ಕ್ಷಯರೋಗವು ಕೊರೋನ ವೈರಸ್‌ಗಿಂತಲೂ ಹೆಚ್ಚು ಅಪಾಯಕಾರಿ ಹೇಗೆ?

Update: 2020-04-25 17:49 GMT

ಕೊರೋನ ವೈರಸ್‌ಗಿಂತಲೂ ಹೆಚ್ಚು ಅಪಾಯಕಾರಿಯಾಗಿರುವ ರೋಗಗಳಲ್ಲಿ ಈಗಾಗಲೇ ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡಿರುವ ಕ್ಷಯರೋಗವೂ ಒಂದು ಎನ್ನುವುದು ನಿಮಗೆ ಗೊತ್ತೇ? ವ್ಯಕ್ತಿಯಲ್ಲಿ ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ ಇತ್ಯಾದಿ ಲಕ್ಷಣಗಳು ಕಂಡು ಬಂದರೆ ಅದು ಕೊರೋನ ವೈರಸ್ ಸೋಂಕನ್ನು ಸೂಚಿಸಬಹುದು. ಅಲ್ಲದೆ ಈಗಾಗಲೇ ಇತರ ಕಾಯಿಲೆಗಳನ್ನು ಹೊಂದಿರುವವರು ಕೊರೋನ ವೈರಸ್ ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ.

ಇತರ ದೇಶಗಳೊಂದಿಗೆ ಭಾರತವೂ ಕೊರೋನ ವೈರಸ್‌ನ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದರೆ ಕ್ಷಯರೋಗವೂ ಒಂದು ಮಾರಣಾಂತಿಕ ರೋಗವಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ಅಗತ್ಯವಾಗುತ್ತದೆ. ಕೊರೋನ ವೈರಸ್‌ನಂತೆ ಕ್ಷಯವು ಕೂಡ ಸಾಂಕ್ರಾಮಿಕ ರೋಗವಾಗಿದ್ದು,ಸಾಮಾನ್ಯವಾಗಿ ಶ್ವಾಸಕೋಶಗಳ ಮೇಲೆ ದಾಳಿ ಮಾಡುತ್ತದೆ.

ಕ್ಷಯರೋಗ ಅಥವಾ ಟಿಬಿಯಲ್ಲಿ ಸಕ್ರಿಯ ಮತ್ತು ಸುಪ್ತ ಹೀಗೆ ಎರಡು ವಿಧಗಳಿವೆ. ಎದೆನೋವು,ಚಳಿ,ಜ್ವರ,ಹಸಿವು ಕ್ಷೀಣ,ರಾತ್ರಿ ಬೆವರುವಿಕೆ,ಕೆಮ್ಮು,ಕೆಮ್ಮಿದಾಗ ರಕ್ತ ಬರುವುದು,ಅಯಾಚಿತವಾಗಿ ಶರೀರದ ತೂಕ ಕಡಿಮೆಯಾಗುವುದು ಮತ್ತು ಬಳಲಿಕೆ ಇವು ಟಿಬಿಯ ಲಕ್ಷಣಗಳಾಗಿವೆ.

ಶೀತ ಅಥವಾ ಫ್ಲೂದಂತೆ ಗಾಳಿಯ ಮೂಲಕ ಹರಡುವ ಮೈಕೊಬ್ಯಾಕ್ಟೀರಿಯಂ ಟುಬರ್‌ಕುಲೋಸಿಸ್ ವೈರಸ್ ಟಿಬಿಯನ್ನುಂಟು ಮಾಡುತ್ತದೆ. ಈ ವೈರಸ್‌ನಿಂದ ಸೋಂಕಿತ ವ್ಯಕ್ತಿಯು ಸೀನಿದಾಗ ಅಥವಾ ಕೆಮ್ಮಿದಾಗ ಸೂಕ್ಷ್ಮಜೀವಿಗಳನ್ನೊಳಗೊಂಡ ತುಂತುರು ಹನಿಗಳು ಬಿಡುಗಡೆಗೊಳ್ಳುತ್ತವೆ. ಈ ಸೂಕ್ಷ್ಮಜೀವಿಗಳನ್ನು ಉಸಿರಾಡಿಸುವವರಿಗೂ ಟಿಬಿ ಬರಬಹುದು. ಟಿಬಿಯನ್ನು ತಡೆಯುವುದು ಪ್ರಸಕ್ತ ಕಾಲಘಟ್ಟದ ಅಗತ್ಯವಾಗಿದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.

 ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ವಿಶ್ವಾದ್ಯಂತ ಒಂದು ಕೋಟಿಗೂ ಅಧಿಕ ಕ್ಷಯರೋಗಿಗಳಿದ್ದಾರೆ. ಇಂದು ಜಗತ್ತು ಕೊರೋನ ವೈರಸ್ ಭೀತಿಯಲ್ಲಿ ಸಿಲುಕಿ ನಲುಗುತ್ತಿದೆ ಮತ್ತು ಈವರೆಗೆ ಅದಕ್ಕೆ ಔಷಧಿಯನ್ನು ಕಂಡುಹಿಡಿಯಲಾಗಿಲ್ಲ. ಗಾಳಿಯ ಮೂಲಕ ಹರಡುವ ಟಿಬಿಯನ್ನು ಗುಣಪಡಿಸಬಹುದಾದರೂ ಅದಿನ್ನೂ ಕಳವಳಕಾರಿ ರೋಗವಾಗಿದೆ ಮತ್ತು ಭಾರತದ ಆರೋಗ್ಯ ರಕ್ಷಣೆ ವ್ಯವಸ್ಥೆಗೆ ಸವಾಲಾಗಿದೆ. ಟಿಬಿಯು ಭಾರತದಲ್ಲಿ ಪ್ರತಿ ದಿನ 1,400ಕ್ಕೂ ಅಧಿಕ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದು,ಅಂಕಿಅಂಶಗಳು ಕೊರೋನ ವೈರಸ್‌ಗಿಂತ ಹೆಚ್ಚು ಭಯಾನಕವಾಗಿವೆ. ಕೋವಿಡ್-19ರಂತೆ ಟಿಬಿಗೆ ಸಂಬಂಧಿಸಿದಂತೆಯೂ ನಿಖರವಾದ ರೋಗನಿರ್ಣಯ ಮತ್ತು ಅದನ್ನು ಎದುರಿಸಲು ಅಗತ್ಯವಿರುವ ಔಷಧಿಗಳ ಬಗ್ಗೆ ಮಾಹಿತಿಯ ಕೊರತೆಯು ಇದಕ್ಕೆ ಕಾರಣವಾಗಿದೆ. ಕೋವಿಡ್-19ಕ್ಕೆ ನಮ್ಮಲ್ಲಿ ಔಷಧಿಯಿಲ್ಲ. ಟಿಬಿಗೆ ಚಿಕಿತ್ಸೆಯನ್ನು ನೀಡಬಹುದು,ಆದರೂ ಸಾವಿರಾರು ಜನರು ಈ ರೋಗದಿಂದ ಸಾಯುತ್ತಿದ್ದಾರೆ.

ಹೀಗೆ ಟಿಬಿಯು ಮಾರಣಾಂತಿಕ ಕಾಯಿಲೆಗಳಲ್ಲೊಂದಾಗಿದೆ ಮತ್ತು ಕೊರೋನ ವೈರಸ್ ಸೋಂಕು ಹರಡುವಿಕೆ ತಡೆಯಲು ಕ್ರಮಗಳನ್ನು ತೆಗೆದುಕೊಂಡಿರುವ ರೀತಿಯಲ್ಲಿ ಕ್ಷಯರೋಗವನ್ನೂ ತಕ್ಷಣ ನಿರ್ವಹಿಸುವ ಅಗತ್ಯವಿದೆ. ಕೋವಿಡ್-19 ನಮ್ಮ ಕಣ್ಣುಗಳನ್ನು ತೆರೆಸಿದೆ. ಟಿಬಿಗೆ ಸಂಬಂಧಿಸಿ ಉಂಟಾಗುವ ಸಾವುಗಳ ಸಂಖ್ಯೆಯನ್ನು ತಗ್ಗಿಸಲು ಕೊರೋನ ವೈರಸ್‌ನಂತೆ ಈ ರೋಗದ ವಿರುದ್ಧವೂ ಹೋರಾಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News