ಬೆಂಗಳೂರಿನಲ್ಲಿ ಅಮೆರಿಕ ವೀಸಾ ಕೇಂದ್ರ ಸ್ಥಾಪನೆಗೆ ಡಾ.ಅಶ್ವಥ್ ನಾರಾಯಣ ಒತ್ತಾಯ

Update: 2020-05-19 17:06 GMT

ಬೆಂಗಳೂರು, ಮೇ 19: ಬೆಂಗಳೂರಿನಲ್ಲಿ ಅಮೆರಿಕದ ವೀಸಾ ಕೇಂದ್ರ ಸ್ಥಾಪಿಸಬೇಕು ಎಂಬ ಬಹುದಿನಗಳ ಬೇಡಿಕೆಯನ್ನು ಪರಿಗಣಿಸುವ ಜೊತೆಗೆ  ಕರ್ನಾಟಕದಲ್ಲಿ ಬಂಡವಾಳ ಹೂಡುವಂತೆ ಅಮೆರಿಕದ ಕಾನ್ಸುಲೇಟ್ ಜನರಲ್ ಬಳಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಸಂಬಂಧ ಅಮೆರಿಕದ ಕಾನ್ಸುಲೇಟ್ ಜನರಲ್ ರೊಬರ್ಟ್ ಬುರ್ಗೆಸ್ ಜೊತೆ ಮಂಗಳವಾರ ನಗರದಲ್ಲಿ ವೀಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದಕ್ಷಿಣ ಭಾರತದಿಂದ ಅಮೆರಿಕಕ್ಕೆ ತೆರಳುವವರ ಪೈಕಿ ಶೇ.70ರಷ್ಟು ಮಂದಿ ಕರ್ನಾಟಕದವರು. ಹಾಗಾಗಿ ಬೆಂಗಳೂರಿನಲ್ಲೆ ವೀಸಾ ಕೇಂದ್ರ ಸ್ಥಾಪಿಸಬೇಕು ಎಂಬ ಬಹುದಿನಗಳ ಬೇಡಿಕೆಯನ್ನು ಅವರ ಬಳಿ ಪ್ರಸ್ತಾಪಿಸಿದ್ದೇನೆ. ಜೊತೆಗೆ, ಕೋವಿಡ್ ನಂತರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂಸ್ಥೆಗಳು ಕರ್ನಾಟಕಕ್ಕೆ ಸ್ಥಳಾಂತರಗೊಂಡರೆ, ಅದಕ್ಕೆ ಪೂರಕ ನೆರವು ಒದಗಿಸಲಾಗುತ್ತದೆ ಎಂದು ಅಮೆರಿಕದ ಕಾನ್ಸುಲೇಟ್ ಜನರಲ್ ನಿಯೋಗಕ್ಕೆ ಭರವಸೆ ನೀಡಲಾಯಿತು ಎಂದು ಅವರು ತಿಳಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ವಿವಿಧ ದೇಶಗಳ ಜೊತೆ ಸಂಬಂಧ ಸುಧಾರಣೆಗಾಗಿ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಬೇರೆ ಬೇರೆ ದೇಶಗಳ ಜೊತೆ ಮಾತುಕತೆ ಆಯೋಜಿಸಲಾಗುತ್ತಿದೆ. ಅಮೆರಿಕದ ಜೊತೆ ಮೊದಲಿನಿಂದಲೂ ನಮಗೆ ಉತ್ತಮ ಸಂಬಂಧ ಇದ್ದು, ಅದನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ಮಾತುಕತೆ ನಡೆದಿದೆ ಎಂದು ಅಶ್ವಥ್ ನಾರಾಯಣ ಹೇಳಿದರು.

ಅಮೆರಿಕದ 500 ಟಾಪ್ ಫಾರ್ಚೂನ್ ಕಂಪೆನಿಗಳ ಪೈಕಿ 400 ನಮ್ಮಲ್ಲಿವೆ. ಶೇ.35ರಷ್ಟು ಐಐಸಿಗಳು ಇಲ್ಲಿವೆ. ಇನ್ನೂ ಹೆಚ್ಚಿನ ಕಂಪೆನಿಗಳು ಇಲ್ಲಿಗೆ ಸ್ಥಳಾಂತರಗೊಂಡರೆ ಅವರಿಗೆ ಎಲ್ಲ ಅಗತ್ಯ ನೆರವು ನೀಡಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ನಿಟ್ಟಿನಲ್ಲಿ ಕ್ರಮ ವಹಿಸಿದ್ದಾರೆ ಎಂದು ಅವರು ತಿಳಿಸಿದರು.

