ಎ.20ರಂದು ಬಿಬಿಎಂಪಿ ಬಜೆಟ್ ಮಂಡನೆ: ಸಚಿವ ಆರ್.ಅಶೋಕ್
ಬೆಂಗಳೂರು, ಎ.17: 2020-21ನೇ ಸಾಲಿನ ಬಿಬಿಎಂಪಿ ಬಜೆಟ್ ಎ.20ರಂದು ಮಧ್ಯಾಹ್ನ 12 ಗಂಟೆಗೆ ಮಂಡನೆಯಾಗಲಿದ್ದು ಸಾಮಾಜಿಕ ಅಂತರ ಪಾಲನೆ ಮಾಡಲಾಗುತ್ತದೆ. ಸದಸ್ಯರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡುವ ಕೆಲಸ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 2020-21 ನೇ ಸಾಲಿನ ಬಿಬಿಎಂಪಿ ಬಜೆಟ್ ಅನುಮೋದನೆ ಬಹಳ ಮುಖ್ಯವಾದ ವಿಷಯ, ಕೊರೋನ ವೈರಸ್ ಕಾರಣದಿಂದ ಮುಂದೂಡಿಕೆ ಮಾಡಿದ್ದೆವು, ಲಾಕ್ಡೌನ್ ಮತ್ತೆ ಮುಂದುವರೆದ ಕಾರಣ ಈಗ ಅನಿವಾರ್ಯವಾಗಿ ಮಂಡನೆ ಮಾಡಲೇಬೇಕು ಎಂದು ತಿಳಿಸಿದರು.
ಬಿಬಿಎಂಪಿ ಬಜೆಟ್ ಹಣಕಾಸು ವ್ಯಯಕ್ಕೆ ಅನಿವಾರ್ಯ. ಹಾಗಾಗಿ ಸಿಎಂ, ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರ ಜೊತೆ ಚರ್ಚೆ ನಡೆಸಿದ್ದು, ಬಜೆಟ್ ಮಂಡನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.
ಲಿಮಿಟೆಡ್ ಸದಸ್ಯರು ಮಾತ್ರ ಭಾಗಿಯಾಗಲಿದ್ದಾರೆ ಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿ ಸದಸ್ಯರು, ಪ್ರತಿಪಕ್ಷ ನಾಯಕ, ಆಡಳಿತ ಪಕ್ಷದ ನಾಯಕ, ಕೆಲ ಮಂತ್ರಿ, ಆಯುಕ್ತರು ಮಾತ್ರ ಭಾಗಿಯಾಗಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತದೆ, ವೀಡಿಯೋ ಕಾನ್ಫರೆನ್ಸ್ ಮೂಲಕ ಸದಸ್ಯರಿಗೆ ಮಾಹಿತಿ ಕೊಡಲಾಗುತ್ತದೆ. ಈ ತರ ಬಜೆಟ್ ಮಂಡಿಸಲು ಕಾನೂನಾತ್ಮಕ ಅನುಮೋದನೆ ಪಡೆಯಲು ಮಾತುಕತೆ ನಡೆಸಿ ಅಂತಿಮವಾಗಿ ನಿರ್ಧಾರ ಕೈಗೊಂಡಿದೆ ಎಂದರು.
