ಎಪಿಎಂಸಿ ಬಂದ್ ವಿಚಾರ ಕೈ ಬಿಡಲು ಎಫ್ಕೆಸಿಸಿಐ ನಿರ್ಧಾರ
ಬೆಂಗಳೂರು, ಮೇ 16: ಎಪಿಎಂಸಿ ಕಾಯಿದೆ ತಿದ್ದುಪಡಿಯಲ್ಲಿ ಏಕರೂಪದ ಕಾನೂನು ಜಾರಿಗೆ ತರುವುದಾಗಿ ಮತ್ತು ಸುಗ್ರೀವಾಜ್ಞೆಯಿಂದ ಎಪಿಎಂಸಿ ಮಾರುಕಟ್ಟೆಗೆ ಯಾವುದೇ ಧಕ್ಕೆಯಿಲ್ಲ ಎಂದು ಸರಕಾರ ಭರವಸೆ ನೀಡಿದೆ. ಹೀಗಾಗಿ ನಾಳೆ(ಮೇ 18)ಯಿಂದ ರಾಜ್ಯಾದ್ಯಂತ ಎಪಿಎಂಸಿ ಬಂದ್ ವಿಚಾರವನ್ನು ಕೈಬಿಡಲಾಗಿದೆ ಎಂದು ಎಫ್ಕೆಸಿಸಿಐನ ಎಪಿಎಂಸಿ ಸಮಿತಿ ಹಾಗೂ ಎಫ್ಕೆಸಿಸಿಐ ತಿಳಿಸಿದೆ.
ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ಕಾರ್ಪೋರೇಟ್ ಕಂಪನಿಗಳಿಗೆ ಮಣೆ ಹಾಕಲಾಗುತ್ತಿದೆ ಎಂಬ ಸಂಗತಿ ತಿಳಿದಿತ್ತು. ಜತೆಗೆ ನಾವು ಮಾರುಕಟ್ಟೆ ಶುಲ್ಕ ಶೇ.1.5 ರಷ್ಟು ಕಟ್ಟುತ್ತಿದ್ದೆವು. ಆದರೆ ಹೊಸ ಕಾಯಿದೆ ಪ್ರಕಾರ ಯಾವುದೇ ಶುಲ್ಕ ವಿಧಿಸುತ್ತಿಲ್ಲ ಎಂಬ ಅಂಶವೂ ಇತ್ತು.
ಇದೀಗ ಏಕರೂಪತೆ ಜಾರಿಗೆ ತರುವ ಭರವಸೆ ಸಿಕ್ಕಿದೆ. ಈ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿಗಳ ಜತೆ ಚರ್ಚಿಸುತ್ತೇವೆ. ಹೀಗಾಗಿ, ರೈತರ ಹಿತದೃಷ್ಟಿಯಿಂದ ಮೇ 18 ರಿಂದ ಎಪಿಎಂಸಿ ಬಂದ್ ವಿಚಾರವನ್ನು ಕೈ ಬಿಡಲಾಗಿದೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ್ ಮತ್ತು ಎಫ್ಕೆಸಿಸಿಐನ ಎಪಿಎಂಸಿ ಸಮಿತಿ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ತಿಳಿಸಿದರು.