ನಿತ್ಯೋತ್ಸವ ಕವಿಯ ತವರಾಗಿದ್ದ ಶಿವಮೊಗ್ಗ

Update: 2020-05-04 10:46 GMT

 ಶಿವಮೊಗ್ಗ, ಮೇ 3: ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್. ನಿಸಾರ್ ಅಹಮದ್ (84) ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ನಿಧನರಾಗಿದ್ದಾರೆ.

ತವರಾಗಿದ್ದ ಶಿವಮೊಗ್ಗ: ಪ್ರೊ.ಕೆ.ಎಸ್. ನಿಸಾರ್ ಅಹಮದ್ ಅವರ ಹುಟ್ಟೂರು ಬೆಂಗಳೂರು. ಆದರೆ, ಅನೇಕ ಮಂದಿ ಅವರನ್ನು ಶಿವಮೊಗ್ಗದವರು ಎಂದು ಭಾವಿಸಿದ್ದಾರೆ. ‘ನಿಸಾರ್ ಅಹಮದ್ ಅವರಿಗೆ ಶಿವಮೊಗ್ಗ ಜಿಲ್ಲೆ ತವರು ಮನೆಯಾಗಿತ್ತು’ ಎಂದು ಸ್ಮರಿಸಿಕೊಳ್ಳುತ್ತಾರೆ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಜಿಲ್ಲಾಧ್ಯಕ್ಷ ಡಿ.ಮಂಜುನಾಥ. ಸಹ್ಯಾದ್ರಿ ಕಾಲೇಜ್‌ನೊಂದಿಗೆ ನಂಟು

ನಿಸಾರ್ ಅಹಮದ್ ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಭೂಗರ್ಭ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸುಲಭವಾಗ ಪಾಠ ಅರ್ಥವಾಗಬೇಕು ಎಂದು ಇಂಗ್ಲಿಷ್‌ನಲ್ಲಿ ಪಾಠ ಮುಗಿಸಿ, ಕೊನೆಗೆ ಕನ್ನಡದಲ್ಲಿ ವಿವರಿಸುತ್ತಿದ್ದರು. ಇದೇ ಕಾರಣಕ್ಕೆ ಬಹುಬೇಗ ಅವರು ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾದರು.

ಮೀನಾಕ್ಷಿ ಭವನದ ರೂಂ, ಮಸಾಲೆ ದೋಸೆ

ಈ ಮೊದಲು ಮೀನಾಕ್ಷಿ ಭವನದಲ್ಲಿ ಕೋಣೆಗಳಿದ್ದವು. ಪ್ರೊ. ನಿಸಾರ್ ಅಹಮದ್ ಅವರು ಅಲ್ಲಿಯೇ ಉಳಿದುಕೊಂಡಿದ್ದರು’ ಎನ್ನುತ್ತಾರೆ ಸಹ್ಯಾದ್ರಿ ಕಾಲೇಜ್‌ನ ಇಂಗ್ಲಿಷ್ ಉಪನ್ಯಾಸಕ ಸಿರಾಜ್ ಅಹಮದ್. ಇನ್ನು, ಮೀನಾಕ್ಷಿ ಭವನದ ಮಸಾಲೆ ದೋಸೆ ಅಂದರೆ ಅವರಿಗೆ ಬಲು ಇಷ್ಟ. ಶಿವಮೊಗ್ಗಕ್ಕೆ ಬಂದಾಗಲೆಲ್ಲಾ ಅವಕಾಶ ಸಿಕ್ಕರೆ ಮಸಾಲೆ ದೋಸೆ ಸವಿಯುತ್ತಿದ್ದರು ಎಂದು ಡಿ.ಮಂಜುನಾಥ್‌ನೆನಪಿಸಿಕೊಳ್ಳುತ್ತಾರೆ.

ಹಳೆ ಸೇತುವೆ ಮೇಲೆ ಬಲು ಪ್ರೀತಿ: ಪ್ರತಿದಿನ ಮೀನಾಕ್ಷಿ ಭವನದಿಂದ ಸಹ್ಯಾದ್ರಿ ಕಾಲೇಜಿಗೆ ತೆರಳುವಾಗ ತುಂಗಾ ನದಿಯ ಹಳೆ ಸೇತುವೆ ದಾಟಿ ಅವರು ಹೋಗುತ್ತಿದ್ದರು. ಅವರ ಹಲವು ಕವಿತೆ, ಸಾಹಿತ್ಯ ಚರ್ಚೆಯ ವೇಳೆ ಈ ಸೇತುವೆಯನ್ನು ಅವರು ಪ್ರಸ್ತಾಪಿಸುತ್ತಿದ್ದರು. ಹಲವು ಸಂದರ್ಶನ, ಅನೇಕ ಗೋಷ್ಠಿಗಳಲ್ಲಿ ಶಿವಮೊಗ್ಗದ ನೆನಪಿನ ಬುತ್ತಿ ಬಿಚ್ಚಿದಾಗ ನೂರು ವರ್ಷದ ಹಳೆಯ ಸೇತುವೆಯನ್ನು ಅವರು ಸ್ಮರಿಸುತ್ತಿದ್ದರು.

