ಬೆಂಗಳೂರು: ಪತ್ನಿಯ ಕೊಲೆಗೈದು ಎರಡು ದಿನ ಮೃತದೇಹದ ಜೊತೆ ಕಳೆದ ವ್ಯಕ್ತಿ !

Update: 2020-05-16 15:35 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 16: ತನ್ನ ಅಕ್ರಮ ಸಂಬಂಧ ವಿಚಾರ ಬೆಳಕಿಗೆ ಬಂದ ಹಿನ್ನೆಲೆ ಪತ್ನಿಯನ್ನು ಕೊಲೆಗೈದು, ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಿಹಾರ ಮೂಲದ ಸಂಧ್ಯಾ ಎಂಬಾಕೆ ಕೊಲೆಯಾಗಿರುವ ಮಹಿಳೆಯಾಗಿದ್ದು, ಕೃತ್ಯವೆಸಗಿರುವ ಪತಿ ಮನೀಶ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಕೂಡ್ಲು ಗೇಟ್ ಎಎಫ್‍ಸಿಎಲ್ ಬಡಾವಣೆಯಲ್ಲಿ ವಾಸವಾಗಿದ್ದ ಮನೀಶ್ ಕುಮಾರ್ ಮೂರು ವರ್ಷಗಳ ಹಿಂದೆ ಸಂಧ್ಯಾ ಎಂಬಾಕೆಯನ್ನು ಮದುವೆಯಾಗಿದ್ದ. ಈ ಮಧ್ಯೆ ಮನೀಶ್ ಕುಮಾರ್ ಗೆ ಬೇರೊಬ್ಬಳು ಮಹಿಳೆಯ ಪರಿಚಯವಾಗಿ ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ.

ಈ ವಿಚಾರವಾಗಿ ದಂಪತಿ ನಡುವೆ ಮೇ 14ರಂದು ಜಗಳ ಶುರುವಾಗಿದ್ದು, ಈ ವೇಳೆ ಪತ್ನಿ ಸಂಧ್ಯಾ ಮೇಲೆ ಮನೀಶ್ ಕುಮಾರ್ ಹಲ್ಲೆ ನಡೆಸಿ ಕೊಲೆಗೈದಿದ್ದ. ಬಳಿಕ ಮೃತದೇಹವನ್ನು ಮನೆಯಲ್ಲಿಟ್ಟುಕೊಂಡಿದ್ದ. ಇನ್ನು, ಎರಡು ದಿನಗಳಿಂದ ಸಂಧ್ಯಾಳ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಆಕೆಯ ಕುಟುಂಬಸ್ಥರು ಗಾಬರಿಗೊಂಡು ಮನೆಗೆ ಹುಡುಕಿಕೊಂಡು ಬಂದಿದ್ದರು ಎಂದು ತಿಳಿದುಬಂದಿದೆ.

ಕುಟುಂಬಸ್ಥರ ಆಗಮನದಿಂದ ವಿಚಲಿತನಾದ ಮನೀಷ್ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News