ಕೊರೋನ ಬಿಕ್ಕಟ್ಟು ನಮಗೆ ಕಲಿಸಿದ 5 ಮಹತ್ವದ ಹಣಕಾಸು ಪಾಠಗಳು

Update: 2020-04-22 15:32 GMT

ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗು ವಿಶ್ವಾದ್ಯಂತ ಲಕ್ಷಾಂತರ ಜೀವಗಳನ್ನು ಅಪಾಯಕ್ಕೆ ಸಿಲುಕಿಸಿರುವುದು ಮಾತ್ರವಲ್ಲ,ಆರ್ಥಿಕ ಹಿಂಜರಿತವನ್ನು ತಪ್ಪಿಸಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟು ಬಲವಾದ ಹೊಡೆತವನ್ನೂ ವಿಶ್ವದ ಆರ್ಥಿಕತೆಗೆ ನೀಡಿದೆ. ಹಳೆಯ ನಾಣ್ನುಡಿಯಂತೆ ಈಗ ನಾವು ಎದುರಿಸುತ್ತಿರುವ ಸ್ಥಿತಿಯಂತಹ ಕಠಿಣ ಸಂದರ್ಭಗಳು ‘ಮಹಾನ್ ಗುರುಗಳೂ’ ಆಗಿರುತ್ತವೆ. ಅವು ಯಾವುದೇ ಪ್ರತಿಕೂಲ ಸ್ಥಿತಿಯನ್ನೂ ಪರಿಣಾಮಕಾರಿಯಾಗಿ ಎದುರಿಸಲು ಹಣಕಾಸು ಸನ್ನದ್ಧತೆಯಂತಹ ಹಲವಾರು ವಿಷಯಗಳನ್ನು ನಮಗೆ ಕಲಿಸುತ್ತವೆ. ಕೊರೋನ ವೈರಸ್ ಬಿಕ್ಕಟ್ಟು ನಮಗೆ ಕಲಿಸಿರುವ ಕೆಲವು ಮಹತ್ವದ ಪಾಠಗಳು ಇಲ್ಲಿವೆ.....

* ನಿಮಗೆ ಹಿಂದಿರುಗಿಸಲು ಸಾಧ್ಯವಿಲ್ಲದ ಸಾಲವನ್ನೆಂದೂ ಮಾಡಬೇಡಿ

ಸಾಲಗಳು, ಅವುಗಳನ್ನು ಸರಿಯಾಗಿ ನಿರ್ವಹಿಸಿದಾಗ, ಮನೆ ಅಥವಾ ಕಾರು ಖರೀದಿಯಂತಹ ನಮ್ಮ ಜೀವನದ ಗುರಿಗಳನ್ನು ಸಾಧಿಸಲು ಸಾಧ್ಯವಾಗಿಸುವ ಅತ್ಯುತ್ತಮ ಸಾಧನಗಳಾಗಿವೆ. ಸಾಲಗಳು ಕೆಲವೊಮ್ಮೆ ನಮ್ಮನ್ನು ಹಣಕಾಸಿನ ತುರ್ತು ಸ್ಥಿತಿಯಿಂದಲೂ ಪಾರು ಮಾಡುತ್ತವೆ. ಆದರೆ ಯಾವುದೇ ಸಾಲದ ದಾಖಲೆಗಳಿಗೆ ಸಹಿ ಮಾಡುವ ಮುನ್ನ ನಮ್ಮ ಸಾಲ ಮರುಪಾವತಿ ಸಾಮರ್ಥ್ಯವನ್ನು ಎಚ್ಚರಿಕೆಯಿಂದ ಲೆಕ್ಕ ಹಾಕಬೇಕು. ಏಕೆಂದರೆ ತೀರಿಸಲಾಗದ ಸಾಲಕ್ಕೆ ಕೈಚಾಚಿದರೆ ಅದು ನಮ್ಮ ಆರ್ಥಿಕತೆಯನ್ನು ನಾಶಗೊಳಿಸುವ ಜೊತೆಗೆ ಅಮೂಲ್ಯ ಆಸ್ತಿಗಳನ್ನೂ ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು ಈ ಹಾದಿಯುದ್ದಕ್ಕೂ ಅಸಾಧಾರಣ ಮಾನಸಿಕ ಒತ್ತಡಗಳಿಗೆ ನಮ್ಮನ್ನು ಗುರಿ ಮಾಡುತ್ತದೆ. ವಿಶೇಷವಾಗಿ, ಆದಾಯ ನಷ್ಟವಾಗಿರುವ ಈಗಿನಂತಹ ಸಂದರ್ಭಗಳಲ್ಲಿ ಸರಕಾರದಿಂದ ಅಲ್ಪಾವಧಿಯ ಪರಿಹಾರ ಕ್ರಮಗಳ ಹೊರತಾಗಿಯೂ ಸಾಲವನ್ನು ಮರುಪಾವತಿ ಮಾಡುವುದು ದೊಡ್ಡ ಸವಾಲು ಆಗುತ್ತದೆ. ಎಂದೂ ಅತಿಯಾಗಿ ಸಾಲವನ್ನು ಮಾಡಬೇಡಿ ಮತ್ತು ಸಕಾಲದಲ್ಲಿ ನಿಮ್ಮ ಸಾಲವನ್ನು ಸಂಪೂರ್ಣವಾಗಿ ಪಾವತಿಸಲು ಸಾಧ್ಯವಿರುವಂತೆ ಅನಿರೀಕ್ಷಿತ ಸಂದರ್ಭ ಯೋಜನೆಯೊಂದು ನಿಮ್ಮ ಬಳಿಯಿರಲಿ ಎನ್ನುವುದು ಇಲ್ಲಿ ನಾವು ಕಲಿಯಬೇಕಿರುವ ಪಾಠವಾಗಿದೆ.