ಭೂ ಸುಧಾರಣೆ ಕಾಯ್ದೆ, ಕಾರ್ಮಿಕ ಕಾನೂನಿನ ಸುಧಾರಣೆ ಸೇರಿದಂತೆ ಉದ್ದಿಮೆ ಸ್ಥಾಪನೆಗೆ ಪೂರಕವಾಗಿ ಹಲವಾರು ಸುಧಾರಣೆಗಳನ್ನು ತಂದಿರುವ ಜೊತೆಗೆ ಈಸ್ ಆಫ್ ಡೂಯಿಂಗ್ ಬಿಸಿನೆಸ್ ನಿಯಮ ಪಾಲಿಸುವ ಮೂಲಕ ಕಂಪೆನಿಗಳಿಂದ ಬಂಡವಾಳ ಆಕರ್ಷಣೆಗೆ ರಾಜ್ಯ ಸರಕಾರ ಶಕ್ತಿ ಮೀರಿ ಪ್ರಯತ್ನಿಸಲಿದೆ. ನಮ್ಮ ರಾಜ್ಯ ಇಂಥ ಯಾವ ಅವಕಾಶದಿಂದಲೂ ವಂಚಿತವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.

ನವೋದ್ಯಮ ಕಂಪೆನಿಗಳ ಸ್ಥಾಪನೆಯಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅಮೆರಿಕದ ಕಾನ್ಸುಲೇಟ್ ಜನರಲ್ ಈ ಮಾತಿಗೆ ಸಹಮತ ವ್ಯಕ್ತಪಡಿಸಿ, ವಿಶ್ವದಲ್ಲೇ ಅತಿ ಹೆಚ್ಚು ಆಕರ್ಷಣೆ ಹೊಂದಿರುವ ರಾಜ್ಯ ಕರ್ನಾಟಕ, ಅದರಲ್ಲೂ ವಿಶೇಷವಾಗಿ ಬೆಂಗಳೂರು ಉದ್ಯಮಿಗಳ ನೆಚ್ಚಿನ ನಗರ ಎಂದು ತಿಳಿಸಿದರು. ಕರ್ನಾಟಕದ ಜೊತೆ ವ್ಯವಹಾರ ನಡೆಸಲು ದೊರೆಯುವ ಅವಕಾಶವನ್ನು ನಾವು ಕಳೆದುಕೊಳ್ಳುವುದಿಲ್ಲ ಎಂದು ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಅವರು ಹೇಳಿದರು.

ಕೋವಿಡ್ ಸೋಂಕನ್ನು ಕರ್ನಾಟಕ ಅತ್ಯುತ್ತಮವಾಗಿ ನಿರ್ವಹಿಸಿದೆ. ಸಂಕಷ್ಟದ ಸಮಯದಲ್ಲಿ ಕಂಪೆನಿಗಳು ಕಾರ್ಯನಿರ್ವಹಿಸಲು ರಾಜ್ಯ ಸರಕಾರದಿಂದ ಉತ್ತಮ ಸಹಕಾರ ದೊರೆಕಿದ್ದು, ಮನೆಯಿಂದಲೆ ಕೆಲಸ ಮಾಡಲು ಸಾಧ್ಯವಾಗಿದೆ.  ಜತೆಗೆ, ಅಗತ್ಯ ಹಾಗೂ ತುರ್ತು ಸೇವೆಗಳಿಗೆ ಉತ್ತಮ ಬೆಂಬಲ ದೊರೆತಿದೆ ಎಂದು ಅಮೆರಿಕದ ಕಾನ್ಸುಲೇಟ್ ಜನರಲ್ ನೇತೃತ್ವದ ನಿಯೋಗ ಕೃತಜ್ಞತೆ ಸಲ್ಲಿಸಿತು ಎಂದು ಅಶ್ವಥ್ ನಾರಾಯಣ ತಿಳಿಸಿದರು.

ವಿಡಿಯೋ ಸಂವಾದದಲ್ಲಿ ಇಂಡೋ ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮೋಹನ್ ರಾಜಮಣಿ, ಐಟಿಬಿಟಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಕೆಐಟಿಎಸ್ ವ್ಯವಸ್ಥಾಪಕ ನಿರ್ದೇಶಕ ಮೀನಾ ನಾಗರಾಜ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News