ನಿರ್ಲಕ್ಷ್ಯ ಧೋರಣೆಗೆ ನಿಝಾಮುದ್ದೀನ್ ಒಂದೇ ನಿದರ್ಶನವಲ್ಲ

Update: 2020-04-02 07:16 GMT

ಕಳೆದ ತಿಂಗಳು ದಿಲ್ಲಿಯಲ್ಲಿ ನಡೆದ ಸಾಮೂಹಿಕ ಧಾರ್ಮಿಕ ಕಾರ್ಯಕ್ರಮವೊಂದು ಕೊರೋನ ಪೀಡಿತ ಭಾರತಕ್ಕೆ ನಡುಕ ಹುಟ್ಟಿಸಿದೆ. ದಿಲ್ಲಿಯ ನಿಝಾಮುದ್ದೀನ್ ಪ್ರದೇಶದಲ್ಲಿ ಮಾರ್ಚ್ 13 ರಿಂದ 15ರವರೆಗೆ ಅಂತರ್ ರಾಷ್ಟ್ರೀಯ ಇಸ್ಲಾಮಿಕ್ ಧಾರ್ಮಿಕ ಸಂಘಟನೆ ತಬ್ಲೀಗಿ ಜಮಾಅತ್ ಆಯೋಜಿಸಿದ್ದ ಈ ಸಮಾವೇಶದಲ್ಲಿ ವಿದೇಶಿ ಪ್ರತಿನಿಧಿಗಳೂ ಸೇರಿ 2,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಆಗ ದಿಲ್ಲಿ ಸರಕಾರ ಬೃಹತ್ ಸಮಾವೇಶಗಳನ್ನು ನಡೆಸಬಾರದು ಎಂದು ಆದೇಶಿಸಿಯಾಗಿತ್ತು.

ಹಾಗಾಗಿ ಸಹಜವಾಗಿಯೇ ಈಗ ತಬ್ಲೀಗಿ ಜಮಾಅತ್ ಹಾಗೂ ಅದು ಆಯೋಜಿಸಿದ್ದ ಧಾರ್ಮಿಕ ಸಮಾವೇಶ ಭಾರೀ ಚರ್ಚೆಗೆ ಗುರಿಯಾಗಿದೆ. ಆದರೆ ಇಂತಹ ನಿರ್ಲಕ್ಷ್ಯ ಧೋರಣೆ ಭಾರತದಲ್ಲಿ ಯಾವುದೇ ಒಂದು ಸಮುದಾಯ ಅಥವಾ ಸಂಘಟನೆಗೆ ಸೀಮಿತವೇನೂ ಅಲ್ಲ. ದೇಶದ ರಾಷ್ಟ್ರಪತಿ ಸಹಿತ ಪ್ರತಿಷ್ಠಿತ ದೇವಾಲಯಗಳು, ಪ್ರಾಧಿಕಾರಗಳು, ಸಂಘ ಸಂಸ್ಥೆಗಳು ಹಾಗೂ ಇತರ ಕಾರ್ಯಕ್ರಮ ಆಯೋಜಕರು ದೇಶದ ವಿವಿಧೆಡೆ ಹೀಗೆ ಸಾಂಕ್ರಾಮಿಕಗಳನ್ನು ತಡೆಯಲು ಸರಕಾರ ನೀಡುವ ಆದೇಶಗಳನ್ನು ಹಾಗೂ ಸೂಚನೆಗಳನ್ನು ನಿರ್ಲಕ್ಷಿಸಿ ತಮಗೆ ಬೇಕಾದಂತೆ ನಡೆದುಕೊಂಡಿದ್ದಾರೆ. ಈ ಮೂಲಕ ಸಾವಿರಾರು ಮಂದಿಗೆ ಸೋಂಕು ಹರಡುವ ಅಪಾಯ ತಂದೊಡ್ಡಿದ್ದಾರೆ.

