ಗುರುತಿನ ಚೀಟಿ ತೋರಿಸಿದರೆ ಮಾತ್ರ ಪೆಟ್ರೋಲ್ !: ಅನಗತ್ಯ ರಸ್ತೆಗಿಳಿಯುವವರಿಗೆ ಬಂಕ್ ಮಾಲಕರ ಮೂಗುದಾರ

Update: 2020-04-17 16:49 GMT

ಬೆಂಗಳೂರು, ಎ.17: ಕೊರೋನ ವೈರಸ್ ಸೋಂಕು ತಡೆಗಟ್ಟುವ ಹಿನ್ನೆಲೆ ಅಗತ್ಯ ಸೇವೆಗೆ ಸಂಬಂಧಿಸಿದವರು ಹೊರತುಪಡಿಸಿ ಬೇರೆ ಯಾರೂ ಅನಗತ್ಯ ಓಡಾಡಬಾರದು ಎಂದು ಸರಕಾರ ಸೂಚಿಸಿದ್ದರೂ, ಹಲವರು ಸರಕಾರದ ಆದೇಶಕ್ಕೆ ಕ್ಯಾರೇ ಎನ್ನದೆ ಸುತ್ತಾಡುತ್ತಿದ್ದಾರೆ. ಇಂತವರಿಗೆ ಮೂಗುದಾರ ಹಾಕಲು ಪೆಟ್ರೋಲ್ ಬಂಕ್ ಮಾಲಕರು ತೀರ್ಮಾನಿಸಿದ್ದು, ಸಂಚಾರದ ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಪೆಟ್ರೋಲ್, ಡಿಸೇಲ್ ಹಾಕಲು ನಿರ್ಧರಿಸಿದ್ದಾರೆ !

ರಾಜ್ಯದಲ್ಲಿ ಕೊರೋನ ವೈರಾಣು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಇದರ ಗಂಭೀರತೆ ಅರಿತುಕೊಳ್ಳದೆ ರಸ್ತೆಯಲ್ಲಿ ಬೈಕ್, ಕಾರು ಸವಾರರು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿದ್ದಾರೆ. ಇತ್ತೀಚಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡಿದ ಅಂಕಿ ಅಂಶಗಳ ಪ್ರಕಾರ, ರಾಜ್ಯಾದ್ಯಂತ ಅನಗತ್ಯವಾಗಿ ಒಡಾಡಿದ 60 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿ 4,500 ಜನರನ್ನು ಜೈಲಿಗೆ ಕಳುಹಿಸಲಾಗಿದೆ. 2,187 ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಆದರೂ, ವಾಹನಗಳ ಸಂಚಾರ ಕಡಿಮೆಯಾಗಿಲ್ಲ.

ಒಂದೆಡೆ ಎಗ್ಗಿಲ್ಲದೇ ವಾಹನಗಳ ಸಂಚಾರ ನಡೆಸಿದರೆ, ಇನ್ನೊಂದೆಡೆ ನಗರದ ಮೇಲ್ಸೇತುವೆಗಳಲ್ಲಿ ಕಿಡಿಗೇಡಿಗಳು ವ್ಹೀಲಿಂಗ್ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಪೊಲೀಸರು ತಡೆದರೂ, ಮನೆ ಬಳಕೆ ಸಾಮಗ್ರಿ ಕೊಳ್ಳುವುದಾಗಿ ಸುಳ್ಳು ಹೇಳಿ ಸಂಚಾರ ನಡೆಸುತ್ತಿದ್ದಾರೆ. ಇದನ್ನರಿತ ಸರಕಾರ ಹಲವು ಉಪಕ್ರಮ ಜಾರಿಗೊಳಿಸಿದರೂ, ಸಾರ್ವಜನಿಕ ಸಂಚಾರಕ್ಕೆ ಕಡಿವಾಣ ಬಿದ್ದಿಲ್ಲ. ಇದೀಗ ಪೆಟ್ರೋಲ್ ಬಂಕ್ ಮಾಲಕರು ಅಗತ್ಯ ಕೆಲಸಗಳಿಗೆ ತೆರಳುವ ಹಾಗೂ ಪಾಸ್ ಹೊಂದಿದವರಿಗೆ ಮಾತ್ರ ಪೆಟ್ರೋಲ್, ಡಿಸೇಲ್ ಹಾಕಲು ಮುಂದಾಗಿದ್ದಾರೆ.

