ಜಿಲ್ಲೆಯ ಬದಲು ತಾಲೂಕು ಮಟ್ಟದಲ್ಲಿ ಲಾಕ್‍ಡೌನ್ ಸಡಿಲಿಕೆಗೆ ಚಿಂತನೆ: ಸಚಿವ ಆರ್.ಅಶೋಕ್

Update: 2020-04-28 14:59 GMT

ಬೆಂಗಳೂರು, ಎ,28: ರಾಜ್ಯದಲ್ಲಿ ಮೇ 3ರ ನಂತರ ಜಿಲ್ಲಾ ಮಟ್ಟದ ಬದಲು ತಾಲೂಕು ಮಟ್ಟದಲ್ಲಿ, ವಾರ್ಡ್ ಹಂತದಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಕೊರೋನ ವೈರಸ್ ಸೋಂಕಿನಿಂದಾಗಿ ಲಾಕ್‍ಡೌನ್ ಆಗಿರುವ ಜಯನಗರ ವಿಧಾನಸಭಾ ಕ್ಷೇತ್ರದ ಸಾರಕ್ಕಿ ಮತ್ತು ಜೆ.ಪಿ. ನಗರ ವಾರ್ಡ್‍ಗಳಲ್ಲಿ ತೀರಾ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮಾಜಿ ಮಹಾಪೌರ ಎಸ್.ಕೆ. ನಟರಾಜ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ತಳ್ಳುಗಾಡಿಗಳ ಮೂಲಕ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಜಿಲ್ಲಾ ಮಟ್ಟದಲ್ಲಿ ಲಾಕ್‍ಡೌನ್ ಮಾಡಿದರೆ ಇಡೀ ಜಿಲ್ಲೆಯಲ್ಲಿ ಚಟುವಟಿಕೆ ಸ್ಥಗಿತಗೊಳ್ಳಲಿದೆ. ಬದಲಿಗೆ ತಾಲೂಕು ಮಟ್ಟದಲ್ಲಿ ಲಾಕ್‍ಡೌನ್ ಮಾಡುವ ಕುರಿತು ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

ಬೆಂಗಳೂರು ನಗರದಲ್ಲಿ 198 ವಾರ್ಡ್ ಗಳಿದ್ದು, ಕೆಲವು ವಾರ್ಡ್‍ಗಳಲ್ಲಿ ಕೊರೋನ ಸಮಸ್ಯೆ ಕಂಡು ಬಂದಿದೆ. ಹಾಗೆಂದು ಇಡೀ ಜಿಲ್ಲೆಯನ್ನು ಲಾಕ್‍ಡೌನ್ ಮಾಡಿದರೆ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡು ತೀವ್ರ ಸಮಸ್ಯೆ ಎದುರಾಗಲಿದೆ. ಹೀಗಾಗಿ ನಗರ ಪ್ರದೇಶಗಳಲ್ಲಿ ವಾರ್ಡ್‍ಗಳ ಮಟ್ಟದಲ್ಲಿ ಮಾತ್ರ ಲಾಕ್‍ಡೌನ್ ಮಾಡಲು ಉದ್ದೇಶಿಸಲಾಗಿದೆ ಎಂದರು. 

ಮೇ 3ರ ಲಾಕ್‍ಡೌನ್ ಸಡಿಲಿಸಲಾಗುತ್ತಿದ್ದು, ಕೂಲಿ ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ದೊರೆಯಲಿದೆ. ಎಲ್ಲರ ಸಹಕಾರದಿಂದ ಕೊರೋನ ವೈರಸ್ ಮುಕ್ತ ಭಾರತ ನಿರ್ಮಾಣ ಮಾಡಬಹುದು. ಕೊರೋನ ವೈರಸ್ ಇಡಿ ವಿಶ್ವಕ್ಕೆ ಮಹಾಮಾರಿಯಾಗಿ ವಕ್ಕರಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದಿಟ್ಟ ನಿರ್ಧಾರದಿಂದ ರಾಜ್ಯ ಮತ್ತು ದೇಶದಲ್ಲಿ ಸೋಂಕು ನಿಯಂತ್ರಣದಲ್ಲಿದೆ ಎಂದು ಅಶೋಕ್ ಹೇಳಿದರು.

ಎಸ್.ಕೆ. ನಟರಾಜ್ ಮಾತನಾಡಿ, ಕೊರೋನ ವೈರಸ್‍ನಿಂದ ಸಂಕಷ್ಟದಲ್ಲಿದ್ದು, ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಬಡವರು, ಮಹಿಳೆಯರು, ವಯೊವೃದ್ದರು, ಆಟೋಚಾಲಕರನ್ನು ಗುರುತಿಸಿ ಆಹಾರಧಾನ್ಯ ವಿತರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹಸಿವಿನಿಂದ ಯಾರೂ ಬಳಲಬಾರದು ಎಂಬ ಕಾರಣದಿಂದ 5,000 ಸಾವಿರ ಕುಟುಂಬಗಳಿಗೆ ಅಕ್ಕಿ, ಬೇಳೆ ಮತ್ತು ಅಡುಗೆ ಎಣ್ಣೆ ಗೋಧಿ ಇನ್ನಿತರೆ ಆಹಾರ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ಇನ್ನೂ ಮೂರು ಸಾವಿರ ಕಿಟ್‍ಗಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News