ಇಲ್ಲಿ ಕೆಲವು ಉದಾಹರಣೆಗಳಿವೆ:

ರಾಷ್ಟ್ರಪತಿ ಭವನ, ಹೊಸದಿಲ್ಲಿ: ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ( ಮಾರ್ಚ್ 8) ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಇದಕ್ಕೆ ಹಲವು ಗಣ್ಯರು ಸೇರಿದಂತೆ ದೊಡ್ಡ ಸಂಖ್ಯೆಯ ಜನರನ್ನು ಆಹ್ವಾನಿಸಲಾಗಿತ್ತು. ವಿಶೇಷವೆಂದರೆ, ದಿಲ್ಲಿಯಲ್ಲಿ ಕೊರೋನ ಸೋಂಕು ಪ್ರಕರಣಗಳು ಪತ್ತೆಯಾಗಿ ಹಲವರನ್ನು ಅದಕ್ಕಾಗಿ ಪರೀಕ್ಷೆ ಮಾಡುತ್ತಿರುವಾಗಲೇ ಈ ಕಾರ್ಯಕ್ರಮ ನಡೆದಿತ್ತು. ದಿಲ್ಲಿ ಸರಕಾರ ಆಗ ನಗರದಲ್ಲಿ ಪ್ರಾಥಮಿಕ ಶಾಲೆಗಳನ್ನು ಬಂದ್ ಮಾಡಲು ನಿರ್ಧರಿಸಿತ್ತು ಹಾಗೂ ಯಾವುದೇ ಬೃಹತ್ ಕಾರ್ಯಕ್ರಮಗಳನ್ನು ನಡೆಸದಂತೆ ಜನರಿಗೆ ಮನವಿ ಮಾಡಿತ್ತು. ಇದೇ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಅಧಿಕೃತ ಹೋಳಿ ಕಾರ್ಯಕ್ರಮವನ್ನು ರದ್ದು ಮಾಡಿದ್ದರು.

ಆಟುಕಲ್ ಪೊಂಗಲ, ತಿರುವನಂತಪುರಂ: ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದ ದಿನವೇ ಕೇರಳದ ತಿರುವನಂತಪುರಂನಲ್ಲಿ 10 ದಿನಗಳ ದೇವಸ್ಥಾನ ಉತ್ಸವ ಪ್ರಾರಂಭವಾಯಿತು. ಇದರಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು. ಈ ಉತ್ಸವ ಕೇರಳ ಸರಕಾರದ ಅನುಮತಿಯಿಂದಲೇ ನಡೆದಿತ್ತು.
ಈ ಕುರಿತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೇರಳ ಸರಕಾರ ಆಟುಕಲ್ ಪೊಂಗಲ ಉತ್ಸವಕ್ಕಾಗಿ ಹಲವು ತಿಂಗಳುಗಳಿಂದ ತಯಾರಿ ನಡೆಯುತ್ತಿತ್ತು. ಹಾಗಾಗಿ ಅದನ್ನು ನಿಲ್ಲಿಸಲು ಸಾಧ್ಯವಿರಲಿಲ್ಲ ಎಂದು ಹೇಳಿದೆ. ಅದೇ ದಿನ ಅಂದರೆ ಮಾರ್ಚ್ 8 ರಂದು, ಕೇರಳದ ಪಟ್ಟನಂತಿಟ್ಟದಲ್ಲಿ ಐದು ಕೊರೋನ ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು. ಮಾರ್ಚ್ 9 ರಂದು ಕೇರಳದ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 43 ಕ್ಕೇರಿತು.

ರಾಮನವಮಿ, ಅಯೋಧ್ಯೆ


ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಅನ್ನು ಘೋಷಿಸಿದರು. ಆದರೆ ಲಾಕ್ ಡೌನ್‌ನ ಮೊದಲ ದಿನವೇ ಪ್ರಧಾನಿ ಆದೇಶವನ್ನು ಉಲ್ಲಂಘಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ರಾಮನವಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಬಗ್ಗೆ ಟ್ವೀಟ್ ಕೂಡ ಮಾಡಿರುವ ಆದಿತ್ಯನಾಥ್ ಭವ್ಯ ರಾಮ ಮಂದಿರದ ಮೊದಲ ಹಂತ ಪೂರ್ಣಗೊಂಡಿದೆ ಎಂದು ಹೇಳಿದ್ದರು.