ನಿಮ್ಮ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಮನೆಯಲ್ಲಿಯೇ ಇರಬೇಕು ಎಂದು ಸರಕಾರ ಪ್ರತಿದಿನ ಒಂದಿಲ್ಲೊಂದು ಆದೇಶ ಹೊರಡಿಸುತ್ತಿದ್ದು, ಜನರು ಮಾತ್ರ ಕೊರೋನ ತೀವ್ರತೆ ಮರೆತಂತೆ ವರ್ತಿಸುತ್ತಿದ್ದಾರೆ. ವಾಹನಗಳ ಸಂಚಾರದಿಂದ ಆರ್‍ಟಿಒ ಮತ್ತು ಸಂಚಾರ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಆರಂಭದಲ್ಲಿ ಲಾಠಿ ರುಚಿ ತೋರಿಸಿದ ಪೊಲೀಸರ ಮೇಲೆ ಕೆಲ ಆರೋಪಗಳು ಬಂದ ಹಿನ್ನೆಲೆ ಲಾಠಿ ಪ್ರಹಾರಕ್ಕೆ ಮುಂದಾಗದೇ ಪೊಲೀಸರು ಮಾತಿನ ಮೂಲಕ ತಿಳಿ ಹೇಳುತ್ತಿದ್ದಾರೆ. ಎಚ್ಚರಿಕೆ ನೀಡಲು ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ. ಅದಾಗ್ಯೂ ರಸ್ತೆಗೆ ವಾಹನ ಇಳಿಯುವ ಸಂಖ್ಯೆಯಲ್ಲಿ ಮಾತ್ರ ವ್ಯತ್ಯಾಸವಾಗಿಲ್ಲ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲ ಪೆಟ್ರೋಲ್ ಬಂಕ್ ಮಾಲಕರು ಲಾಕ್‍ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡುವವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದು, ಬೇಕಾಬಿಟ್ಟಿ ಓಡಾಡುವವರಿಗೆ ಪೆಟ್ರೋಲ್, ಡೀಸೆಲ್ ಹಾಕದೆ, ಸರಕಾರ ಸೂಚಿಸಿರುವ ನಿಯಮಗಳನ್ನು ಪಾಲಿಸುವಂತೆ ಬುದ್ಧಿ ಹೇಳಿ ಕಳುಹಿಸುತ್ತಿದ್ದಾರೆ.

ಮಾಸ್ಕ್ ಧರಿಸಿದರೆ ಮಾತ್ರ ತೈಲ: ನಗರದ ಕೆಲ ಪೆಟ್ರೋಲ್ ಬೈಕ್‍ಗಳಲ್ಲಿ ಸ್ಯಾನಿಟೈಸರ್ ಇಡಲಾಗಿದ್ದು, ಬಂಕ್‍ಗೆ ಬರುವ ವ್ಯಕ್ತಿ ಮೊದಲು ಕೈ ತೊಳೆದು ಬರಬೇಕು. ಪೆಟ್ರೋಲ್ ಹಾಕಿಸಿಕೊಳ್ಳುವ ವ್ಯಕ್ತಿಯು ಮಾಸ್ಕ್ ಧರಿಸಿಲ್ಲವೆಂದರೆ ಪೆಟ್ರೋಲ್ ಹಾಕುವುದನ್ನು ನಿಷೇಧಿಸಲಾಗಿದೆ ಎಂದು ಫಲಕಗಳನ್ನು ಅಳವಡಿಸಲಾಗಿದೆ. ಒಂದು ರೀತಿಯಲ್ಲಿ ಜನರಿಗೆ ಸರಕಾರ ನೀಡಿದ ನಿಯಮ ಪಾಲನೆ ಮಾಡಬೇಕು ಎಂದು ಈ ಮೂಲಕ ತಿಳಿಸಲಾಗುತ್ತಿದೆ.

