ಲಾಠಿ ಠಾಣೆಯಲ್ಲಿಟ್ಟು ಹೊರಬನ್ನಿ: ಪೊಲೀಸರಿಗೆ ಭಾಸ್ಕರ್ ರಾವ್ ಸೂಚನೆ
ಬೆಂಗಳೂರು, ಮಾ.27: ಕೊರೋನ ವೈರಸ್ ನಿಯಂತ್ರಣ ಸಂಬಂಧ ಲಾಕ್ಡೌನ್ ಮಾಡಿರುವ ಕುರಿತು ಲಾಠಿ ಠಾಣೆಯಲ್ಲಿಯೇ ಬಿಟ್ಟು ಮಾತಿನಲ್ಲೇ ಬುದ್ಧಿ ಹೇಳಿ ಜನರನ್ನು ಮನೆಗೆ ಕಳುಹಿಸುವಂತೆ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.
ಕೊರೋನ ನಿಯಂತ್ರಿಸಲು ಸರಕಾರ 21 ದಿನಗಳ ಕಾಲ ಲಾಕ್ಡೌನ್ ಆದೇಶ ಹೊರಡಿಸಿದ್ದು, ಇದನ್ನು ಉಲ್ಲಂಘಿಸಿ ಜನ ಗುಂಪು ಗುಂಪಾಗಿ ಹೊರ ಬರುತ್ತಿದ್ದರು. ನಿಯಮ ಮೀರಿದ ಜನರಿಗೆ ಬುದ್ಧಿ ಕಲಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದ ಪ್ರಕರಣಗಳು ಬೆಳಕಿಗೆ ಬಂದಿತ್ತು.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಗರ ಆಯುಕ್ತರ ಜೊತೆ ಸಭೆ ನಡೆಸಿದ ಬೆನ್ನಲ್ಲೇ ಎಲ್ಲ ಸಿಬ್ಬಂದಿಗೂ ಆದೇಶ ಹೊರಡಿಸಿದ್ದು, ಸಿಎಆರ್, ಕೆಎಸ್ಆರ್ಪಿ ಹೊರತುಪಡಿಸಿ ಉಳಿದ ಸಿಬ್ಬಂದಿ ಲಾಠಿಯನ್ನು ಠಾಣೆಯಲ್ಲಿಟ್ಟು ಸಮವಸ್ತ್ರದಲ್ಲಿ ಬಂದೊಬಸ್ತ್ ಮಾಡಬೇಕು. ಹಾಗೆ ಸಿಎಆರ್, ಕೆಎಸ್ಆರ್ಪಿ ಅವಶ್ಯಕತೆ ಇದ್ದರೇ ಮಾತ್ರ ಲಾಠಿ ಉಪಯೊಗಿಸಬೇಕು ಎಂದು ಸೂಚಿಸಿದ್ದಾರೆ.
ಪ್ರತಿದಿನ ಪತ್ರಿಕಾ ವಿತರಣೆ ಮಾಡುವರಿಗೆ, ಫುಡ್ ಡೆಲಿವರಿ, ದ್ವಿಚಕ್ರ ವಾಹನದವರಿಗೆ, ಪತ್ರಕರ್ತರಿಗೆ, ಡಯಾಲಿಸ್, ತುರ್ತು ಚಿಕಿತ್ಸೆಗೆ ಹೋಗುವವರಿಗೆ ಸಹಾಯ ಮಾಡಬೇಕು. ತರಕಾರಿ, ಮಾರುಕಟ್ಟೆ ತೆರೆದಿರುವಾಗ ದೈಹಿಕ ಅಂತರ ಇರುವಂತೆ ನೋಡಿಕೊಂಡು ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಕಿವಿಮಾತು ಹೇಳಿ ತಾಳ್ಮೆಯಿಂದ ನಡೆದುಕೊಳ್ಳಬೇಕೆಂದು ಆದೇಶಿಸಿದ್ದಾರೆ.