ಸಾರ್ವಜನಿಕ ಲೆಕ್ಕ ಸಮಿತಿ ಕಾರ್ಯನಿರ್ವಹಣೆಗೆ ತಡೆ ಬೇಡ: ಎಚ್.ಕೆ.ಪಾಟೀಲ್

Update: 2020-05-28 13:41 GMT

ಬೆಂಗಳೂರು, ಮೇ 28: ಕೋವಿಡ್-19 ನಿರ್ವಹಣೆಯಲ್ಲಿ ಅಗತ್ಯವಿರುವ ಪರಿಕರಗಳನ್ನು, ಉಪಕರಣಗಳನ್ನು ಖರೀದಿಸುವಲ್ಲಿ ಆಗಿರುವ ಅವ್ಯವಹಾರ ಹಾಗೂ ಭ್ರಷ್ಟಾಚಾರಗಳ ಬಗ್ಗೆ ದೂರುಗಳು ರಾಜ್ಯ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಕೆಯಾಗಿವೆ ಎಂದು ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಈ ಸಂಬಂಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸುದೀರ್ಘ ಪತ್ರ ಬರೆದಿರುವ ಅವರು, ಮೇ 19 ಮತ್ತು 26ರಂದು ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆಗಳಲ್ಲಿ ಕೋವಿಡ್-19 ಆಸ್ಪತ್ರೆಗಳು, ಕ್ವಾರಂಟೈನ್ ವ್ಯವಸ್ಥೆ, ವಿಮಾನ ನಿಲ್ದಾಣ, ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿ ಕಲ್ಪಿಸಲಾಗಿರುವ ಸುರಕ್ಷತಾ ಕ್ರಮಗಳ ಹಾಗೂ ಖರೀದಿ ಮಾಡಲಾಗಿರುವ ಉಪಕರಣಗಳ ದರ ಕಾರ್ಯಕ್ಷಮತೆಗಳನ್ನು ಪರಿಶೀಲಿಸಲು ಇಲಾಖೆಯ ಅಧಿಕಾರಿಗಳು, ತಜ್ಞರೊಂದಿಗೆ ಸಮಾಲೋಚನೆ ನಡೆಸಲು ಮತ್ತು ಸ್ಥಳ ಪರಿಶೀಲನೆ ಕೈಗೊಳ್ಳಲು ನಿರ್ಧರಿಸಲಾಗಿತ್ತು ಎಂದು ತಿಳಿಸಿದ್ದಾರೆ.

ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಸಂಸ್ಥೆಯಲ್ಲಿ ಕೊರೋನ ವೈರಸ್ ಸಂಬಂಧಿತ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅಕ್ರಮ ಅವ್ಯವಹಾರ ಮತ್ತು ಭ್ರಷ್ಟಾಚಾರದ ಬಗ್ಗೆ ದೂರುಗಳು ಸಮಿತಿಯಿಂದ ಸ್ವೀಕೃತವಾಗಿವೆ ಎಂದು ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ನೀಡಿರುವ ವಿನಾಯಿತಿಯನ್ನು ದುರುಪಯೋಗ ಪಡಿಸಿಕೊಂಡು ಸಂಸ್ಥೆಯ ಅಧಿಕಾರಿಗಳು ಹತ್ತಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿದ್ದು ಸಾರ್ವಜನಿಕ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುತ್ತಾರೆ ಎಂಬ ಗಂಭೀರ ಸ್ವರೂಪದ ಆರೋಪವನ್ನು ದಾಖಲೆಗಳ ಸಮೇತ ಸಮಿತಿಗೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರ ಮೂಲದ ಅಮರಾವತಿಯ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್ ಮೂಲಕ ಖರೀದಿಸಿರುವ ಪಿ.ಪಿ.ಇ ಕಿಟ್‍ಗಳು ಕಳಪೆ ಗುಣಮಟ್ಟದ್ದಾಗಿದ್ದು, 2 ಬಾರಿ ಖರೀದಿಸಲಾಗಿದ್ದು 2 ಬಾರಿಯ ದರಗಳಲ್ಲಿ ಭಾರಿ ಪ್ರಮಾಣದ ಅಂತರವಿದೆ. ರಾಜಸ್ಥಾನ ಸರಕಾರವು ಚೀನಾದ 2 ಕಂಪನಿಗಳಿಂದ ಖರೀದಿ ಮಾಡಿ ಬಳಕೆಗೆ ಯೋಗ್ಯವಲ್ಲವೆಂದು ನಿರ್ಧರಿಸಿದ ಮೇಲೆ ಅದೇ ಕಂಪನಿಯ ಪರೀಕ್ಷಾ ಕಿಟ್‍ಗಳನ್ನು ಖರೀದಿಸಿದ ರಾಜ್ಯ ಸರಕಾರ ನಂತರ ಈ ಕಿಟ್‍ಗಳು ಕಳಪೆ ಗುಣಮಟ್ಟದ್ದವೆಂದು ನಿರ್ಧರಿಸಿ ಬಳಕೆಯನ್ನು ನಿಲ್ಲಿಸಿದೆ ಎಂದು ಅವರು ದೂರಿದ್ದಾರೆ.