ಶಿವಮೊಗ್ಗದಲ್ಲೇ ಸಮ್ಮೇಳನಾಧ್ಯಕ್ಷರಾದರು

2006ರ ಡಿಸೆಂಬರ್‌ನಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರೊ.ಕೆ.ಎಸ್. ನಿಸಾರ್ ಅಹಮದ್ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಶಿವಮೊಗ್ಗದಲ್ಲಿ ನಡೆಯುವ ಸಮ್ಮೇಳನ ಅಂದಾಕ್ಷಣ ಪುಳಕಿತರಾದರು. ಆಗ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದದ್ದು ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ‘ಯಡಿಯೂರಪ್ಪ ಅವರೊಂದಿಗೆ ನಾವೆಲ್ಲ ಪ್ರೊ. ನಿಸಾರ್ ಅಹಮದ್ ಅವರ ಮನೆಗೆ ತೆರಳಿ ಆಹ್ವಾನ ನೀಡಿದ್ದೆವು. ಸಮ್ಮೇಳನ ಅಧ್ಯಕ್ಷರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಂತೆ ಎಂಆರ್‌ಎಸ್‌ವೃತ್ತದಿಂದ ಅವರಿಗೆ ಮೆರವಣಿಗೆ ಮಾಡಲಾಗಿತ್ತು’ ಎಂದು ಸ್ಮರಿಸಿಕೊಳ್ಳುತ್ತಾರೆ ಕನ್ನಡ ಸಾಹಿತ್ಯ ಪರಿಷತ್‌ನ ಆಗಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್.

ಪ್ರಾಣ ಹೋದರೂ ಚಿಂತೆಯಿಲ್ಲ.

ರಾಜ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಿಸಾರ್ ಅಹಮದ್ ಅವರು ಒಂದು ವಾರ ಜ್ಯುವೆಲ್ ರಾಕ್ ಹೊಟೇಲ್‌ನಲ್ಲಿ ಕುಟುಂಬ ಸಹಿತ ಉಳಿದಿದ್ದರು. ಸಮ್ಮೇಳನದಲ್ಲಿ ಅವರಿಗೆ ಸನ್ಮಾನ ಮಾಡಲಾಯಿತು. ‘ಸನ್ಮಾನದ ಸಂದರ್ಭದಲ್ಲಿ ನನ್ನ ಬದುಕು ಪಾವನವಾಯ್ತು. ನನ್ನ ಗುರು ಕುವೆಂಪು ಅವರು ಓಡಾಡಿದ ನೆಲದಲ್ಲಿ ನನಗೆ ಇಂತಹ ಅವಕಾಶ ಸಿಕ್ಕಿದೆ. ಇವತ್ತೇ ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ ಎಂದು ಅವರು ಹೇಳಿದ್ದರು’ ಎಂದು ಡಿ.ಮಂಜುನಾಥ್ ನೆನಪು ಮಾಡಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಹುಟ್ಟಿತು ಜೋಗದ ಸಿರಿ ಬೆಳಕಿನಲ್ಲಿ..

‘ಜೋಗದ ಸಿರಿ ಬೆಳಕಿನಲ್ಲಿ..’

