ಆರ್ಥಿಕ ಬೆಳವಣಿಗೆಗೆ ಕೇಂದ್ರ ಸರಕಾರದಿಂದ ಬಂಪರ್ ಕೊಡುಗೆ: ಎಫ್‍ಕೆಸಿಸಿಐ

Update: 2020-05-13 17:53 GMT

ಬೆಂಗಳೂರು, ಮೇ 13: ಇಡೀ ವಿಶ್ವ ಹಾಗೂ ಭಾರತವು ಕೋವಿಡ್-19ನಿಂದ ನಲುಗಿ ಹೋಗಿರುವ ಈ ಸಂದರ್ಭದಲ್ಲಿ ದೇಶದ 1.3 ಬಿಲಿಯನ್ ಜನರ ಯೋಗಕ್ಷೇಮದ ಬಗ್ಗೆಯೆ ಸದಾ ಚಿಂತಿಸುತ್ತಿದ್ದ, ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಘೋಷಿಸಿದ್ದ 1.7 ಲಕ್ಷ ಕೋಟಿ ರೂ.ಸ್ಟಿಮ್ಯುಲಸ್ ಪ್ಯಾಕೇಜ್ ಮರೆಯುವ ಮುನ್ನವೆ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ದೇಶದ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡಿರುವಂತದ್ದು ಎಂದು ಎಫ್‍ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ ತಿಳಿಸಿದ್ದಾರೆ.

ಪ್ರಧಾನಮಂತ್ರಿ, ಹಣಕಾಸು ಸಚಿವರು, ಎಂಎಸ್‍ಎಂಇ ಸಚಿವರು ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದಗೌಡರಿಗೆ ಎಫ್‍ಕೆಸಿಸಿಐ ಕೋವಿಡ್-19 ಲಾಕ್‍ಡೌನ್ ಸಂದರ್ಭದಲ್ಲಿ ಹಲವಾರು ಸಲಹೆಗಳನ್ನು ನೀಡುತ್ತಾ ಬಂದಿತ್ತು. ಈ ಪ್ಯಾಕೇಜ್ ಗಮನಿಸಿದಲ್ಲಿ ನಾವು ಕೇಳಿರುವ ಎಲ್ಲ ಅಂಶಗಳು ಈ ಪ್ಯಾಕೇಜ್ ಒಳಗೊಂಡಿರುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದ್ದಾರೆ.

ಕೋವಿಡ್-19 ಸಂದರ್ಭದಲ್ಲಿ ಎಂಎಸ್‍ಎಂಇ ಕ್ಷೇತ್ರವು ಅತ್ಯಂತ ಕ್ಲಿಷ್ಟ ಪರಿಸ್ಥಿತಿಯನ್ನು ಅನುಭವಿಸಿ, ಅವನತಿಯ ಅಂಚಿಗೆ ತೆರಳಲು ಅವಕಾಶ ಕೊಡದೆ ಎಂಎಸ್‍ಎಂಇ ಕ್ಷೇತ್ರಕ್ಕೆ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ನೀಡಿದೆ. ಮುಖ್ಯವಾಗಿ ಈ ಕೆಳಕಂಡ ಪ್ರಮುಖ ನಿರ್ಧಾರಗಳಿಂದ ಮುಂದಿನ ದಿನಗಳಲ್ಲಿ ಎಂಎಸ್‍ಎಂಇ ಕ್ಷೇತ್ರವು ದಾಪುಗಾಲು ಹಾಕಿಕೊಂಡು ಅಭಿವೃದ್ಧಿ ಹೊಂದುತ್ತವೆ ಎಂಬುದರಲ್ಲಿ ಯಾವುದೆ ಸಂದೇಹವಿಲ್ಲ ಎಂದು ಜನಾರ್ದನ್ ತಿಳಿಸಿದ್ದಾರೆ.

