ರೋಗಕ್ಕಿಂತ ಹಸಿವಿನಿಂದ ಹೆಚ್ಚು ಜನ ಜೀವ ಕಳೆದುಕೊಳ್ಳಬಹುದು: ಸಿದ್ದರಾಮಯ್ಯ ಎಚ್ಚರಿಕೆ
ಬೆಂಗಳೂರು, ಎ. 16: ಕೊರೋನ ವೈರಸ್ ಸೋಂಕಿನಿಂದ 'ಜೀವ ಮತ್ತು ಜೀವನ' ಎರಡನ್ನೂ ಉಳಿಸುವುದು ಮುಖ್ಯ. ಮುಖ್ಯಮಂತ್ರಿ ಯಡಿಯೂಪ್ಪ ನೇತೃತ್ವದ ಸರಕಾರದ ಈವರೆಗಿನ ಪ್ರಯತ್ನಗಳು ಜೀವ ಉಳಿಸುವ ಬಗ್ಗೆಯೇ ಹೆಚ್ಚು ಕೇಂದ್ರಿಕೃತವಾಗಿದೆ. 'ಜೀವನ' ರಕ್ಷಿಸುವ ಪ್ರಯತ್ನ ಮಾಡದೆ ಇದ್ದರೆ ರೋಗಕ್ಕಿಂತ ಹಸಿವಿನಿಂದ ಹೆಚ್ಚು ಜನ ಜೀವ ಕಳೆದುಕೊಳ್ಳಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, 'ಉದ್ಯಮಗಳು ಮುಚ್ಚಿವೆ. ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಅಸಂಘಟಿತ ಕ್ಷೇತ್ರದ ಕಾರ್ಮಿಕರು ಅಕ್ಷರಶಃ ನಿರ್ಗತಿಕರಾಗಿದ್ದಾರೆ. ಮಾರುಕಟ್ಟೆಯಲ್ಲಿ ಹಣ್ಣು-ತರಕಾರಿ ಇಲ್ಲ, ರೈತರು ಬೆಳೆಯನ್ನು ಬೀದಿಗೆ ಚೆಲ್ಲುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರ ತುರ್ತಾಗಿ ಗಮನಹರಿಸಬೇಕಾಗಿದೆ' ಎಂದು ಆಗ್ರಹಿಸಿದ್ದಾರೆ.
'ಕೋವಿಡ್-19 ವೈರಸ್ನಿಂದ ಅಮೂಲ್ಯವಾದ ಜೀವದ ಜೊತೆ ಜೀವನವನ್ನೂ ಉಳಿಸುವುದಕ್ಕಾಗಿ ತಜ್ಞರು, ಉದ್ಯಮಿಗಳು, ಅಧಿಕಾರಿಗಳು ಮತ್ತು ಹಿರಿಯ ರಾಜಕೀಯ ನಾಯಕರನ್ನೊಳಗೊಂಡ ಕಾರ್ಯಪಡೆಯನ್ನು ತುರ್ತಾಗಿ ರಚಿಸಬೇಕು' ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ.