ಪೌರ ಕಾರ್ಮಿಕೆಯ ಕಷ್ಟಕ್ಕೆ ಮಿಡಿದ ಶಿಕ್ಷಣ ಸಚಿವ: ಪತ್ನಿ ಜೊತೆ ರಸ್ತೆಯ ಕಸ ಗುಡಿಸಿದ ಸುರೇಶ್ ಕುಮಾರ್
ಬೆಂಗಳೂರು, ಎ.10: ಮಹಿಳಾ ಪೌರ ಕಾರ್ಮಿಕೆಯೊಬ್ಬರ ಕಾಲಿಗೆ ಗಾಯವಾದ ಹಿನ್ನೆಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಾವೇ ತಮ್ಮ ಮನೆಯ ರಸ್ತೆಯ ಕಸ ಗುಡಿಸಿ ಕಾಳಜಿ ಮೆರೆದಿದ್ದಾರೆ.
ಇಲ್ಲಿನ ಬಸವೇಶ್ವರ ನಗರದ ಶಾರದಾ ಕಾಲನಿ ರಸ್ತೆಯನ್ನು ನಿತ್ಯವೂ ಸ್ವಚ್ಛಗೊಳಿಸುತ್ತಿದ್ದ ಲಿಂಗಮ್ಮ ಎಂಬುವವರ ಕಾಲಿಗೆ ಗಾಯವಾಗಿತ್ತು. ಇದನ್ನು ಗಮನಿಸಿದ ಸುರೇಶ್ ಕುಮಾರ್ ಅವರ ಕೈಲಿದ್ದ ಪೊರಕೆಯನ್ನು ತೆಗೆದುಕೊಂಡು ರಸ್ತೆಯನ್ನು ಸಂಪೂರ್ಣವಾಗಿ ಕ್ಲೀನ್ ಮಾಡಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಬಿಬಿಎಂಪಿ ಕಮಿಷನರ್ ಬಿ.ಹೆಚ್. ಅನಿಲ್ ಕುಮಾರ್, "ಗೌರವಾನ್ವಿತ ಸಚಿವರಾದ ಸುರೇಶ್ ಕುಮಾರ್ ಅವರು, ನಮ್ಮ ಪೌರಕಾರ್ಮಿಕರಾದ ಶ್ರೀಮತಿ ಲಿಂಗಮ್ಮ ಅವರ ಕಾಲಿಗೆ ಗಾಯವಾಗಿರುವುದನ್ನು ಗಮನಿಸಿ, ಅವರಿಗೆ ತೊಂದರೆಯಾಗಬಾರದೆಂದು, ಶುಕ್ರವಾರ ಬೆಳಗ್ಗೆ ತಾವೇ ಸಾರ್ವಜನಿಕ ರಸ್ತೆ ಸ್ವಚ್ಛಗೊಳಿಸಿ ಕಾಳಜಿ ಮೆರೆದಿದ್ದಾರೆ. ಅವರ ಮಾದರಿ, ಸೇವೆಗೆ ಧನ್ಯವಾದಗಳು. ಪೌರಕಾರ್ಮಿಕರ ಕುರಿತು ಬಿಬಿಎಂಪಿ ಕಾಳಜಿ ವಹಿಸುವುದು" ಎಂದು ಧನ್ಯವಾದ ಹೇಳಿದ್ದಾರೆ.
ಅಲ್ಲದೇ, ಈ ಬಗ್ಗೆ ತಮ್ಮ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಸಚಿವ ಸುರೇಶ್ ಕುಮಾರ್ ಅವರು, "ಇಂದು ಬೆಳಿಗ್ಗೆ ವಾಕಿಂಗ್ ಕಡಿಮೆ ಮಾಡಿ ನಮ್ಮ ಮನೆಯ ಮುಂದಿನ ಅರ್ಧ ರಸ್ತೆಯನ್ನು ನನ್ನ ಪತ್ನಿ ಜೊತೆಗೂಡಿ ಗುಡಿಸಿದಾಗ ವ್ಯಾಯಾಮ ಮತ್ತು ಆನಂದ ಎರಡರ ಲಾಭವೂ ಆಯಿತು. ನಮ್ಮ ರಸ್ತೆಯ ಪೌರಕಾರ್ಮಿಕಿ ಲಿಂಗಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡದ್ದನ್ನು ಕೇಳಿ ಈ ಕೆಲಸಕ್ಕೆ ಇಳಿದದ್ದು. ಆಕೆಯ ಭಾರ ಸ್ವಲ್ಪವಾದರೂ ಕಡಿಮೆಯಾಗಲಿ ಎಂಬ ಉದ್ದೇಶದಿಂದ. (ನಾವೆಲ್ಲರೂ ಆಗಾಗ ಈ ಕೆಲಸ ಮಾಡಬಹುದಲ್ಲವೇ? ಸ್ವಚ್ಛತೆ ಕೇವಲ ಒಂದು ಕಾರ್ಯಕ್ರಮವಾಗುವುದರ ಜೊತೆಗೆ ಕಾರ್ಯವೂ ಆದರೆ ಉತ್ತಮ)" ಎಂದು ಬರೆದಿದ್ದಾರೆ.