ಪಂಜಾಬ್ ಸಿಖ್ ಉತ್ಸವ

70 ವರ್ಷ ವಯಸ್ಸಿನ ಸಿಖ್ ಪ್ರವಚನಕಾರ ಒಬ್ಬರು ಮಾರ್ಚ್ 10 ರಿಂದ 12 ರವರೆಗೆ ಪಂಜಾಬ್ ನಲ್ಲಿ ನಡೆದ ಸಿಖ್ಖರ ಉತ್ಸವ ಒಂದರಲ್ಲಿ ಭಾಗವಹಿಸಿದ್ದರು. ಇದರಿಂದ ಸಾವಿರಾರು ಮಂದಿ ಕೊರೋನ ಸೋಂಕು ತಗಲುವ ಅಪಾಯಕ್ಕೆ ಬಿದ್ದರು. ಆ ಪ್ರವಚನಕಾರ ಮಾರ್ಚ್ 26 ರಂದು ಕೊರೋನ ಕಾರಣದಿಂದಲೇ ಮೃತಪಟ್ಟರು. ಅವರ ಸುಮಾರು 40,000 ಅನುಯಾಯಿಗಳು ಈಗ ಐಸೋಲೇಶನ್ ನಿಗಾದಲ್ಲಿದ್ದಾರೆ.

ಉತ್ತರ ಪ್ರದೇಶದ ಬರ್ತ್ ಡೇ ಪಾರ್ಟಿ


ಲಂಡನ್ ನಿಂದ ಮರಳಿದ ಗಾಯಕಿ ಕನಿಕಾ ಕಪೂರ್ ತಾನು ವಿದೇಶ ಪ್ರಯಾಣ ಮಾಡಿದ್ದ ವಿವರವನ್ನು ಬಹಿರಂಗಪಡಿಸದೆ ಬರ್ತ್ ಡೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅದೇ ಪಾರ್ಟಿಯಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ಪುತ್ರ ಸಂಸದ ದುಷ್ಯಂತ್ ಸಿಂಗ್ ಭಾಗವಹಿಸಿದ್ದರು. ಬಳಿಕ ಕನಿಕಾ ಕಪೂರ್ ಗೆ ಕೊರೋನಸೋಂಕು ಇರುವುದು ದೃಢವಾಯಿತು. ಇದರಿಂದ ಇಡೀ ಸಂಸತ್ತಿನಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು. ಇದಕ್ಕೆ ಕಾರಣ ಕನಿಕಾ ಅವರ ಪಾರ್ಟಿಯಲ್ಲಿ ಭಾಗವಹಿಸಿದ್ದ ಸಂಸದ ದುಷ್ಯಂತ್ ಬಳಿಕ ಸಂಸತ್ತಿನ ಕಲಾಪದಲ್ಲಿ ಭಾಗವಹಿಸಿದ್ದರು. ದುಷ್ಯಂತ್ ರಾಷ್ಟ್ರಪತಿ ಭವನದ ಕಾರ್ಯಕ್ರಮದಲ್ಲೂ ಭಾಗವಹಿಸಿ ರಾಷ್ಟ್ರಪತಿಯವರನ್ನು ಭೇಟಿ ಮಾಡಿದ್ದರು. ಇದರಿಂದ ರಾಷ್ಟ್ರಪತಿ ಸಹಿತ ಸಂಸದರು ಕೊರೋನ ಸೋಂಕಿನ ಭಯಕ್ಕೆ ಬೀಳಬೇಕಾಯಿತು. ಇದೇ ಬರ್ತ್ ಡೇ ಪಾರ್ಟಿಯಲ್ಲಿ ಉತ್ತರ ಪ್ರದೇಶದ ಸಚಿವ ಜೈ ಪ್ರತಾಪ್ ಸಿಂಗ್ ಹಾಗೂ ಆಮ್ ಆದ್ಮಿಯ ಸಂಜಯ್ ಸಿಂಗ್ ಕೂಡ ಭಾಗವಹಿಸಿದ್ದರು.

