ಪಂಚಾಯತ್‍ರಾಜ್ ವ್ಯವಸ್ಥೆ ಉಳಿಸಿಕೊಳ್ಳಲು ರಾಜ್ಯಾದ್ಯಂತ ಹೋರಾಟ: ಡಿ.ಕೆ.ಶಿವಕುಮಾರ್

Update: 2020-05-28 13:55 GMT

ಬೆಂಗಳೂರು, ಮೇ 28: ಪಂಚಾಯತಿಗಳಲ್ಲಿ ಚುನಾವಣೆ ಇಲ್ಲದೆ ನಾಮನಿರ್ದೇಶನ ಮಾಡಲು ಕ್ಯಾಬಿನೆಟ್‍ನಲ್ಲಿ ತೀರ್ಮಾನ ಮಾಡಿರುವ ಬಗ್ಗೆ  ಮಾಧ್ಯಮಗಳಲ್ಲಿ ನೋಡಿದ್ದೇವೆ. ನಾವು ಕಾಂಗ್ರೆಸ್ ಪಕ್ಷ ಚುನಾವಣೆ ನಡೆಸಬೇಕು ಅಂತಾ ಆಗ್ರಹಿಸುತ್ತಿದ್ದೇವೆ. ನಾಮನಿರ್ದೇಶನಕ್ಕೆ ಅವಕಾಶ ನೀಡಬಾರದು ಎಂದು ಕಾನೂನು ಹಾಗೂ ರಾಜಕಾರಣದ ಹೋರಾಟ ಮಾಡಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಕುರಿತು ಸ್ಪೀಕರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಮುಖ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಕಾರ್ಯಕರ್ತರನ್ನು ನಾಮ ನಿರ್ದೇಶನ ಮಾಡುವ ತೀರ್ಮಾನ ನಿಮಗೂ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳ್ಳೆಯದಲ್ಲ ಎಂದು ನಾನು ಸರಕಾರಕ್ಕೆ ಈ ಮೂಲಕ ಎಚ್ಚರಿಕೆ ನೀಡಲು ಬಯಸುತ್ತೇನೆ. ನೀವು ಚುನಾವಣೆ ನಡೆಸಿ, ಅದನ್ನು ಬಿಟ್ಟು ನಾಮನಿರ್ದೇಶನ ಮಾಡಿದರೆ ಪಂಚಾಯತ್ ರಾಜ್ ವ್ಯವಸ್ಥೆ ಉಳಿಸಿಕೊಳ್ಳಲು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿವೆ. ಅವರಿಗೆ ಆಹಾರ ಕಿಟ್ ಸಿಕ್ಕಿಲ್ಲ. ಅವರಿಗೆ ಉದ್ಯೋಗವಿಲ್ಲ, ಆಹಾರವಿಲ್ಲ. ಅವರು ತಮ್ಮ ಊರುಗಳಿಗೆ ಹೋಗಲು ಹೆಚ್ಚೆಂದರೆ ಪ್ರತಿ ಕಾರ್ಮಿಕರಿಗೆ ಒಂದು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಅದನ್ನು ನೀಡಲು ಸರಕಾರ ಸಿದ್ಧವಿಲ್ಲ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ದೇಶ ಕಟ್ಟುತ್ತಿರುವ ಕಾರ್ಮಿಕರನ್ನು ಜೀತದಾಳುಗಳನ್ನಾಗಿ ನಡೆಸಿಕೊಳ್ಳಬಾರದು. ಅವರನ್ನು ಗೌರವಯುತವಾಗಿ ಕಳುಹಿಸಿಕೊಡಬೇಕು. ಸಂಕಷ್ಟದ ಸಮಯದಲ್ಲಿ ಅವರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ನಡೆಯಬೇಕಿತ್ತು. ಆದರೆ ಅದು ಸಾಧ್ಯವಿಲ್ಲ. ಪಾಲಿಕೆ ಹಾಗೂ ಕಾರ್ಮಿಕ ಇಲಾಖೆಯಿಂದ ಇವರಿಗಾಗಿ 7 ಲಕ್ಷ ಆಹಾರ ಕಿಟ್ ತಯಾರಿಸಲಾಗಿದ್ದು, ಅವೆಲ್ಲವೂ ಬಿಜೆಪಿ ಕಾರ್ಯಕರ್ತರಿಗೆ ಹೋಗಿದೆಯೆ ಹೊರತು ಶೇ.10 ರಷ್ಟೂ ಕಾರ್ಮಿಕರಿಗೆ ಸಿಕ್ಕಿಲ್ಲ ಎಂದು ಅವರು ಆರೋಪಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ರಾಷ್ಟ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ಎಲ್ಲ ಪಕ್ಷಕ್ಕೂ ಬಂದಿರುವ ದೊಡ್ಡ ಕಾಯಿಲೆ. ಇದನ್ನು ಈಗ ಬಗೆಹರಿಸದಿದ್ದರೆ ಇಡೀ ಪ್ರಜಾತಂತ್ರ ವ್ಯವಸ್ಥೆಯೆ ಹದಗೆಡಲಿದೆ. ಇದಕ್ಕೆ ನಮ್ಮ ರಾಜ್ಯವೆ ದೊಡ್ಡ ಸಾಕ್ಷಿಯಾಗಿದೆ. ಬದಲಾವಣೆ ತರಲು ನಾವೆಲ್ಲ ಪ್ರಯತ್ನ ಮಾಡಿದರೂ ಇತ್ತೀಚಿನ ದಿನಗಳಲ್ಲಿ ಈ ಪಕ್ಷಾಂತರ ವಿಚಾರಕ್ಕೆ ನಾವೆಲ್ಲರೂ ಕಾರಣಕರ್ತರಾಗಿದ್ದೇವೆ ಎಂದು ಅವರು ಹೇಳಿದರು.
ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವುದು, ಪಕ್ಷಾಂತರ ಮಾಡಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ವಾಪಸ್ ತೆಗೆದುಕೊಳ್ಳು ವುದು, ಒಂದು ಪಕ್ಷದಲ್ಲಿದ್ದು, ಮತ್ತೊಂದು ಪಕ್ಷವನ್ನು ಅಧಿಕಾರಕ್ಕೆ ತರಲು ರಾಜೀನಾಮೆ ನೀಡುವ ಪ್ರವೃತ್ತಿಗೆ ಕಡಿವಾಣ ಹಾಕಲಿಲ್ಲ ಅಂದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಯಾರು ಗೆಲ್ಲುತ್ತಾರೊ ಅವರು ಅಧಿಕಾರ ಪಡೆಯಲಿ, ಆದರೆ ಅಧಿಕಾರ ಹಸ್ತಾಂತರಕ್ಕೆ ಪಕ್ಷಾಂತರ ಮಾಡುವುದು ವ್ಯವಸ್ಥೆಗೆ ವಿರುದ್ಧವಾದುದು. ಇದಕ್ಕೆ ಅವಕಾಶ ನೀಡಬಾರದು ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು.

