ರಾಜ್ಯವೇ ಕೋಮು ದಳ್ಳುರಿಗೆ ಬಲಿಯಾಗುವ ಅಪಾಯವಿದೆ: ಕುಮಾರಸ್ವಾಮಿ ಎಚ್ಚರಿಕೆ

Update: 2020-04-08 17:31 GMT

ಬೆಂಗಳೂರು, ಎ. 8: 'ಸಮುದಾಯಗಳ ನಡುವೆ ಪರಸ್ಪರ ಸಂಘರ್ಷಕ್ಕೆ ಪ್ರಚೋದಿಸುವ ದುಷ್ಕರ್ಮಿಗಳ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ತಾಳಿದ ದೃಢ ನಿಲುವು ಸೂಕ್ತ ಮತ್ತು ಸ್ವಾಗತಾರ್ಹ. ಆದರೆ, ಯಡಿಯೂರಪ್ಪನವರ ಸ್ಪಷ್ಟ ಎಚ್ಚರಿಕೆಯ ನಂತರವೂ ಅನೇಕ ಮಾಧ್ಯಮಗಳು ಸಂಕುಚಿತ ಮನೋಭಾವನೆಯ ದ್ವೇಷ ಕಾರಿಕೊಳ್ಳುತ್ತಿವೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, `ಹಿಂದೆಂದೂ ಕಂಡರಿಯದ ರಾಷ್ಟ್ರೀಯ ಆರೋಗ್ಯ ಸಂಕಟದ ಈ ದಿನಗಳಲ್ಲಿ ಕೋಮು ದ್ವೇಷ ಹೊತ್ತಿಸುವುದು ಅಕ್ಷಮ್ಯ ಅಪರಾಧ. ಅಪರಾಧಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಜರುಗಿಸದೇ ಹೋದರೆ ರಾಜ್ಯವೇ ಕೋಮುದಳ್ಳುರಿಗೆ ಬಲಿಯಾಗುವ ಅಪಾಯ ತಪ್ಪಿದ್ದಲ್ಲ' ಎಂದು ಎಚ್ಚರಿಸಿದ್ದಾರೆ.

'ಮುದ್ರಣ, ಟಿವಿ ವಾಹಿನಿಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸಮುದಾಯಗಳ ವಿರುದ್ಧ ದ್ವೇಷವನ್ನು ಬಿತ್ತರಿಸುವ ಎಲ್ಲರ ಮೇಲೂ ಸ್ವಯಂಪ್ರೇರಿತ ಕೇಸು ದಾಖಲಿಸಿಕೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು' ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

'ನೀವು ತಳೆದ ನಿಲುವಿನ ಬಗ್ಗೆ ನಿಮ್ಮದೇ ಪಕ್ಷದ ಕೆಲವು ಜನಪ್ರತಿನಿಧಿಗಳು ಪ್ರಚೋದನಕಾರಿ ಮತ್ತು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳಾದ ನೀವು ಇಂತಹವುಗಳಿಗೂ ಕಡಿವಾಣ ಹಾಕಬೇಕಿದೆ' ಎಂದು ಕುಮಾರಸ್ವಾಮಿ ಟ್ವೀಟ್ಟರ್ ಮೂಲಕ ಒತ್ತಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News