'ಆತ್ಮ ನಿರ್ಭರ್ ಭಾರತ್' ಘೋಷಣೆ ಪ್ರಗತಿಯ ಆಶಯವನ್ನು ದೃಢಪಡಿಸಿದೆ: ಸಿಎಂ ಯಡಿಯೂರಪ್ಪ

Update: 2020-05-14 17:08 GMT

ಬೆಂಗಳೂರು, ಮೇ 14: 'ಆತ್ಮ ನಿರ್ಭರ್ ಭಾರತ್' ಆರ್ಥಿಕ ಪುನಶ್ಚೇತನ ಯೋಜನೆಯ ಎರಡನೆ ದಿನದ ಘೋಷಣೆಗಳು, ಪ್ರಧಾನಿ ಮೋದಿ ಅವರಿಗೆ ಬಡವರ ಬಗ್ಗೆ ಇರುವ ಕಾಳಜಿಯನ್ನು ಬಿಂಬಿಸುತ್ತದೆ. ಅಲ್ಲದೆ, ಎಲ್ಲರನ್ನು ಒಳಗೊಂಡ ಪ್ರಗತಿಯ ಆಶಯವನ್ನು ದೃಢಪಡಿಸುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಗುರುವಾರ ನಗರದಲ್ಲಿ ಮಾತನಾಡಿದ ಅವರು, ವಲಸೆ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಸಣ್ಣ ರೈತರು, ಕೂಲಿ ಕಾರ್ಮಿಕರು, ಮೊದಲಾದ ಎಲ್ಲ ಸಮುದಾಯಗಳಿಗೆ ಮೂಲಸೌಲಭ್ಯ ಮತ್ತು ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಕ್ರಮ ಶ್ಲಾಘನೀಯ. ರಾಜ್ಯ ಮತ್ತು ಪ್ರಾಂತೀಯ ವಲಯದಲ್ಲಿರುವ ಕನಿಷ್ಟ ವೇತನ ತಾರತಮ್ಯವನ್ನು ತೆಗೆದು ಹಾಕುವುದು, ತಮ್ಮ ಊರುಗಳಿಗೆ ಹಿಂದಿರುಗಿದ ವಲಸಿಗ ಕಾರ್ಮಿಕರಿಗೆ ಪಡಿತರ ಚೀಟಿ ಇಲ್ಲದಿದ್ದರೂ 3,500 ಕೋಟಿ ರೂ. ವೆಚ್ಚದಲ್ಲಿ ಉಚಿತ ಪಡಿತರ ವಿತರಣೆ, ವಲಸೆ ಕಾರ್ಮಿಕರಿಗೆ ಮನೆ ಬಾಡಿಗೆ ದರ ನಿಗದಿ ಮೊದಲಾದ ಕ್ರಮಗಳು ಅವರಿಗೆ ಹೆಚ್ಚಿನ ಭರವಸೆ ನೀಡಲಿದೆ. ಮುದ್ರಾ ಶಿಶುಸಾಲ ಯೋಜನೆ ಬಡ್ಡಿ ರಿಯಾಯಿತಿ, ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ರೂ.ವರೆಗೆ ಸಾಲ ವಿಶೇಷ ಸೌಲಭ್ಯ ಒದಗಿಸಲು 5 ಸಾವಿರ ಕೋಟಿ ರೂ. ಅನುದಾನ ನಿಗದಿಪಡಿಸಿರುವುದು ಅವರಿಗೆ ಅನುಕೂಲವಾಗಲಿದೆ ಎಂದರು.

ಮಧ್ಯಮ, ಕೆಳ ಮಧ್ಯಮ ವರ್ಗದವರಿಗೆ ಗೃಹಸಾಲ ಸಬ್ಸಿಡಿ ಯೋಜನೆಗೆ 70 ಸಾವಿರ ಕೋಟಿ ರೂ. ನೆರವು ಈ ವರ್ಗದ ಜನರ ಕನಸು ಸಾಕಾರಗೊಳಿಸಲು ನೆರವಾಗಲಿದೆ. ಸಣ್ಣ ಮತ್ತು ಮಧ್ಯಮ ರೈತರಿಗೆ ಬೆಳೆ ಕೊಯ್ಲು ಮತ್ತು ಕೊಯ್ಲೋತ್ತರ ನಿರ್ವಹಣೆಗೆ ರೈತ ನಿಧಿಗೆ ಹೆಚ್ಚುವರಿ 30ಸಾವಿರ ಕೋಟಿ ರೂ.ಸೇರ್ಪಡೆ ಸಣ್ಣ ರೈತರು, ಪಶುಪಾಲಕರು ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‍ನಡಿ 2 ಲಕ್ಷ ಕೋಟಿ ರೂ.ಸಾಲ ಸೌಲಭ್ಯ ನೀಡುವ ಕ್ರಮಗಳು ಸಂಕಷ್ಟಕ್ಕೊಳಗಾದ ಈ ವಲಯಗಳ ಜನರಿಗೆ ಉಸಿರು ನೀಡಿದೆ ಏಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News