* ಯಾವಾಗಲೂ ಸಾಕಷ್ಟು ತುರ್ತು ನಿಧಿ ನಿಮ್ಮ ಬಳಿಯಿರಲಿ

ಸಾಕಷ್ಟು ತುರ್ತು ನಿಧಿ ಇಲ್ಲದೆ ನಿಮ್ಮ ಯಾವುದೇ ಅನಿರೀಕ್ಷಿತ ಸಂದರ್ಭ ಯೋಜನೆಯು ಪೂರ್ಣಗೊಳ್ಳುವುದಿಲ್ಲ. ಆರ್ಥಿಕತೆಯ ಚಕ್ರಗಳು ದಿಢೀರ್ ಸ್ಥಗಿತಗೊಂಡಿರುವ ಇಂತಹ ಸಮಯದಲ್ಲಿ ತುರ್ತು ನಿಧಿಯ ಮಹತ್ವ ನಮಗೆ ಹೆಚ್ಚು ಚೆನ್ನಾಗಿ ಗೊತ್ತಾಗುತ್ತದೆ. ನಿಯಮಿತ ಆದಾಯ ನಿಂತು ಹೋದಾಗ ಅಥವಾ ಇತರ ಯಾವುದೇ ಹಣಕಾಸು ತುರ್ತು ಸ್ಥಿತಿಯನ್ನು ಎದುರಿಸುತ್ತಿರುವಾಗ ನಿಮ್ಮ ದೈನಂದಿನ ನಗದು ಅಗತ್ಯಗಳನ್ನು ಪೂರೈಸುವಲ್ಲಿ ತುರ್ತು ನಿಧಿಯು ತುಂಬ ಮುಖ್ಯ ಪಾತ್ರವನ್ನು ವಹಿಸುತ್ತದೆ. ನಿಮ್ಮ ತುರ್ತು ನಿಧಿಯು ಕನಿಷ್ಠ ಆರು ತಿಂಗಳುಗಳ ಖರ್ಚಿಗೆ ಸಾಲುವಷ್ಟಿರಬೇಕು ಎನ್ನುವುದು ಮುಖ್ಯವಾಗಿದೆ,ಆದರೆ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ಅದರ ಗಾತ್ರವನ್ನು ಇನ್ನಷ್ಟು ಹೆಚ್ಚಿಸಬಹುದು. ಹೆಚ್ಚಿನ ಬಂಡವಾಳ ಗಳಿಕೆಗಾಗಿ ನಿಮ್ಮ ತುರ್ತು ನಿಧಿಯನ್ನು ಹೆಚ್ಚು ಪ್ರತಿಫಲ ನೀಡುವ ಬ್ಯಾಂಕ್ ಉಳಿತಾಯ ಖಾತೆ ಅಥವಾ ನಿರಖು ಠೇವಣಿ ಅಥವಾ ಲಿಕ್ವಿಡ್ ಮ್ಯೂಚ್ಯುವಲ್ ಫಂಡ್‌ನಲ್ಲಿ ತೊಡಗಿಸಲೂ ನೀವು ಬಯಸಬಹುದು. ಹೀಗಾಗಿ ತುಂಬಾ ತಡವಾಗುವ ಮೊದಲೇ ನಿಮ್ಮ ತುರ್ತುನಿಧಿಯನ್ನು ರೂಪಿಸಲು ಅಥವಾ ಈಗಾಗಲೇ ನಿಮ್ಮ ಬಳಿ ತುರ್ತು ನಿಧಿಯಿದ್ದರೆ ಅದಕ್ಕೆ ಮರುಪೂರಣವನ್ನು ಆರಂಭಿಸಿ. ಲಾಕ್‌ಡೌನ್ ಅವಧಿಯಲ್ಲಿ ಕಡಿಮೆಯಾಗಿರುವ ನಿಮ್ಮ ಖರ್ಚುಗಳಲ್ಲಿನ ಉಳಿತಾಯಗಳನ್ನು ಬಳಸಿ,ಕಟ್ಟುನಿಟ್ಟಿನ ಮಿತವ್ಯಯ ಕ್ರಮಗಳನ್ನು ಅನುಸರಿಸಿ ಮತ್ತು ದುಂದುವೆಚ್ಚಗಳಿಗೆ ಕಡಿವಾಣ ಹಾಕುವ ಮೂಲಕ ನೀವು ಈ ಕೆಲಸವನ್ನು ಮಾಡಬಹುದು.

* ನಿಮ್ಮ ಉದ್ಯೋಗದಾತರು ಒದಗಿಸಿರುವ ಆರೋಗ್ಯ ವಿಮೆ ಯೋಜನೆಯೊಂದನ್ನೇ ನೆಚ್ಚಿಕೊಳ್ಳಬೇಡಿ

ಕೊರೋನ ವೈರಸ್ ಬಿಕ್ಕಟ್ಟು ಈಗಾಗಲೇ ಹಲವು ಉದ್ಯೋಗದಾತರು ಉದ್ಯೋಗಗಳನ್ನು ಕಡಿತಗೊಳಿಸುವಂತೆ ಮಾಡಿದೆ ಮತ್ತು ಆರ್ಥಿಕತೆಯು ಶೀಘ್ರ ಪುನಃಶ್ಚೇತನವನ್ನು ಕಾಣದಿದ್ದರೆ ಪರಿಸ್ಥಿತಿಗಳು ಇನ್ನಷ್ಟು ತೀವ್ರವಾಗಿ ಹದಗೆಡಬಹುದು. ಇಂತಹ ಸ್ಥಿತಿಯಲ್ಲಿ ನಿಮ್ಮ ಉದ್ಯೋಗದಾತರು ಒದಗಿಸಿದ್ದ ಗುಂಪು ಆರೋಗ್ಯ ವಿಮೆಯ ಸೌಲಭ್ಯದಿಂದ ವಂಚಿತರಾಗುವುದರಿಂದ ಆಸ್ಪತ್ರೆ ವಾಸವನ್ನು ಅಗತ್ಯವಾಗಿಸುವ ವೈದ್ಯಕೀಯ ತುರ್ತು ಸಂದರ್ಭಗಳನ್ನು ಎದುರಿಸುವುದು ಅತ್ಯಂತ ಕಷ್ಟವಾಗಬಹುದು. ಆಸ್ಪತ್ರೆ ವೆಚ್ಚದ ಹೊರೆಯು ನಿಮ್ಮ ಅಮೂಲ್ಯ ಉಳಿತಾಯಗಳನ್ನು ನುಂಗಿ ನೀರು ಕುಡಿಯಬಹುದು,ಮಕ್ಕಳ ಓದು,ಮದುವೆ ಉತ್ಯಾದಿಗಳಿಗಾಗಿ ಮಾಡಿದ್ದ ಅಗತ್ಯ ಹೂಡಿಕೆಗಳ ನಗದೀಕರಣನ್ನೂ ಅನಿವಾರ್ಯವಾಗಿಸಬಹುದು ಅಥವಾ ನಿಮ್ಮನ್ನು ಸಾಲದ ಕೂಪದಲ್ಲಿ ತಳ್ಳಬಹುದು. ಹೀಗಾಗಿ ನೀವು ಕಂಪನಿಯಿಂದ ಆರೋಗ್ಯ ವಿಮೆ ಪಾಲಿಸಿಯ ವ್ಯಾಪ್ತಿಗೆ ಸೇರಿಸಲ್ಪಟ್ಟಿದ್ದರೂ ನಿಮಗಾಗಿ ಮತ್ತು ಅವಲಂಬಿತ ಕುಟುಂಬ ಸದಸ್ಯರಿಗಾಗಿ ಸಮಗ್ರ ಆರೋಗ್ಯ ವಿಮಾ ಪಾಲಿಸಿಯನ್ನು ಹೊಂದಿರುವುದು ಜಾಣತನವಾಗುತ್ತದೆ. ಏಕೆಂದರೆ ನಿಮ್ಮ ಉದ್ಯೋಗದಾತರು ಒದಗಿಸಿರುವ ವಿಮೆಯು ಸಾಕಷ್ಟು ವೆಚ್ಚಗಳನ್ನು ಭರಿಸದಿರಬಹುದು,ಹೆಚ್ಚುವರಿ ರಕ್ಷಣೆಗಳ ಕೊರತೆಯನ್ನು ಹೊಂದಿರಬಹುದು ಮತ್ತು ನೀವು ಉದ್ಯೋಗವನ್ನು ಕಳೆದುಕೊಂಡಾಗ ಈ ಸೌಲಭ್ಯವನ್ನೂ ಕಳೆದುಕೊಳ್ಳುತ್ತೀರಿ.

