ರಾಮನಗರ: ಮನೆ-ಮನೆಗೆ ದಿನಸಿ ತಲುಪಿಸುವ ಯೋಜನೆಗೆ ಎಚ್ಡಿಕೆ ಚಾಲನೆ
ಬೆಂಗಳೂರು, ಎ. 22: ರಾಜ್ಯದಲ್ಲಿನ ಕೊರೋನ ವೈರಸ್ ಸೋಂಕಿನ ತಡೆಗೆ ಹೇರಿರುವ ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ ದಿನಸಿ, ಆಹಾರ ಪದಾರ್ಥಗಳನ್ನು ಮನೆ-ಮನೆಗೆ ತಲುಪಿಸುವ ಯೋಜನೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದರು.
ಬುಧವಾರ ರಾಮನಗರದಲ್ಲಿ ಯೋಜನೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಪ್ರತಿನಿತ್ಯ 10 ಸಾವಿರ ಮಂದಿ ಬಡವರಿಗೆ ಬೆಳಗಿನ ಉಪಾಹಾರ ಮತ್ತು ಸಂಜೆ ಊಟವನ್ನು ಉಚಿತವಾಗಿ ನೀಡಲಾಗುತ್ತಿದೆ. ಅನ್ನಂ ಪರಬ್ರಹ್ಮಂ ಎಂಬ ಮಾತಿನಂತೆ ಈ ಯೋಜನೆ ಕೈಗೊಳ್ಳಲಾಗಿದೆ ಎಂದರು.
ಎರಡೂ ಕ್ಷೇತ್ರಗಳಲ್ಲಿ ಒಟ್ಟು 60 ಸಾವಿರ ದಿನಸಿ ಪದಾರ್ಥಗಳ ಕಿಟ್ ಅನ್ನು ಬಡವರಿಗೆ ಹಂಚಿಕೆ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು ದಿನಸಿ ಮತ್ತು ಆಹಾರ ಪದಾರ್ಥಗಳ ಪ್ಯಾಕಿಂಗ್ ಕಾರ್ಯದಲ್ಲಿ ತೋಡಗಿರುವ ಮಂಜುನಾಥ್ ಕನ್ವೇಷನ್ ಹಾಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮ ಪಂಚಾಯತ್ ಸೇರಿ ನಗರ ಪ್ರದೇಶದ ಬಡವರಿಗೆ ಆಹಾರ ವಿತರಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ.