ರಾಜಧಾನಿ ಬೆಂಗಳೂರಿನಲ್ಲಿ ಲಾಕ್ಡೌನ್ ಅವಧಿಯಲ್ಲಿ 12 ರೌಡಿಗಳ ಹತ್ಯೆ
ಬೆಂಗಳೂರು, ಮೇ 27: ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸಿದ್ದ ಲಾಕ್ಡೌನ್ ಸಂದರ್ಭದಲ್ಲಿ ರಾಜಧಾನಿ ವ್ಯಾಪ್ತಿಯಲ್ಲಿಯೇ 12 ರೌಡಿ ಶೀಟರ್ ಗಳನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಕೊರೋನ ಸೋಂಕಿನ ಭೀತಿಯಿಂದ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಕೆಲ ಕೈದಿಗಳನ್ನು ಜಾಮೀನು ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ರೌಡಿಶೀಟರ್ ಮೇಲೆ ದ್ವೇಷ ಇಟ್ಟುಕೊಂಡಿದ್ದ ಕೆಲವರು, ಇವರ ಮೇಲೆ ದಾಳಿ ನಡೆಸಿ, ಹತ್ಯೆಗೈದಿರುವುದಾಗಿ ಕೆಲ ಪ್ರಕರಣಗಳಿಂದ ಸಾಬೀತಾಗಿದೆ.
ಲಾಕ್ಡೌನ್ ಜಾರಿಯಾದ ನಂತರ ಇದುವರೆಗೆ 12 ರೌಡಿಶೀಟರ್ ಗಳು ಕೊಲೆಯಾಗಿದ್ದಾರೆ. ಇದರಲ್ಲಿ ಬಹುತೇಕರು ಇತ್ತೀಚೆಗೆ ಜೈಲಿನಿಂದ ಹೊರಬಂದವರೇ ಆಗಿದ್ದಾರೆ ಎಂದು ತಿಳಿದುಬಂದಿದೆ.
ನಿಗಾ: ಬಿಡುಗಡೆಯಾದ ರೌಡಿಗಳು ಹಾಗೂ ಇತರೆ ರೌಡಿಗಳ ಚಲನವಲನ ಬಗ್ಗೆ ನಿಗಾ ವಹಿಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಡಿಸಿಪಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.