ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳಿಗೆ ಸರಕಾರಿ ಜಾಹೀರಾತು ನೀಡಲು ಡಾ.ಅಶ್ವಥ್ ನಾರಾಯಣ ಸೂಚನೆ
ಬೆಂಗಳೂರು, ಎ.3: ಎಲ್ಲ ವಸ್ತುಗಳ ಬೆಲೆಗಳು ಗಗನಕ್ಕೆ ಏರಿದ್ದು, ಇಂತಹ ಸಂದರ್ಭದಲ್ಲಿ ದಿನ ಪತ್ರಿಕೆಗಳನ್ನು ನಡೆಸುವುದು ಕಷ್ಟವಿದೆ. ಹೀಗಾಗಿ, ಜಿಲ್ಲಾ ಮತ್ತು ಪ್ರಾದೇಶಿಕ ಪ್ರತಿಕೆಗಳಿಗೂ ಕೊರೋನ ವೈರಸ್ ಜಾಗೃತಿಯ ಜಾಹೀರಾತು ಸೇರಿ ಇತರೆ ಸರಕಾರಿ ಜಾಹೀರಾತುಗಳನ್ನು ಕೊಡುವಂತೆ ವಾರ್ತಾ ಇಲಾಖೆಗೆ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಸೂಚನೆ ನೀಡಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳಿಗೂ ಜಾಹೀರಾತು ನೀಡಲು ಸೂಚಿಸಬೇಕೆಂದು ಸಿಎಂ, ಡಿಸಿಎಂಗೆ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಡಿಸಿಎಂ ಡಾ.ಅಶ್ವಥ್ ನಾರಾಯಣ ಅವರು, ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳಿಗೂ ಜಾಹೀರಾತು ನೀಡಬೇಕೆಂದು ವಾರ್ತಾ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಅವರಿಗೆ ಸೂಚನೆ ನೀಡಿದರು.
ಪತ್ರಕರ್ತರನ್ನು ಕೇಂದ್ರ ಸರಕಾರದ ವಿಮಾ ಯೋಜನೆ ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರಕಾರಕ್ಕೆ ಸಂಘ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಡಿಸಿಎಂ ಡಾ.ಅಶ್ವಥ್ ನಾರಾಯಣ ಅವರು ರಾಜ್ಯ ಸರಕಾರದಿಂದಲೂ ಈ ಬಗ್ಗೆ ಶಿಫಾರಸ್ಸು ಮಾಡುವ ಭರವಸೆಯನ್ನು ನೀಡಿದರು.