ಈ ಬಾರಿ ಒಳ್ಳೆಯ ಬಜೆಟ್ ಮಂಡಿಸಲಿದ್ದಾರೆ ಎನ್ನುವ ವಿಶ್ವಾಸವಿದೆ. ಬಜೆಟ್ ಗಾತ್ರ ಅವರು ತೀರ್ಮಾನ ಮಾಡಲಿದ್ದಾರೆ, ಕಳೆದ ಬಾರಿ 16 ಸಾವಿರ ಕೋಟಿ ಇತ್ತು ಅಷ್ಟು ಬೇಡ ಕಡಿಮೆ ಮಾಡಿ ಎಂದು ಸಲಹೆ ನೀಡಿದ್ದೇವೆ. ಪ್ರತಿ ವಾರ್ಡ್ಗೆ ಕೋವಿಡ್ -19 ಗಾಗಿ 25 ಲಕ್ಷ ಮೀಸಲು ಇಡಲಾಗಿದೆ, ಒಟ್ಟು 50 ಕೋಟಿ ರೂ. ಆಗಲಿದೆ, ಅದಕ್ಕೆ ಈಗಾಗಲೇ ಒಪ್ಪಿಗೆ ನೀಡಲಾಗಿದೆ ಔಷಧಿ, ಕೂಲಿ ಕಾರ್ಮಿಕರಿಗಾಗಿ ಮೀಸಲಿರಿಸಲಾಗಿದೆ ಉಳಿದದ್ದು ಬಜೆಟ್ನಲ್ಲಿ ಬರಲಿದೆ ಎಂದರು.
ಅಕ್ರಮ ಸಕ್ರಮ ಸುಖಾಂತ್ಯ
ಅಕ್ರಮ ಸಕ್ರಮ 2007ರ ಕಾಯ್ದೆ 2014 ರಲ್ಲಿ ಮತ್ತಷ್ಟು ಸುಧಾರಣೆಯಾಯಿತು, ನಂತರ ಹೈಕೋರ್ಟ್ಗೆ ಹೋಗಿ, ಸುಪ್ರೀಂ ಕೋರ್ಟ್ಗೆ ಹೋಗಿ ತಡೆ ತರಲಾಗಿತ್ತು. ಈಗ ಬಡವರ ನಿವೇಶನ ಸಕ್ರಮಕ್ಕೆ ನಿರ್ಧರಿಸಿದ್ದು, ನಾವೇ ದರ ನಿಗದಿ ಮಾಡಲಿದ್ದೇವೆ. ಬಿಲ್ಡರ್ ಗಳಿಗೆ, ಡೆವಲಪರ್ ಗಳಿಗೆ ಇದರಿಂದ ಉಪಯೋಗ, ಅನುಕೂಲ ಆಗಬಾರದು. ಬಡವರು ಮಧ್ಯಮ ವರ್ಗದವರಿಗೆ ಮಾತ್ರ ಅನುಕೂಲವಾಗಲು ಈ ಕಾಯ್ದೆ ಬಂದಿದೆ. ಅದನ್ನು ನ್ಯಾಯಾಲಯದಲ್ಲೂ ರಿಲೀಫ್ ಪಡೆಯಲು ನಿರ್ಧರಿಸಲಾಗಿದೆ ಎಂದರು.
ಮಾಧ್ಯಮ ಚಿತ್ರೀಕರಣಕ್ಕಿಲ್ಲ ಅವಕಾಶ
ಈ ಬಾರಿಯ ಬಿಬಿಎಂಪಿ ಬಜೆಟ್ ಮಂಡನೆ ಚಿತ್ರೀಕರಣಕ್ಕೆ ಮಾಧ್ಯಮದವರಿಗೆ ಅನುಮತಿ ನೀಡಲಾಗಿಲ್ಲ. ಗುಂಪು ಸೇರುವುದನ್ನ, ಒಂದೆಡೆ ಹೆಚ್ಚು ಮಂದಿ ಭಾಗಿಯಾಗುವುದನ್ನ ತಡೆಯುವ ನಿಟ್ಟಿನಲ್ಲಿ ಮಾಧ್ಯಮದವರಿಗೆ ಅವಕಾಶ ನಿರಾಕರಿಸಲಾಗಿದೆ. ಹೀಗಾಗಿ ಮಾಧ್ಯಮದವರಿಗೆ ಪ್ರತ್ಯೇಕವಾಗಿ ಅವರ ಕಚೇರಿಯಲ್ಲೇ ಕುಳಿತು ಲೈವ್ ವೀಕ್ಷಣೆಗೆ ವೆಬ್ ಸೈಟ್ನಲ್ಲಿ ಬಜೆಟ್ ಮಂಡನೆಯ ಲೈವ್ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.