ಬೆಳಗಾವಿ ಮದುವೆ ಕಾರ್ಯಕ್ರಮದಲ್ಲಿ ಸಿಎಂ


ಮಾರ್ಚ್ 15ರಂದು ನಡೆದಿದ್ದ ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿಯ ವಿವಾಹ ಕಾರ್ಯಕ್ರಮವೊಂದರಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾಗಿದ್ದರು. ಇದಕ್ಕೆ ಎರಡು ದಿನ ಮೊದಲೇ ಸರಕಾರ ಒಂದು ವಾರ ಎಲ್ಲಾ ರೀತಿಯ ಕಾರ್ಯಕ್ರಮ ನಿಷೇಧಿಸಿತ್ತು. ದೊಡ್ಡ ಸಂಖ್ಯೆಯ ಜನರು ಸೇರಿದ್ದ ಈ ವಿವಾಹದಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ, ಬಸವರಾಜ ಬೊಮ್ಮಾಯಿ, ಶ್ರೀಮಂತ ಪಾಟೀಲ್, ಶೋಭಾ ಕರಂದ್ಲಾಜೆ ಭಾಗಿ.

(ನಿಹಾರಿಕಾ ಶರ್ಮ ಅವರ ಲೇಖನ ಇಲ್ಲಿಗೆ ಮುಕ್ತಾಯ).


ಇನ್ನಷ್ಟು ಉದಾಹರಣೆಗಳು

ಜನತಾ ಕರ್ಫ್ಯೂ ದಿನ ಡಿಸಿ, ಎಸ್ಪಿ ಮೆರವಣಿಗೆ

ಜನತಾ ಕರ್ಫ್ಯೂ ದಿನ ಸಂಜೆ ಐದು ಗಂಟೆಗೆ ಮನೆಯ ಬಾಲ್ಕನಿಯಿಂದ ಕೊರೋನ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗಾಗಿ ಚಪ್ಪಾಳೆ ತಟ್ಟಿ ಎಂದು ಹೇಳಿದ್ದರೆ ಉತ್ತರ ಪ್ರದೇಶದ ಪಿಲಿಭಿತ್ ನ ಜಿಲ್ಲಾಧಿಕಾರಿ ವೈಭವ್ ಶ್ರೀವಾಸ್ತವ ಹಾಗೂ ಎಸ್ಪಿ ಅಭಿಷೇಕ್ ದೀಕ್ಷಿತ್ ಜನರೊಂದಿಗೆ ಮೆರವಣಿಗೆಯಲ್ಲಿ ಸಾಗುವ ಮೂಲಕ ಜನತಾ ಕರ್ಫ್ಯೂ ಉದ್ದೇಶವನ್ನೇ ವಿಫಲಗೊಳಿಸಿದ್ದರು. ಇವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪಿಲಿಭಿತ್ ಬಿಜೆಪಿ ಸಂಸದ ವರುಣ್ ಗಾಂಧಿಯವರೇ ಆಗ್ರಹಿಸಿದ್ದರು.

ಮಾರ್ಚ್ 19ರಂದು ಮಾತನಾಡಿದ್ದ ಪ್ರಧಾನಿ ಸಾಮಾಜಿಕ ಅಂತರ ಕಾಪಾಡಬೇಕೆಂದು ತಿಳಿಸಿದ್ದರು. ಆದರೆ ಮಾರ್ಚ್ 23ರವರೆಗೆ ಸಂಸತ್ ಕಲಾಪ ನಡೆಯುತ್ತಿತ್ತು. ಕೊರೋನ ಭೀತಿ ಇರುವುದರಿಂದ ಸಂಸತ್ ಕಲಾಪ ನಿಲ್ಲಿಸಬೇಕೆಂದು ಬಿಜೆಪಿ ಸಂಸದರೇ ಪತ್ರ ಬರೆದಿರುವ ಕುರಿತು ಮಾರ್ಚ್ 17 ರಂದು ನಡೆದ ಪಕ್ಷದ ಸಂಸದೀಯ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ ಸಂಸತ್ ಕಲಾಪ ನಿಗದಿಯಂತೆ ಎಪ್ರಿಲ್ 3 ರವರೆಗೂ ನಡೆಯಲಿದೆ ಎಂದು ಹೇಳಿದ್ದರು. ಈ ಬಗ್ಗೆ ವಿಪಕ್ಷ ನಾಯಕರೂ ಕೇಂದ್ರದ ಧೋರಣೆಯನ್ನು ಟೀಕಿಸಿದ್ದರು.