* ನಿಮ್ಮ ಉಯಿಲನ್ನು ಸಿದ್ಧಗೊಳಿಸಿ ಮತ್ತು ನಿಮ್ಮ ನಾಮಿನೇಷನ್ ಔಪಚಾರಿಕತೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಿ

ಜನರು ತಮ್ಮ ಉಯಿಲನ್ನು ಸಿದ್ಧಗೊಳಿಸಲು ಮತ್ತು ಸಕಾಲದಲ್ಲಿ ನಾಮಿನೇಷನ್ ಔಪಚಾರಿಕತೆಗಳನ್ನು ಮುಗಿಸಲು ವಿಳಂಬಿಸುವುದು ಸಾಮಾನ್ಯವಾಗಿದೆ. ಏಕೆಂದರೆ ಪ್ರತಿಯೊಬ್ಬರೂ ತಾವು ಚಿರಂಜೀವಿಗಳು ಎಂದೇ ಭಾವಿಸಿರುತ್ತಾರೆ. ಇದರ ಪರಿಣಾಮವಾಗಿ ಅನಿರೀಕ್ಷಿತವಾಗಿ ಸಾವು ಸಂಭವಿಸಿದಾಗ (ಈಗ ನಾವು ಎದುರಿಸುತ್ತಿರುವ ಸಾಂಕ್ರಾಮಿಕ ಪಿಡುಗಿನಂತಹ ಸಂಕಷ್ಟಗಳೂ ದಿಢೀರ್ ಸಾವನ್ನು ತರುತ್ತವೆ) ಉತ್ತರಾಧಿಕಾರವನ್ನು ಪಡೆಯಲು ಅವರ ಕುಟುಂಬ ಸದಸ್ಯರು ಹಲವಾರು ರಗಳೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಅವರ ವೈಯಕ್ತಿಕ ನೋವುಗಳನ್ನು ಇನ್ನಷ್ಟು ಹೆಚ್ಚಿಸುವುದಷ್ಟೇ ಇದರ ಸಾಧನೆಯಾಗುತ್ತದೆ. ಕೆಲವೊಮ್ಮೆ ಇದು ಕಾನೂನು ವಿವಾದಗಳಿಗೂ ಕಾರಣವಾಗಿ ಬಗೆಹರಿಯಲು ವರ್ಷಗಳೇ ಬೇಕಾಗಬಹುದು. ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಕಾನೂನುಬದ್ಧ ವಾರಸುದಾರರು ಅನಗತ್ಯವಾಗಿ ತೊಂದರೆಗಳನ್ನು ಅನುಭವಿಸುವುದನ್ನು ನಿವಾರಿಸಲು ನಿಮ್ಮ ಉಯಿಲನ್ನು ಸಿದ್ಧಗೊಳಿಸಲು ವಿಳಂಬಿಸಬೇಡಿ ಹಾಗೂ ನಿಮ್ಮ ಎಲ್ಲ ವಿಮಾ ಪಾಲಿಸಿಗಳು,ಹೂಡಿಕೆಗಳು ಮತ್ತು ನಿವೃತ್ತಿ ನಿಧಿಗೆ ಸಂಬಂಧಿಸಿದಂತೆ ನಾಮಿನೇಷನ್ ಪ್ರಕ್ರಿಯೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಿ ಎನ್ನುವುದು ಇಲ್ಲಿರುವ ಪಾಠ.

