ಕೊರೋನ ಅಪ್‌ಡೇಟ್: ಒಂದೇ ದಿನ 227 ಹೊಸ ಪ್ರಕರಣ, ಐವರು ಮೃತ್ಯು

Update: 2020-03-31 04:43 GMT

ಹೊಸದಿಲ್ಲಿ : ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದರೂ, ಕೊರೋನ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇವೆ. ದೇಶಾದ್ಯಂತ ಸೋಮವಾರ ಒಂದೇ ದಿನ 227 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕನಿಷ್ಠ ಐದು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಈ ಮಧ್ಯೆ ದೇಶದಲ್ಲಿ ಭಯ ಮತ್ತು ಭೀತಿ ಕೊರೋನ ವೈರಸ್‌ಗಿಂತ ದೊಡ್ಡ ಸಮಸ್ಯೆಯಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ.

21 ದಿನಗಳ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯನ್ನು ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಮುಂದಿನ ತಿಂಗಳು ತುರ್ತು ಪರಿಸ್ಥಿತಿ ಘೋಷಣೆಯಾಗುತ್ತದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ ಸುಳ್ಳು ಎಂದಿದೆ.

ದೇಶದಲ್ಲಿ ಇದುವರೆಗೆ 32 ಮಂದಿ ಕೊರೋನ ವೈರಸ್‌ನಿಂದ ಮೃತಪಟ್ಟಿದ್ದು, ಸೋಮವಾರ ರಾತ್ರಿ 9.30ರ ವೇಳೆಗೆ ಪಾಸಿಟಿವ್ ಪ್ರಕರಣಗಳು 1251 ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. 1100 ಸಕ್ರಿಯ ಪ್ರಕರಣಗಳಿದ್ದರೆ, 100 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ.
ದೇಶದಲ್ಲಿ ಒಂದೇ ದಿನ 227 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 25 ಪ್ರಕರಣಗಳು ದೆಹಲಿಯಲ್ಲೇ ವರದಿಯಾಗಿವೆ. ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 97ಕ್ಕೇರಿದೆ. ಉಳಿದಂತೆ ರಾಜಸ್ಥಾನ, ಹರ್ಯಾಣ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಲ್ಲಿ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದಿವೆ.

ಹಲವು ಮಂದಿಗೆ ರೋಗ ಲಕ್ಷಣ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಡೀ ನಿಝಾಮುದ್ದೀನ್ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ. ಇತ್ತೀಚೆಗೆ ನಡೆದ ಧಾರ್ಮಿಕ ಸಮ್ಮೇಳನವೊಂದರಲ್ಲಿ ಭಾಗವಹಿಸಿದ್ದ ಹಲವು ಮಂದಿಗೆ ಸೋಂಕು ಲಕ್ಷಣ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶಿಸಿದ್ದಾರೆ.

ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ಆಗಮಿಸಿದ್ದ ಪ್ರತಿನಿಧಿಗಳು ಸೇರಿದಂತೆ 2000ಕ್ಕೂ ಅಧಿಕ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ದೆಹಲಿಯಲ್ಲಿ ವಲಸೆ ಕಾರ್ಮಿಕರಿಗೆ ವಸತಿ ಮತ್ತಿತರ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಶ್ರಮಿಸುತ್ತಿದ್ದು, 238 ಕಡೆಗಳಲ್ಲಿ ರಾತ್ರಿ ವಸತಿಗೆ ಅವಕಾಶ ಕಲ್ಪಿಸಿದೆ. ಜತೆಗೆ 11 ಶಾಲೆಗಳನ್ನು ಪ್ರತ್ಯೇಕವಾಗಿ ವಾಸ್ತವ್ಯಕ್ಕೆ ಒದಗಿಸಿದೆ.

ಈ ಮಧ್ಯೆ ಭಾರತದಲ್ಲಿ 100 ಪ್ರಕರಣಗಳಿಂದ 1000 ಪ್ರಕರಣಗಳಿಗೆ ಹೆಚ್ಚಲು 12 ದಿನಗಳು ತಗುಲಿದ್ದು, ಇತರ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹರಡುತ್ತಿರುವುದಕ್ಕಿಂತ ನಿಧಾನವಾಗಿ ರೋಗ ಹರಡುತ್ತಿದೆ. ಭಾರತದಲ್ಲಿ ಇನ್ನೂ ಕೊರೋನ ಸೋಂಕು ಸ್ಥಳೀಯ ಹರಡುವಿಕೆ ಹಂತದಲ್ಲಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್‌ವಾಲ್ ಸಮರ್ಥಿಸಿಕೊಂಡಿದ್ದಾರೆ.

ಯೂರೋಪ್‌ನಲ್ಲಿ 26 ಸಾವಿರಕ್ಕೂ ಹೆಚ್ಚು ಮಂದಿ ಈ ಸಾಂಕ್ರಾಮಿಕಕ್ಕೆ ಬಲಿಯಾಗಿದ್ದು, ವಿಶ್ವಾದ್ಯಂತ 35900 ಮಂದಿ ಮೃತಪಟ್ಟಿದ್ದಾರೆ. ಜಾಗತಿಕವಾಗಿ 7.4 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದ್ದು, 1.42 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಭಾರತದಲ್ಲಿ ಇದುವರೆಗೆ 38442 ಮಾದರಿ ಪರೀಕ್ಷೆ ನಡೆಸಲಾಗಿದ್ದು, ರವಿವಾರ ಒಂದೇ ದಿನ 3501 ಪ್ರಕರಣಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್‌ನ ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ರಮಣ್ ಆರ್. ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News