹುಚ್ಚೇಗೌಡ(56) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಹುಚ್ಚೇಗೌಡ, ಕೆಎಸ್‍ಆರ್‍ಪಿ 3ನೇ ಬೆಟಾಲಿಯನ್ ಕಚೇರಿಯಲ್ಲಿ ಗುರುವಾರ ಮುಂಜಾನೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬುಧವಾರ ಹುಚ್ಚೇಗೌಡ ಅವರ ಮೂಗಿನಿಂದ ರಕ್ತ ಬಂದಿತ್ತು. ಆಗ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಆದರೆ ಅವರು ವಿಶ್ರಾಂತಿ ತೆಗೆದುಕೊಳ್ಳದೆ ತಾನೇ ಕೆಲಸ ಮಾಡುವುದಾಗಿ ಹೇಳಿದ್ದರು ಎಂದು ತಿಳಿದುಬಂದಿದೆ.

ಮಡಿವಾಳದ ಕೆಎಸ್‍ಆರ್‍ಪಿ ವಸತಿ ಗೃಹದಲ್ಲಿ ವಾಸಿಸುತ್ತಿದ್ದ ಹುಚ್ಚೇಗೌಡ ಅವರಿಗೆ ಮೂವರು ಮಕ್ಕಳಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮಡಿವಾಳ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News