ಕೋವಿಡ್-19: 'ರಾಷ್ಟ್ರೀಯ ತುರ್ತು ಪರಿಸ್ಥಿತಿ' ಎಂದು ಘೋಷಿಸಲು ಪ್ರಧಾನಿಗೆ ದೇಶಪಾಂಡೆ ಆಗ್ರಹ
ಬೆಂಗಳೂರು, ಎ.16: ಮಾರಣಾಂತಿಕ ಕೊರೋನ ವೈರಸ್ನಿಂದಾಗಿ ಇಡೀ ದೇಶವೇ ಲಾಕ್ಡೌನ್ ಆಗಿದ್ದು, ಸಂಪೂರ್ಣವಾಗಿ ಆರ್ಥಿಕ ಚಟುವಟಿಕೆಗಳು ನಿಂತು ಹೋಗಿವೆ. ಅದರಲ್ಲೂ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ನಿಂತಿ ಹೋಗಿವೆ. ದುಡಿಯುವ ಕೈಗಳಿಗೆ ಉದ್ಯೋಗ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್-19 ಅವಧಿಯನ್ನು ‘ರಾಷ್ಟ್ರೀಯ ವಿಪತ್ತಿನಿಂದಾಗಿ ತಾತ್ಕಾಲಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಎಂದು ಘೋಷಿಸಲು ಪ್ರಧಾನಮಂತ್ರಿಗೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆಗ್ರಹಿಸಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿಗೆ ಪತ್ರ ಬರೆದಿರುವ ಅವರು, ರಾಜೀವ್ ಗಾಂಧಿ ಶ್ರಮಿಕ್ ಕಲ್ಯಾಣ ಯೋಜನೆ ಮುಖಾಂತರ ಕಾರ್ಮಿಕರ ರಾಜ್ಯ ವಿಮಾ ನಿಗಮದ ಮೂಲಕ ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ತೆ ನೀಡುವಂತೆ ಆಗ್ರಹಿಸಿದ್ದಾರೆ.
ಜೊತೆಗೆ ಕಾರ್ಮಿಕರ ಹಾಗೂ ನೌಕರರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮುಂದಿನ ಮೂರು ತಿಂಗಳಿಗೆ ಇಎಸ್ಐಸಿಯಲ್ಲಿ ಸರಕಾರದ ಭಾಗ ಶೇ.3.25ಕ್ಕೆ ಹಾಗೂ ನೌಕರರ ಭಾಗ ಶೇ.0.75ಕ್ಕೆ ನಿಗದಿಪಡಿಸುವಂತೆ ಒತ್ತಾಯಿಸಿರುವ ದೇಶಪಾಂಡೆ, ಇದಕ್ಕೆ ಬೇಕಾದ ನಿಯಮಗಳಲ್ಲಿ ಬದಲಾವಣೆ ತರುವಂತೆ ಕಾರ್ಮಿಕ ಹಾಗೂ ಉದ್ಯೋಗ ಇಲಾಖೆಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.