ಕೇಂದ್ರದ ಪ್ರಸ್ತಾವಿತ ವಿದ್ಯುತ್ ಮಸೂದೆ ರೈತ ವಿರೋಧಿ: ಸಚಿನ್ ಮೀಗಾ
ಬೆಂಗಳೂರು, ಮೇ 25: ಕೊರೋನ ಸಂಕಷ್ಟದ ಸಂದರ್ಭದಲ್ಲಿ 2020ರ ಪ್ರಸ್ತಾವಿತ ವಿದ್ಯುತ್ ತಿದ್ದುಪಡಿ ಮಸೂದೆ ಮೂಲಕ ಪ್ರಧಾನಿ ಮೋದಿ ತನ್ನ ಸ್ನೇಹಿತ ಉದ್ಯಮಿ ಗೌತಮ್ ಅದಾನಿ ಹಾಗೂ ಇನ್ನಿತರರಿಗೆ ಲಾಭ ಮಾಡಿಕೊಡಲು ಹುನ್ನಾರ ನಡೆಸಿದ್ದಾರೆ ಎಂದು ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುವ ಮೂಲಕ ಹಿಂದಿನ ಕಾಂಗ್ರೆಸ್ ಸರಕಾರ ಯೋಜನೆ ರೂಪಿಸಿತ್ತು. ಇದೀಗ ಕೇಂದ್ರ ಸರಕಾರ ರೈತರಿಗೆ ನೀಡುತ್ತಿರುವ ಉಚಿತ ವಿದ್ಯುತ್ ಕಡಿತದ ಪ್ರಸ್ತಾಪ ಮಾಡಿದ್ದು, ಆ ಮೂಲಕ ರೈತರ ಬದುಕಿನ ಜತೆ ಚೆಲ್ಲಾಟಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಇಂತಹ ರೈತ ವಿರೋಧಿ ಮಸೂದೆಗೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು. ಒಂದು ವೇಳೆ ಸರಕಾರ ಈ ಪ್ರಸ್ತಾವಿತ ವಿದ್ಯುತ್ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಿದ್ದೆ ಆದರೆ ಕಿಸಾನ್ ಘಟಕ ರಾಜ್ಯದ ರೈತರ ಜೊತೆ ಸೇರಿ ಹೋರಾಟ ರೂಪಿಸಲಿದೆ ಎಂದು ಸಚಿನ್ ಮೀಗಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.