ಮೇ 18ರಿಂದ ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿ ಸೂಚನೆ

Update: 2020-05-15 17:16 GMT

ಬೆಂಗಳೂರು, ಮೇ 15: ಮೇ 17ಕ್ಕೆ ಲಾಕ್‍ಡೌನ್ ಅವಧಿ ಮುಗಿಯುತ್ತಿರುವ ಹಿನ್ನೆಲೆ ಸಿಬ್ಬಂದಿಗೆ ಬಿಎಂಟಿಸಿ ಆದೇಶ ಹೊರಡಿಸಿ ಮೇ 18ರಿಂದ ಎಲ್ಲಾ ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದೆ.

ಈಗ ಸರಕಾರವು ಕೊರೋನ ವೈರಸ್ ಲಾಕ್‍ಡೌನ್ ಹಿನ್ನೆಲೆ ಸಾರಿಗೆ ಇಲಾಖೆಯನ್ನು ಅಗತ್ಯ ಸೇವೆ ಸಲ್ಲಿಸುವ ಇಲಾಖೆ ಎಂದು ಪರಿಗಣಿಸಿದೆ. ಸದರಿ ಇಲಾಖೆಯಲ್ಲಿ ಬಿಎಂಟಿಸಿಯು ಒಳಪಡುತ್ತದೆ. ಆದ್ದರಿಂದ ಮೇ 17ರಂದು ಲಾಕ್‍ಡೌನ್ ಅವಧಿ ಪೂರ್ಣಗೊಳ್ಳಲಿದ್ದು, ಮೇ 18ರಿಂದ ಅಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಆದೇಶಿಸಿದೆ.

ಸರಕಾರ ಹಸಿರು ನಿಶಾನೆ ಕೊಟ್ಟರೆ ಬಸ್ ಸೇವೆ ಆರಂಭಿಸಲು ಬಿಎಂಟಿಸಿ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಇಲಾಖೆ, ಸಿಬ್ಬಂದಿ ತಪಾಸಣೆ ಮಾಡಿ ಸರ್ಟಿಫಿಕೇಟ್ ಕೊಡುತ್ತಿದೆ. ಬೆಂಗಳೂರಿನ 6 ಕಡೆ ಬಿಎಂಟಿಸಿ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದಾರೆ. ಬಸ್‍ನಲ್ಲಿ ಸೀಟುಗಳು ಮಾತ್ರ ಭರ್ತಿ ಮಾಡಿ, ನಿಂತುಕೊಂಡು ಪ್ರಯಾಣ ಮಾಡೋದಕ್ಕೆ ಪ್ರಯಾಣಿಕರಿಗೆ ಅವಕಾಶ ನೀಡಬೇಡಿ ಎಂದು ಸೂಚಿಸಿದೆ.

ಪ್ರತಿ ಟ್ರಿಪ್ ಆದ ಮೇಲೆ ರಾಸಾಯನಿಕ ಸಿಂಪಡಣೆ ಮಾಡಿ ಬಸ್ ಮತ್ತೆ ಸಂಚಾರ ಆರಂಭಿಸಲಿದೆ. ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದ್ದು, ಸರಕಾರ ಅನುಮತಿ ಕೊಟ್ಟರೆ ಬಸ್ ಸಂಚಾರ ಪ್ರಾರಂಭ ಮಾಡಲಾಗುವುದು ಎಂದು ಬಿಎಂಟಿಸಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಚಾಲಕ, ನಿರ್ವಾಹರಿಗೆ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ನೀಡಲು ಇಲಾಖೆ ನಿರ್ಧಾರ ಮಾಡಿದೆ. ಕ್ಯೂಆರ್(16) ಕೋಡ್ ಮೂಲಕ ಟಿಕೆಟ್ ಹಣ ಪಾವತಿ ಮಾಡುವ ವಿಧಾನಕ್ಕೂ ಸಿದ್ಧತೆ ಮಾಡಲಾಗುತ್ತಿದೆ. ಹೀಗಾಗಿ ತಿಂಗಳ ಪಾಸ್ ಮೂಲಕವೂ ಜನರಿಗೆ ಓಡಾಟ ಮಾಡಲು ಬಿಎಂಟಿಸಿ ನೆರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News