ಫೋಟೊ ಕೃಪೆ: qz.com

ಮಾ.22ರಂದು ಪ್ರಧಾನಿ ಕರೆ ನೀಡಿದ್ದ ‘ಚಪ್ಪಾಳೆ ಕೃತಜ್ಞತೆ’ ವೇಳೆ ದೇಶಾದ್ಯಂತ ಸಂಪೂರ್ಣ ನಿಯಮ ಉಲ್ಲಂಘನೆ, ದೇಶದ ಹಲವೆಡೆ ಗುಂಪುಗುಂಪಾಗಿ ಸೇರಿದ ಜನರು.

ಮಾರ್ಚ್ 19 ರಂದು ಪ್ರಧಾನಿ ಮೋದಿಯಿಂದ ಮಾರ್ಚ್ 22 ರಂದು ಜನತಾ ಕರ್ಫ್ಯೂ ಆಚರಿಸಲು ಕರೆ. ಮಧ್ಯಪ್ರದೇಶದಲ್ಲಿ ಮಾ.23ರಂದು ವಿಶ್ವಾಸಮತಯಾಚನೆ. ಮಾ.23: ವಿಶ್ವಾಸಮತಯಾಚನೆಯಲ್ಲಿ ಗೆದ್ದ ಶಿವರಾಜ್ ಸಿಂಗ್ ಚೌಹಾಣ್. ಸಾಮಾಜಿಕ ಅಂತರ ನಿರ್ದೇಶ ಗಾಳಿಗೆ ತೂರಿದ ಬಿಜೆಪಿ ನಾಯಕರು. ಮಾರ್ಚ್ 23: ಶಿವರಾಜ್ ಸಿಂಗ್ ಚೌಹಾಣ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಶಾಸಕರ ದಂಡು.

ಫೋಟೋ ಕೃಪೆ: Indiatoday.in
ಮಾ. 15ರಂದು ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಕಚೇರಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ನಾಯಕರು, ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ನೀಡಲಾಯಿತು.

          (Photo: Twitter/@rashtrapatibhvn)

ಮಾರ್ಚ್ 21ರಂದು ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಮೇರಿ ಕೋಮ್. ಮಾ.13ರಂದು ಭಾರತಕ್ಕೆ ಜೋರ್ಡನ್ ನಿಂದ ವಾಪಸಾಗಿದ್ದರು. ಮಾ.18ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಉಪಾಹಾರ ಕೂಟದಲ್ಲಿ ಭಾಗಿ.

ಮಾರ್ಚ್ 15ರಂದು ಅಮೆರಿಕದಿಂದ ಬಂದು ಕ್ವಾರಂಟೈನ್ ಉಲ್ಲಂಘಿಸಿದ ಟಿಆರ್ ಎಸ್ ಶಾಸಕ ಕೊನೆರು ಕೊನಪ್ಪಪೂಜೆಯಲ್ಲಿ ಭಾಗಿ.

ಸಿಂಗಾಪುರದಿಂದ ಹಿಂದಿರುಗಿ ಕ್ವಾರಂಟೈನ್ ಉಲ್ಲಂಘಿಸಿದ ಕೇರಳದ ಕೊಲ್ಲಂ ಜಿಲ್ಲೆಯ ಸಬ್‌ಕಲೆಕ್ಟರ್ ಅಧಿಕಾರಿ ಅನುಪಮ್ ಮಿಶ್ರಾ ಕ್ವಾರಂಟೈನ್ ತಪ್ಪಿಸಿಕೊಂಡು ಬೆಂಗಳೂರಿಗೆ. ಅಲ್ಲಿಂದ ಉತ್ತರ ಪ್ರದೇಶದ ಕಾನ್ಪುರ್‌ಗೆ.

►ಮಾರ್ಚ್ 28ರಂದು ಸಚಿವ ಈಶ್ವರಪ್ಪರಿಂದ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ.
►ಕೊರೋನ ಜಾಗೃತಿಗಾಗಿ ಗುಂಪಲ್ಲಿ ಆಗಮಿಸಿದ ಈಶ್ವರಪ್ಪ.

Writer - ನಿಹಾರಿಕಾ ಶರ್ಮ, qz.com

contributor

Editor - ನಿಹಾರಿಕಾ ಶರ್ಮ, qz.com

contributor

Similar News