ಎಂಎಸ್‍ಎಂಇಗಳಿಗೆ ಯಾವುದೆ ಅಡಮಾನವಿಲ್ಲದೆ ಸಾಲ ಕೊಡಲು ನಿರ್ಧಾರ, ಬ್ಯಾಂಕ್ ನೀಡುವ ಸಾಲಕ್ಕೆ ಕೇಂದ್ರ ಸರಕಾರದ ಗ್ಯಾರಂಟಿ, ಸಾಲ ಮರುಪಾವತಿಗೆ ನಾಲ್ಕು ವರ್ಷ ಅವಕಾಶ, ಸಾಲಕ್ಕೆ ಮೊದಲ 12 ತಿಂಗಳವರೆಗೆ ಮರುಪಾವತಿ ಅವಶ್ಯಕತೆ ಇಲ್ಲ, ಸಾಲ ಪಡೆಯಲು ಯಾವುದೆ ಶುಲ್ಕ ಇಲ್ಲ, ಸಂಬಳ ಪಾವತಿಗೆ ಸಣ್ಣ ಕೈಗಾರಿಕೆಗಳಿಗೆ ತಕ್ಷಣ ಸಾಲ ಮಂಜೂರು, ಅ.31ರವರೆಗೆ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

200 ಕೋಟಿ ರೂ.ವರೆಗೆ ಗ್ಲೋಬಲ್ ಟೆಂಡರ್ ಇರುವುದಿಲ್ಲ. ಈ ಟೆಂಡರ್‍ನಲ್ಲಿ ವಿದೇಶಿ ಕಂಪೆನಿಗಳು ಭಾಗವಹಿಸಲು ಅವಕಾಶವಿರುವುದಿಲ್ಲ ಹಾಗೂ ಈ ಟೆಂಡರ್‍ಗಳಲ್ಲಿ ಸಣ್ಣ ಕೈಗಾರಿಕೆಗಳಿಗೆ ಆದ್ಯತೆ. 15 ಸಾವಿರ ರೂ.ವರೆಗಿನ ಸಂಬಳ ಪಡೆಯುವವರಿಗೆ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳವರೆಗೆ ತಕ್ಷಣ ಇಪಿಎಫ್ ಹಣವನ್ನು ಕೇಂದ್ರ ಸರಕಾರವೆ ಪಾವತಿಸಲಿದೆ ಎಂದು ಜನಾರ್ದನ್ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಉದ್ದಿಮೆಗಳು ಉಳಿಸಿಕೊಂಡಿರುವ ಬಾಕಿಯನ್ನು 45 ದಿನಗಳೊಳಗೆ ಎಸ್‍ಎಂಇಗಳಿಗೆ ಪಾವತಿಗೆ ಕ್ರಮ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಿಗೆ ಒಂದೇ ವ್ಯಾಖ್ಯಾನವನ್ನು ನೀಡಿ, ಬಂಡವಾಳ ಹೂಡಿಕೆ ಮಿತಿಯನ್ನು ಮತ್ತು ವಾರ್ಷಿಕ ವಹಿವಾಟು ಮಿತಿಯನ್ನು ಗಣನೀಯ ಪ್ರಮಾಣದಲ್ಲಿ ಏರಿಸಲಾಗಿದೆ. ಇದರ ಜೊತೆಗೆ ಇತರ ಕ್ಷೇತ್ರಗಳಾದ ರಿಯಲ್ ಎಸ್ಟೇಟ್, ಎನ್‍ಬಿಎಫ್‍ಸಿ ಮತ್ತು ಎಂಎಫ್‍ಐ ಕ್ಷೇತ್ರಗಳಿಗೆ ಸವಲತ್ತುಗಳನ್ನು ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಪ್ಯಾಕೇಜ್‍ನಿಂದ ದೇಶವು ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಸಾಧಿಸಿ, ಹೊಸ ಭಾರತವನ್ನು ನಿರ್ಮಿಸಲು ಪಣತೊಟ್ಟಿರುವ ಪ್ರಧಾನಿಯ ಕನಸು ನನಸಾಗಿ, ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ನಾಂದಿಯಾಡಲಿದ್ದಾರೆ ಎಂದು ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News