ಸ್ಪೀಕರ್ ಕುರ್ಚಿಯು ನ್ಯಾಯಾಧೀಶರ ಸ್ಥಾನದಂತೆ. ಆ ಸ್ಥಾನದಲ್ಲಿ ಕೂರುವವರು ಯಾವುದೇ ಪಕ್ಷದಿಂದ ಆಯ್ಕೆಯಾದರೂ ಅವರಿಗೆ ಇರುವ ಅಧಿಕಾರವನ್ನು ಬಳಸಲು ಅವಕಾಶ ನೀಡಬೇಕು ಎಂದು ಅವರು ಹೇಳಿದರು.

ಶಾಸಕರು ತಮ್ಮ ವೈಯಕ್ತಿಕ ವಿಚಾರಕ್ಕೆ ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು ಪಕ್ಷದ ವಿರುದ್ಧ ಬೇರೆ ಪಕ್ಷಕ್ಕೆ ಹೋಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಅಂತಾ ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ. ಈ ವಿಚಾರವಾಗಿ ನಮ್ಮ ಪಕ್ಷಗಳಲ್ಲಿ ಈ ಬಗ್ಗೆ ಚರ್ಚೆ ಮಾಡಲಿದ್ದೇವೆ. ಜೂ.10ರೊಳಗೆ ಪಕ್ಷದ ಹಿರಿಯ, ಕಿರಿಯ ಮುಖಂಡರು ಹಾಗೂ ತಜ್ಞರನ್ನು ಕೇಳಿ ಅವರ ಅಭಿಪ್ರಾಯ ತೆಗೆದು ಕೊಂಡು ಒಂದು ಪಕ್ಷವಾಗಿ ಅಭಿಪ್ರಾಯ ನೀಡಲಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News