ಅಂದಾಕ್ಷಣ ಎಲ್ಲರಿಗೂ ಪ್ರೊ.ನಿಸಾರ್ ಅಹಮದ್ ನೆನಪಾಗುತ್ತಾರೆ. ಶಿವಮೊಗ್ಗದ ಪ್ರಕೃತಿ ಸೌಂದರ್ಯ, ಇತಿಹಾಸ, ಸಾಮಾಜಿಕ, ಸಾಂಸ್ಕೃತಿಕ ಜೀವನ, ರಾಜ್ಯದ ವೈವಿಧ್ಯತೆಯನ್ನು ಒಳಗೊಂಡಿರುವ ಕವನ ಅದು. ಶಿವಮೊಗ್ಗದ ವರ್ಣನೆ ಮಾಡಿದ್ದ ಈ ಕವಿತೆ ಸಿದ್ಧವಾದದ್ದು ಬೆಂಗಳೂರಿನಲ್ಲಿ. ಇದನ್ನು ಹಲವು ಸಂದರ್ಶನಗಳಲ್ಲಿ ಅವರು ಹೇಳಿಕೊಂಡಿದ್ದಿದೆ. ಅಕಾಶವಾಣಿಗಾಗಿ ರಚಿಸಿದ ಕಾವ್ಯ ಅದು. ಮೈಸೂರು ಅನಂತಸ್ವಾಮಿ ಅವರು ಒಮ್ಮೆ ಶಿವಮೊಗ್ಗಕ್ಕೆ ಬಂದಾಗ ಈ ಕಾವ್ಯವನ್ನು ರೇವತಿ ರಾಗದಲ್ಲಿ ಹಾಡಿದ್ದರು. ಆಗ ಜೊತೆಗಿದ್ದ ವರೆಲ್ಲ ಖುಷಿಪಟ್ಟು ಮತ್ತೆ ಮತ್ತೆ ಹಾಡಿಸಿದ್ದರಂತೆ. ಆಗಿನಿಂದ ನಿತ್ಯೋತ್ಸವ ಕವಿತೆ ಹೆಚ್ಚು ಜನಮನ್ನಣೆ ಪಡೆಯಿತು ಎಂದು ಅವರೇ ಪ್ರಸ್ತಾಪಿಸಿದ್ದಿದೆ.

ಪ್ರಮುಖ ಕಾವ್ಯಗಳು ಹುಟ್ಟಿದ್ದೇ ಶಿವಮೊಗ್ಗದಲ್ಲಿ

 ಪ್ರೊ. ನಿಸಾರ್ ಅಹಮದ್ ಅವರ ಪಾಲಿಗೆ ಶಿವಮೊಗ್ಗ ತವರು ಮನೆಯಂತಾಗಿತ್ತು. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಅವರು ಮನಸೋತಿದ್ದರು. ಅಷ್ಟೇ ಅಲ್ಲ, ಅವರ ಹಲವು ಕವನ ಸಂಕಲನಗಳು ಹುಟ್ಟಿದ್ದೂ ಶಿವಮೊಗ್ಗದಲ್ಲೇ. ‘ಸಂಜೆ ಐದರ ಮಳೆ, ನಿತ್ಯೋತ್ಸವ, ಮನಸು ಗಾಂಧಿ ಬಜಾರ್ ಸೇರಿದಂತೆ ಪ್ರಮುಖ ಕವನಗಳು ಸಿದ್ಧವಾದದ್ದು ಶಿವಮೊಗ್ಗ ಜಿಲ್ಲೆಯಲ್ಲೇ’ ಎನ್ನುತ್ತಾರೆ ಹಿರಿಯ ಪತ್ರಕರ್ತ ಶಿ.ಜು. ಪಾಶ. ‘ನನ್ನ ಯಾವುದೇ ಕವನ ಸಂಕಲನ ಸಿದ್ಧವಾದರೂ ಅವರಿಗೆ ಒಂದು ಪ್ರತಿ ಕಳುಹಿಸುತ್ತಿದ್ದೆ. ಅದನ್ನು ಓದಿ, ಅವರು ಪತ್ರ ಬರೆಯುತ್ತಿದ್ದರು. 2017ರ ಮೈಸೂರು ಸಮ್ಮೇಳನದಲ್ಲಿ ಅವರನ್ನು ಭೇಟಿಯಾಗಿದ್ದೆ ಕೊನೆ’ ಎಂದು ನನೆಪು ಮಾಡಿಕೊಳ್ಳುತ್ತಾರೆ ಪಾಶ.

ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಾದರೂ, ಶಿವಮೊಗ್ಗದ ಬಗ್ಗೆ ಅತಿ ಹೆಚ್ಚು ಪ್ರೀತಿಯನ್ನು ಪ್ರೊ.ಕೆ.ಎಸ್. ನಿಸಾರ್ ಅಹಮದ್ ಹೊಂದಿದ್ದರು. ಸಾಹಿತ್ಯ ಲೋಕದ ಮತ್ತೊಂದು ಅಪರೂಪದ ನಕ್ಷತ್ರ ಮರೆಯಾಗಿದೆ.

Writer - ಶರತ್ ಪುರದಾಳ್

contributor

Editor - ಶರತ್ ಪುರದಾಳ್

contributor

Similar News