ಗುರುತಿನ ಚೀಟಿ ಇದ್ದವರಿಗೆ ಮಾತ್ರ ಪೆಟ್ರೋಲ್, ಡೀಸೆಲ್

ರಸ್ತೆಯಲ್ಲಿ ಸಂಚರಿಸಲು ಪರವಾನಗಿ ಚೀಟಿ ಇರಬೇಕು. ಆಗ ಮಾತ್ರ ಪೆಟ್ರೋಲ್, ಡಿಸೇಲ್ ಹಾಕಲಾಗುವುದು ಎಂದು ರಾಜ್ಯ ತೈಲ ಮಾಲಕರ ಸಂಘವಾಗಲಿ, ಬಿಬಿಎಂಪಿಯಾಗಲಿ, ಜಿಲ್ಲಾಡಳಿತವಾಗಲಿ ಸೂಚಿಸಿಲ್ಲ. ಗುರುತಿನ ಚೀಟಿ ಇದ್ದವರಿಗೆ ಮಾತ್ರ ತೈಲ ಹಾಕಲು ನಾವೇ ನಿರ್ಧರಿಸಿದ್ದೇವೆ. ಇದರಿಂದ ಕೆಲವರು ಬೈಕ್ ತಳ್ಳಿಕೊಂಡು ಹೋಗುತ್ತಾರೆ. ಇದರಿಂದಾಗಿ ರಸ್ತೆಗೆ ಜನರು ಬರುವವರ ಸಂಖ್ಯೆ ಈಗಾದರೂ ಕಡಿಮೆಯಾದರೆ, ಕೊರೋನವನ್ನು ದೂರ ಇಡಲು ಸಾಧ್ಯವಾಗಲಿದೆ. ಈ ರೀತಿಯಲ್ಲಾದರೂ ಸರಕಾರದ ಆಶಯ ಈಡೇರಿಸಿದಂತಾಗುತ್ತದೆ. ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿದಂತಾಗುತ್ತದೆ ಎಂದು ಬಸವೇಶ್ವರ ನಗರದಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ಮಾಲಕ ಮಲ್ಲೇಶ್ ಹೇಳುತ್ತಾರೆ.

ಶೇ.10 ರಷ್ಟು ತೈಲವೂ ಖರ್ಚಾಗುತ್ತಿಲ್ಲ

ಬೆಂಗಳೂರಿನಲ್ಲಿ ಬರೋಬ್ಬರಿ 470 ಪೆಟ್ರೋಲ್ ಬಂಕ್‍ಗಳಿದ್ದು, ಪ್ರತಿದಿನ ದ್ವಿಚಕ್ರ, ಬಸ್, ಆಟೋ, ಲಾರಿ ಸೇರಿ 45 ಸಾವಿರಕ್ಕೂ ಅಧಿಕ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಹಾಕಲಾಗುತ್ತಿತ್ತು. ಆದರೀಗ ಶೇ.10ರಷ್ಟು ತೈಲವೂ ಖರ್ಚಾಗುತ್ತಿಲ್ಲ. ಇದರಿಂದಾಗಿ ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಬಂಕ್‍ಗಳಲ್ಲಿದ್ದ ಶೇ.50ರಷ್ಟು ಕಾರ್ಮಿಕರೂ ತಮ್ಮ ಊರುಗಳಿಗೆ ತೆರಳಿದ್ದಾರೆ. ಲಾಭವಿಲ್ಲದಿದ್ದರೂ ಕಾರ್ಮಿಕರಿಗೆ ಸಂಬಳ, ವಿದ್ಯುತ್ ಬಿಲ್ ಪಾವತಿಸಲಾಗುತ್ತಿದೆ. ಲಾಕ್ ಡೌನ್ ನಡುವೆಯೂ ಬಂಕ್‍ಗಳನ್ನು ತೆರೆದು ಅಗತ್ಯ ವಾಹನಗಳಿಗೆ ತೈಲ ಹಾಕುತ್ತಿದ್ದೇವೆ. ಈ ರೀತಿಯಲ್ಲಿಯೂ ಸಮಾಜ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಸದಸ್ಯ ಎ.ತಾರಾನಾಥ್ ತಿಳಿಸಿದ್ದಾರೆ.

ಸಂಚಾರ ಪರವಾನಿಗೆ ಚೀಟಿ ಇಲ್ಲದವರಿಗೆ ಪೆಟ್ರೋಲ್ ಹಾಕುವುದನ್ನು ಕೆಲ ಬಂಕ್ ಮಾಲಕರು ನಿಷೇಧಿಸಿರುವುದು ಸ್ವಾಗತಾರ್ಹ. ಆದರೆ, ಇದು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕಾದರೆ ಸರಕಾರವೇ ಆದೇಶ ಹೊರಡಿಸಬೇಕು. ಜನರ ಕೂಡ ಸರಕಾರದ ನಿಯಮ ಪಾಲಿಸಬೇಕು.

-ಎನ್. ಸತೀಶ್, ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಸದಸ್ಯ

Writer - -ಯುವರಾಜ ಮಾಳಗಿ

contributor

Editor - -ಯುವರಾಜ ಮಾಳಗಿ

contributor

Similar News