* ಅಪಾಯಗಳನ್ನು ತಗ್ಗಿಸಲು ನಿಮ್ಮ ಹೂಡಿಕೆಗಳಲ್ಲಿ ವೈವಿಧ್ಯತೆ ಇರಲಿ

ಕೊರೋನ ವೈರಸ್ ಬಿಕ್ಕಟ್ಟು ಹೆಚ್ಚಿನ ಆದಾಯ ಮಾರ್ಗಗಳ ಮೇಲೆ ತೀವ್ರ ಪರಿಣಾಮಗಳನ್ನುಂಟು ಮಾಡಿದೆ. ಶೇರು ಪ್ರಪಂಚದಲ್ಲಿಯ ಏರಿಳಿತಗಳು ವರ್ಷಗಳ ಲಾಭಗಳನ್ನು ಅಳಿಸಿಹಾಕಿವೆ. ಠೇವಣಿಗಳ ಮೇಲಿನ ಬಡ್ಡಿದರಗಳು ಕಡಿತಗೊಂಡಿವೆ. ಸಣ್ಣ ಉಳಿತಾಯ ಯೋಜನೆಗಳು ಕಡಿಮೆ ಪ್ರತಿಫಲಗಳನ್ನು ನೀಡುತ್ತಿವೆ. ರಿಯಲ್ ಎಸ್ಟೇಟ್ ಕ್ಷೇತ್ರವಂತೂ ಅತ್ಯಂತ ಮಂದಗತಿಯ ಸುಳಿಯಲ್ಲಿ ಸಿಲುಕಿದೆ. ಆದರೆ ಚಿನ್ನದಲ್ಲಿ ಹೂಡಿಕೆಗಳು ಉತ್ತಮ ಪ್ರತಿಫಲಗಳನ್ನು ನೀಡುತ್ತಿವೆ. ಒಟ್ಟಾರೆ ಹೂಡಿಕೆ ಅಪಾಯಗಳನ್ನು ತಗ್ಗಿಸಲು ಯಾವಾಗಲೂ ನಿಮ್ಮ ಉಳಿತಾಯಗಳನ್ನು ಅಪಾಯ ಮತ್ತು ಪ್ರತಿಫಲದ ವಿವಿಧ ಮಾನದಂಡಗಳೊಂದಿಗೆ ವೈವಿಧ್ಯಮಯ ಸಾಧನಗಳಲ್ಲಿ ತೊಡಗಿಸಲು ಪ್ರಯತ್ನಿಸಿ ಎನ್ನುವುದು ಇಲ್ಲಿಯ ಪಾಠವಾಗಿದೆ. ನಿಮ್ಮ ಹೂಡಿಕೆಗಳು ನಿಮ್ಮ ಅಪಾಯ ಧಾರಣೆ ಶಕ್ತಿಗೆ,ನಿಮ್ಮ ಹಣಕಾಸು ಗುರಿಗಳಿಗೆ ಮತ್ತು ನಗದು ಅಗತ್ಯಗಳಿಗೆ ಅನುಗುಣವಾಗಿರುವುದು ಹಾಗೂ ನಿಮ್ಮ ಹೂಡಿಕೆಗಳಿಂದ ಅವಾಸ್ತವಿಕ ಪ್ರತಿಫಲಗಳ ಗುರಿಯನ್ನು ಬೆನ್ನಟ್ಟದಿರುವುದೂ ಅಷ್ಟೇ ಮುಖ್ಯವಾಗಿದೆ. ನಿಮ್ಮ ಹೂಡಿಕೆ ದೀರ್ಘಕಾಲವಿದ್ದಷ್ಟೂ ನೀವು ಬಯಸಿದ ಪ್ರತಿಫಲ ದೊರೆಯುವ ಸಾಧ್ಯತೆ ಹೆಚ್ಚುವುದರಿಂದ ಸರಿಯಾಗಿ ವಿಚಾರ ಮಾಡದೆ ನಿಮ್ಮ ಅಗತ್ಯ ಹೂಡಿಕೆಯನ್ನೆಂದೂ ನಿಲ್ಲಿಸಬೇಡಿ. ವೈವಿಧ್ಯಮಯ ಹೂಡಿಕೆ ಯೋಜನೆಯನ್ನು ರೂಪಿಸಲು ನಿಮ್ಮ ಹಣಕಾಸು ಸಲಹೆಗಾರರೊಂದಿಗೆ ಸಮಾಲೋಚಿಸಲು ಹಿಂಜರಿಯಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News