ಮುಖ್ಯಮಂತ್ರಿಯಿಂದ ಆಟೋ, ಕ್ಯಾಬ್ ಚಾಲಕರಿಗೆ 5 ಸಾವಿರ ಸಹಾಯಧನದ ಭರವಸೆ: ಎಎಪಿ

Update: 2020-04-30 18:10 GMT

ಬೆಂಗಳೂರು, ಎ.30: ಆಟೋ, ಕ್ಯಾಬ್, ಅರೆ ಸರಕು ಸಾಗಣೆ ಚಾಲಕರಿಗೆ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಆಮ್ ಆದ್ಮಿ ಪಕ್ಷದ ರಾಜ್ಯ ಆಟೋ ಚಾಲಕರ ಸಂಘ ಮನವಿ ಸಲ್ಲಿಸಿದೆ.

ಬೆಂಗಳೂರು ನಗರ ಒಂದರಲ್ಲೇ ಸುಮಾರು 1.5 ಲಕ್ಷದಷ್ಟು ಆಟೋ ಚಾಲಕರು, 1 ಲಕ್ಷದಷ್ಟು ಆಟೋ ಮೆಕ್ಯಾನಿಕ್‍ಗಳು, 85 ಸಾವಿರದಷ್ಟು ಕ್ಯಾಬ್ ಚಾಲಕರಿದ್ದಾರೆ. ಇವರಲ್ಲಿ ಹೆಚ್ಚಿನವರು ಬ್ಯಾಂಕ್‍ನಿಂದ ವಾಹನ ಸಾಲ, ಖಾಸಗಿ ಲೇವಾದೇವಿಗಾರರಿಂದ, ಫೈನಾನ್ಸ್ ಗಳಿಂದ ಹಣ ಪಡೆದು ತಿಂಗಳ, ತಿಂಗಳ ಕಂತುಗಳಲ್ಲಿ ಹಣವನ್ನು ಕಟ್ಟುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದವರು, ಅಂದಂದಿನ ದುಡಿಮೆಯನ್ನೇ ನಂಬಿಕೊಂಡವರು ಲಾಕ್‍ಡೌನ್‍ನಿಂದ ತೊಂದರೆಗೆ ಒಳಗಾಗಿದ್ದಾರೆ.

ದಿಲ್ಲಿಯ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರಕಾರ ಈಗಾಗಲೇ ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರುಪಾಯಿಗಳ ಸಹಾಯ ನಿಧಿಯನ್ನು ನೀಡಿದೆ. ಈ ಆರ್ಥಿಕ ನೆರವಿನ ಲಾಭ ಗ್ರಾಮೀಣ್ ಸೇವಾ, ಇ-ರಿಕ್ಷಾಗಳು, ಕ್ಯಾಬ್, ಶಾಲಾ ವಾಹನಗಳು ಮೊದಲಾದ ಅರೆ ಸಾಗಣೆ ವಾಹನಗಳ ಚಾಲಕರಿಗೆ ನೀಡಲಾಗಿದೆ. ಇದೇ ಯೋಜನೆಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ಎಎಪಿ ಆಗ್ರಹಿಸಿದೆ.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು ಮೇ 3ನೇ ತಾರೀಕಿನ ಒಳಗೆ 5 ಸಾವಿರ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಎಎಪಿ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News