ಬಳಕೆ ಮಾಡಲಾದ ವೆಂಟಿಲೇಟರ್‍ಗಳನ್ನು ಖರೀದಿ ಮಾಡಿ ಕೋಟ್ಯಂತರ ರೂಪಾಯಿ ಪಾವತಿ ಮಾಡಲಾಗಿದೆ. ದಿಲ್ಲಿಯ ಆರ್.ಕೆ ಮೆಡಿಕಲ್ ಸೊಲ್ಯೂಷನ್ಸ್ ಸಂಸ್ಥೆಯಿಂದ ಕಳಪೆ ಗುಣಮಟ್ಟದ ವೆಂಟಿಲೇಟರ್‍ಗಳನ್ನು ಖರೀದಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಆರೋಪಿಸಿದ್ದಾರೆ.

500 ಎಂ.ಎಲ್ ಸ್ಯಾನಿಟೈಸರ್ ಬಾಟಲ್‍ಗಳನ್ನು 97.44 ರೂ.ಗೆ ಖರೀದಿ ಮಾಡಿದೆ. ಆದರೆ ಈ ಕಂಪನಿಯು ಖರೀದಿಯ ಅರ್ಧದಷ್ಟು ಮಾತ್ರ ಪೂರೈಸಿದೆ. ಇದೇ ಕಂಪನಿಯಿಂದ ಮತ್ತೊಮ್ಮೆ ಪ್ರತಿ ಸ್ಯಾನಿಟೈಸರ್‍ಗೆ 250 ರೂ.ಗಳಂತೆ ಖರೀದಿಸಲಾಗಿದ್ದು ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಅವರು ಆಪಾದಿಸಿದ್ದಾರೆ.

