×
Ad

ಸ್ವಾವಲಂಬಿ ಭಾರತಕ್ಕೆ ಅಡಿಪಾಯದ ನಾಲ್ಕನೆ ಪ್ಯಾಕೇಜ್; ರಾಜ್ಯಕ್ಕೆ ಹೆಚ್ಚಿನ ಲಾಭ- ಯಡಿಯೂರಪ್ಪ

Update: 2020-05-16 20:20 IST

ಬೆಂಗಳೂರು, ಮೇ 16: 'ಆತ್ಮ ನಿರ್ಭರ್ ಭಾರತ' ನಿರ್ಮಾಣದ ಹಾದಿಯಲ್ಲಿ ಇಂದು ಘೋಷಿಸಿದ ಹಲವು ಯೋಜನೆಗಳು ಮತ್ತು ಹಣಕಾಸು ಸಹಾಯ ರಾಜ್ಯಕ್ಕೆ ಹೆಚ್ಚು ಲಾಭವಾಗಲಿದ್ದು, ಉದ್ಯೋಗಾವಕಾಶಗಳನ್ನು ವೃದ್ಧಿಗೊಳಿಸುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಖನಿಜ ವಲಯದಲ್ಲಿ ತರುತ್ತಿರುವ ಆಮೂಲಾಗ್ರ ಬದಲಾವಣೆ ರಾಜ್ಯದ ಖನಿಜ ನೀತಿಗೆ ಪೂರಕವಾಗಲಿದೆ. ನಮ್ಮ ರಾಜ್ಯದಲ್ಲಿ ಹಲವಾರು ಖನಿಜ ನಿಕ್ಷೇಪಗಳಿದ್ದು, ಈಗ ಅವುಗಳ ಗಣಿಗಾರಿಕೆ ಮಾಡಲು ಅವಕಾಶ ಕಲ್ಪಿಸಿಕೊಡಲಿದೆ. ಅದರಲ್ಲೂ ಈಗಿರುವ ಖನಿಜ ಸಂಬಂಧಪಟ್ಟ ಕಾಯಿದೆಗಳು ನಮಗೆ ಹೆಚ್ಚಿನ ಅವಕಾಶ ಕಲ್ಪಿಸಲು ಮತ್ತು ಗಣಿಗಾರಿಕೆ ಮಾಡಲು ಇದ್ದ ಅಡಚಣೆಗಳು ನಿವಾರಣೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ರಾಜ್ಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚುವಲ್ಲಿ ಸಹಾಯವಾಗಲಿದೆ. ರಾಜ್ಯದಲ್ಲಿ ಯಥೇಚ್ಛ ಖನಿಜ ಸಂಪತ್ತು ಇದ್ದು(ಕಬ್ಬಿಣ, ತಾಮ್ರ, ಬಂಗಾರ, ಕ್ವಾರ್ಜ್ ಮತ್ತು ಯುರೇನಿಯಂ) ಇವುಗಳನ್ನು ನಾವು ಗಣಿಗಾರಿಕೆ ಮಾಡಿ ರಾಜ್ಯದ ಆರ್ಥಿಕ ಬೆಳವಣಿಗೆಗೆ ಕಾರಣವಾಗಬಹುದು. ಖಾಸಗಿ ಸಹಭಾಗಿತ್ವದ ಗಣಿಗಾರಿಕೆ ರಾಜ್ಯಕ್ಕೆ ಹೆಚ್ಚು ಲಾಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ದೇಶದ ರಕ್ಷಣಾ ವಲಯ, ಬಾಹ್ಯಾಕಾಶ, ನಾಗರಿಕ ವಿಮಾನಯಾನ, ಅಂತರಿಕ್ಷಯಾನ ಮತ್ತು ಅಂತರಿಕ್ಷ ವಲಯಗಳಲ್ಲಿ ಹೂಡಿಕೆ ಹೆಚ್ಚಾಗಿ ರಾಜ್ಯಕ್ಕೆ ಲಾಭವಾಗಲಿದೆ. ಏಕೆಂದರೆ ಈ ವಲಯದಲ್ಲಿ ಸಾಕಷ್ಟು ಉತ್ಪಾದನಾ ಘಟಕಗಳು ನಮ್ಮ ರಾಜ್ಯದಲ್ಲಿದ್ದು, ಅವುಗಳಿಗೆ ಪೂರಕವಾಗಿ ಇತರೆ ಸಂಬಂಧಪಟ್ಟ ಘಟಕಗಳು ಸ್ಥಾಪನೆಯಾಗಲಿವೆ. ಎಲ್ಲಕ್ಕೂ ಮಿಗಿಲಾಗಿ ಇಂದು ಪ್ರಕಟಿಸಿದ ಆರ್ಥಿಕ ಯೋಜನೆಗಳು ದೇಶದ ವಿದೇಶಿ ವಿನಿಮಯವನ್ನು ಉಳಿತಾಯ ಮಾಡಲಿದೆ ಎಂದು ಯಡಿಯೂರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ಅಣು ವಿಜ್ಞಾನದಲ್ಲಿ ಖಾಸಗಿ ಸಹಭಾಗಿತ್ವ ನಮ್ಮ ರಾಜ್ಯಕ್ಕೆ ಹೆಚ್ಚಿನ ಲಾಭವಾಗಲಿದೆ. ದಾವೋಸ್ ಪ್ರವಾಸದಲ್ಲಿ ಹಲವಾರು ಬಾಹ್ಯಾಕಾಶ ಮತ್ತು ರಕ್ಷಣಾ ವಲಯದ ಕಂಪೆನಿಗಳು ಕರ್ನಾಟಕ ರಾಜ್ಯದಲ್ಲಿ ಹೂಡಿಕೆ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದು, ಈಗ ಈ ಕಂಪೆನಿಗಳ ಯೋಜನೆಗಳು ಸಾಕಾರಗೊಳ್ಳಲಿವೆ'

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News