ಬೆಂಗಳೂರು: ವಿಮಾನ ಹಾರಾಟ ಆರಂಭಿಸಿದ ಕೆಐಎ

Update: 2020-05-25 14:36 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 25: ಲಾಕ್‍ಡೌನ್ ನಂತರ ಕಾರ್ಯಾಚರಣೆಗೆ ಬೆಂಗಳೂರು ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ಸಜ್ಜಾಗಿದ್ದು, ಸೋಮವಾರದಿಂದ ವಿಮಾನ ಹಾರಾಟ ಆರಂಭಿಸಿದೆ.

ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ವ್ಯಕ್ತಿಗಳ ನಡುವೆ ಸಂಪರ್ಕವನ್ನು ಆದಷ್ಟು ಕಡಿಮೆ ಮಾಡುವ ಕ್ರಮಗಳನ್ನು ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಗಮ (ಬಿಐಎಎಲ್) ತೆಗೆದುಕೊಂಡಿದೆ.

ಬೆಂಗಳೂರಿನಿಂದ ದೇಶದ ಎಲ್ಲ ಮೆಟ್ರೊ ನಗರಗಳು ಹಾಗೂ ಎರಡನೇ ಹಂತದ ನಗರಗಳಿಗೆ ವಿಮಾನಗಳು ಹಾರಾಟ ನಡೆಸುವುದರಿಂದ ಪ್ರಯಾಣಿಕರ ಆರೋಗ್ಯ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ.

ವಿಮಾನ ನಿಲ್ದಾಣದಲ್ಲಿನ ಆಹಾರ ಮತ್ತು ಪೇಯಗಳ ಮಳಿಗೆ ಹಾಗೂ ರಿಟೇಲ್ ಮಳಿಗೆಗಳಲ್ಲಿ ಸಂಪರ್ಕ ರಹಿತ ವ್ಯವಸ್ಥೆ ಕಲ್ಪಿಸಲಾಗಿದ್ದು, ಪಾರ್ಸೆಲ್ ತೆಗೆದುಕೊಳ್ಳಲು ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಟರ್ಮಿನಲ್‍ನಲ್ಲಿ ಪ್ರಯಾಣಿಕರು ಇರುವ ಸ್ಥಳಕ್ಕೇ ಆಹಾರ ವಿತರಿಸಲು ತೀರ್ಮಾನಿಸಲಾಗಿದೆ.

ಪ್ರತಿ ಬಳಕೆಯ ನಂತರ ಉತ್ಪನ್ನಗಳು ಮತ್ತು ಮೇಲ್ಮೈ ಸ್ಥಳಗಳನ್ನು ಮತ್ತು ಪ್ರತಿ 30 ನಿಮಿಷಗಳಿಗೊಮ್ಮೆ ಎಲ್ಲ ಮಳಿಗೆಗಳನ್ನು ಸೋಂಕು ನಿವಾರಕಗಳಿಂದ ಸ್ವಚ್ಛಗೊಳಿಸಲಾಗುತ್ತದೆ.

ಕಾಯುವ ಸಮಯ ಕಡಿತ: ನಿಲ್ದಾಣದೊಳಗೆ ಯಾವುದೇ ಸೇವೆ ಪಡೆಯಲು ಕಾಯುವ ಸಮಯವನ್ನು ಕಡಿತಗೊಳಿಸಲು ಬಿಐಎಎಲ್ ಮುಂದಾಗಿದೆ. ಪ್ರಯಾಣಿಕರು ತಮ್ಮ ಸ್ಮಾರ್ಟ್‍ಫೋನ್‍ಗಳ ಮೂಲಕ ಮುಂಚಿತವಾಗಿಯೇ ಆಹಾರ ಪದಾರ್ಥಗಳಿಗೆ ಆರ್ಡರ್ ಮಾಡಬಹುದು. ಇದರಿಂದ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ.

ಎಫ್‍ಎಸ್‍ಟಿಆರ್ ಬಳಸುವ ಮೂಲಕ ಅಥವಾ ನಿಲ್ದಾಣದೊಳಗಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆರ್ಡರ್ ಮಾಡಬಹುದಾಗಿದೆ. ಮಾಹಿತಿಗೆ ನಿಲ್ದಾಣದ ವೆಬ್‍ಸೈಟ್ ಅನ್ನು ಸಂಪರ್ಕಿಸಬಹುದು. ಡಿಜಿಟಲ್ ವ್ಯವಸ್ಥೆ ಮೂಲಕ ಹಣ ಪಾವತಿಸಬಹುದು.

215 ವಿಮಾನಗಳ ಸಂಚಾರ: ದೇಶದ ಮೂರನೇ ಅತಿ ದಟ್ಟಣೆಯ ನಿಲ್ದಾಣ ಎನಿಸಿಕೊಂಡಿರುವ ಕೆಐಎನಲ್ಲಿ ಸೋಮವಾರದಿಂದ 215 ವಿಮಾನಗಳು ಹಾರಾಟ ನಡೆಸಿದ್ದು, ಅದರಲ್ಲಿ, 108 ವಿಮಾನಗಳು ದೇಶದ ವಿವಿಧ ನಗರಗಳಿಗೆ ಸಂಚರಿಸಿದರೆ, 107 ವಿಮಾನಗಳು ದೇಶ ಮತ್ತು ರಾಜ್ಯದ ವಿವಿಧ ನಗರಗಳಿಂದ ಬೆಂಗಳೂರಿಗೆ ಬರಲಿವೆ. ಆದರೆ, ಪ್ರಯಾಣಿಕರ ಮುಂಗಡ ಟಿಕೆಟ್ ಕಾಯ್ದಿರಿಸುವ ಆಧಾರದ ಮೇಲೆ ಈ ಸಂಖ್ಯೆಯಲ್ಲಿ ವ್ಯತ್ಯಾಸವಾಗಬಹುದು ಎಂದು ಬಿಐಎಎಲ್ ತಿಳಿಸಿದೆ.

ಕೆಐಎನಿಂದ ಇಂಡಿಗೊ ಸಂಸ್ಥೆಯು ಶೇ 47, ಏರ್ ಏಷ್ಯಾ ಇಂಡಿಯಾ ಶೇ 16 ಹಾಗೂ ಸ್ಪೈಸ್ ಜೆಟ್‍ನಿಂದ ಶೇ 14ರಷ್ಟು ವಿಮಾನಗಳು ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News