ಸಿರಿಂಜ್, ಸಿರಿಂಜ್ ಪಂಪ್ ಮತ್ತು ವೈದ್ಯಕೀಯ ಉಪಕರಣಗಳನ್ನು ಮದ್ರಾಸ್ ಸರ್ಜಿಕಲ್ಸ್ ಹಾಗೂ ಇತರ ಕಂಪನಿಗಳ ಮೂಲಕ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಖರೀದಿಸಲಾಗಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದ ಹಾನಿಯಾಗಿರುವ ಬಗ್ಗೆ ದಾಖಲೆಗಳ ಸಮೇತ ದೂರುಗಳನ್ನು ಸಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಆದರೆ, ಮೇ 27 ರಂದು ವಿಧಾನಸಭೆಯ ಕಾರ್ಯದರ್ಶಿ(ಪ್ರ) ಕಳುಹಿಸಿರುವ ಟಿಪ್ಪಣಿಯಲ್ಲಿ ‘ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನ ವೈರಸ್‍ನ ಹಿನ್ನೆಲೆಯಲ್ಲಿ ರಾಜ್ಯ ವಿಧಾನಮಂಡಲ/ವಿಧಾನಸಭೆಯ ಸಮಿತಿಗಳು ಅಧ್ಯಯನ ಪ್ರವಾಸ ಕೈಗೊಂಡಲ್ಲಿ ಇಲಾಖಾ ಅಧಿಕಾರಿಗಳು/ಸಾರ್ವಜನಿಕರು ಸಮಿತಿಯನ್ನು ಭೇಟಿ ಮಾಡುವ ಸಂದರ್ಭವಿರುವುದರಿಂದ, ಆರೋಗ್ಯದ ಹಿತದೃಷ್ಟಿಯಿಂದ ಸುರಕ್ಷಿತ ಅಂತರ ಇತ್ಯಾದಿಗಳನ್ನು ಕಾಪಾಡಿಕೊಳ್ಳುವುದು ಅವಶ್ಯವಿರುತ್ತದೆ. ಆದುದರಿಂದ, ಮುಂದಿನ ಆದೇಶದವರೆಗೂ ರಾಜ್ಯದೊಳಗೆ ಅಥವಾ ಹೊರ ರಾಜ್ಯಗಳಲ್ಲಿ ಯಾವುದೆ  ಅಧ್ಯಯನ ಪ್ರವಾಸವನ್ನು ಹಾಗೂ ಸ್ಥಳೀಯವಾಗಿಯೂ ಯಾವುದೇ ಭೇಟಿ ಅಥವಾ ಸ್ಥಳ ಪರಿಶೀಲನೆಗಳನ್ನು ಕೈಗೊಳ್ಳಬಾರದೆಂದು ಮಾನ್ಯ ಸಭಾಧ್ಯಕ್ಷರು ಆದೇಶಿಸಿರುತ್ತಾರೆಂದು ಈ ಮೂಲಕ ತಿಳಿಯಪಡಿಸಲಾಗಿದೆ’.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಭ್ರಷ್ಟಾಚಾರದ ದೂರುಗಳನ್ನು ತಪಾಸಣೆ ಮಾಡಲು, ಪರಿಶೀಲಿಸಲು ಕ್ರಮ ಕೈಗೊಳ್ಳುವ ಉದ್ದೇಶದಿಂದ ಸ್ಥಳ ಪರಿಶೀಲನೆ ಮಾಡಲು ನಿರ್ಣಯ ಮಾಡಿದ ಮೇಲೆ ಈ ಪ್ರಕಟಣೆ ಹೊರಬಿದ್ದಿರುವುದರಿಂದ ಭ್ರಷ್ಟಾಚಾರದ ಪ್ರಕರಣಗಳ ತನಿಖೆಯನ್ನು ತಡೆಯುವ ಉದ್ದೇಶದಿಂದಲೆ ಇಂಥ ಪ್ರಕಟಣೆ ಹೊರಬಿದ್ದಿರಬಹುದೆಂಬ ಸಂದೇಹ ಸಹಜವಾಗಿ ಸಾರ್ವಜನಿಕರಿಗೆ ಉಂಟಾಗುತ್ತಿದೆ. ಸಮಿತಿಯ ಸದಸ್ಯರು ಸಹ ಇಂಥ ಪ್ರಕಟಣೆಯನ್ನು ಒಪ್ಪಲು ಅಥವಾ ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ಎ.17ರಿಂದ ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್‍ಡೌನ್ ಅನ್ನು ಸಡಿಲಗೊಳಿಸಲಾಗಿದೆ. ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಸುರಕ್ಷಿತ ಅಂತರವಿಲ್ಲದೆ ಮದ್ಯದಂಗಡಿಗಳ ಮುಂದೆ ಮೈಲುಗಟ್ಟಲೆ ಸಾಲುಗಳನ್ನು ಕಂಡ ಮೇಲೂ ಯಾರೂ ಏನೂ ಕ್ರಮ ಕೈಗೊಳ್ಳಲಿಲ್ಲ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸುರಕ್ಷಿತ ಅಂತರವಿಲ್ಲದ ಅನೇಕ ಘಟನೆಗಳು ದಿನವೂ ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

ಅರಮನೆ ಮೈದಾನದ ಬಳಿ ಹೊರರಾಜ್ಯಗಳ ಕಾರ್ಮಿಕರ ಸಾಲುಗಳನ್ನು ಯಾವುದೆ ಸುರಕ್ಷಿತ ಅಂತರ ಪಾಲಿಸದೆ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಸರಕಾರ ಅದರ ಬಗ್ಗೆ ಯಾವುದೆ ರೀತಿಯ ಕಾಳಜಿ ತೋರದೆ ಇದ್ದುದನ್ನೂ ನಾವು ಕಂಡಿದ್ದೇವೆ. ಜೂ.1ರಿಂದ ದೇವಾಲಯಗಳ ಬಾಗಿಲುಗಳನ್ನು ತೆರೆಯುವುದಕ್ಕೂ ಸರಕಾರವೆ ನಿರ್ಣಯಿಸಿದೆ ಎಂದು ಅವರು ತಿಳಿಸಿದ್ದಾರೆ.

ಜೂ.18ರಂದು ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿಯಾಗಿದೆ. ಜೂ.25ರಿಂದ ಎಸೆಸೆಲ್ಸಿ ಪರೀಕ್ಷೆಗಳ ದಿನಾಂಕಗಳನ್ನು ಘೋಷಿಸಲಾಗಿದೆ. ಬಸ್ ಪ್ರಯಾಣ, ರೈಲ್ವೆ ಪ್ರಯಾಣ, ವಿಮಾನಯಾನ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ರೈಲ್ವೆ ನಿಲ್ದಾಣಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ವಿಮಾನ ಯಾನದ ಸಂದರ್ಭದಲ್ಲಿ ಸುರಕ್ಷಿತ ಅಂತರ ಪಾಲನೆಯಾಗದಿರುವ ಬಗ್ಗೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವ ಬಗ್ಗೆ ಅನೇಕ ದೂರುಗಳು ನಮ್ಮ ನಿಮ್ಮ ಕಣ್ಣಮುಂದೆ ಇವೆ ಎಂದು ಅವರು ಹೇಳಿದ್ದಾರೆ.

ಸುರಕ್ಷಿತ ಅಂತರ ಸುರಕ್ಷತಾ ಕ್ರಮಗಳನ್ನು ಒಳಗೊಂಡಂತೆ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆಯೇ? ಸರಕಾರವು ಹೇಳಿ ಕೊಳ್ಳುತ್ತಿರುವಂತೆ ಸೌಲಭ್ಯ, ಸೌಕರ್ಯಗಳನ್ನು ಒದಗಿಸಿ ಕೋವಿಡ್ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆಯೇ? ಸೋಂಕಿಗೆ ತುತ್ತಾಗಿರಬಹು ದಾದ ಶಂಕಿತರನ್ನು ಪ್ರತ್ಯೇಕಿಸುವ ವ್ಯವಸ್ಥೆ ಕಲ್ಪಿಸಲಾಗಿರುವ ಕೇಂದ್ರಗಳಲ್ಲಿ ಅಪೇಕ್ಷಿತ ಪ್ರಮಾಣದ ಸುರಕ್ಷತಾ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗಿದೆಯೇ? ಎಂಬ ಬಗ್ಗೆ ಸ್ಥಳ ಪರಿಶೀಲನೆ ಇಲ್ಲದೆಯೆ ನಿರ್ಣಯಕ್ಕೆ ಬರುವುದು ಕಷ್ಟಸಾಧ್ಯ ಎಂದು ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಸಾರ್ವಜನಿಕರಿಗೆ ಸರಿಯಾದ ಸೌಲಭ್ಯ, ಸೌಕರ್ಯಗಳಿಂದ ಅವ್ಯವಹಾರದ ಕಾರಣಕ್ಕಾಗಿ ವಂಚಿತ ಮಾಡುವ ಮತ್ತು ಕೊರೋನ ವಾರಿಯರ್ಸ್‍ಗೆ ಅಗತ್ಯದ ಪರಿಕರಗಳನ್ನು ವಿತರಿಸದಿರುವ ಮತ್ತು ಗುಣಮಟ್ಟದ ಬಗ್ಗೆ ಸಂಶಯಾತ್ಮಕ ಸ್ಥಿತಿ ಉಂಟಾಗಿರುವಾಗ ತಮ್ಮ ಆದೇಶವನ್ನು ಹಿಂಪಡೆ ಯಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News