ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಮತ ಇಲ್ಲ: ಬಿ.ಶ್ರೀರಾಮುಲು ಸ್ಪಷ್ಟನೆ

Update: 2020-05-29 15:23 GMT

ಬೆಂಗಳೂರು, ಮೇ 29: ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಮತ ಇಲ್ಲ. ನಾವೆಲ್ಲ ಶಾಸಕರು ಒಗ್ಗಟ್ಟಾಗಿಯೇ ಇದ್ದೇವೆ. ಸದ್ಯಕ್ಕೆ ಸರಕಾರದ ಮುಂದಿರುವ ಸವಾಲು ಕೊರೋನ ವಿರುದ್ಧ ಹೋರಾಟ ಮಾಡೋದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಶುಕ್ರವಾರ ಸೆವೆನ್ ಮಿನಿಸ್ಟರ್ ಕ್ವಾಟ್ರಸ್‍ನಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಸಾಮಾನ್ಯರು ಈ ಸಾಂಕ್ರಾಮಿಕ ರೋಗದ ಕುರಿತು ಸಮಸ್ಯೆಯಲ್ಲಿ ಸಿಲುಕಿ ನರಳುತ್ತಿರುವಾಗ, ನಮ್ಮ ಗಮನವೆಲ್ಲ ಕೊರೋನ ವಿರುದ್ಧದ ಹೋರಾಟದ ಬಗ್ಗೆ ಕೇಂದ್ರೀಕೃತವಾಗಿರಬೇಕು ಎಂದರು.

ಉತ್ತರ ಕರ್ನಾಟಕ ಭಾಗದ ಶಾಸಕರು ಸಭೆ ಸೇರಿದ್ದ ವಿಚಾರ ನನ್ನ ಗಮನಕ್ಕೂ ಬಂದಿದೆ. ಅವರ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲು ಸಭೆ ಸೇರಿದ್ದಾಗಿ ಸ್ವತಃ ಆ ಶಾಸಕರೆ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಅಸಮಾಧಾನ ಅಥವಾ ಭಿನ್ನಮತದ ಕಾರಣಕ್ಕಾಗಿ ಅವರು ಸಭೆ ಸೇರಿರಲಿಲ್ಲ ಎಂದು ಶ್ರೀರಾಮುಲು ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಕ್ಕೆ ನಾವೆಲ್ಲ ಇದ್ದೇವೆ. ಉತ್ತರ ಕರ್ನಾಟಕ ಭಾಗದ ಶಾಸಕರು ಸಭೆ ವೇಳೆ ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ ಎಂದು ಹೇಳಿದ್ದಾರೆ. ಆದುದರಿಂದ, ಅವರ ಜೊತೆ ನಾನು ಚರ್ಚೆ ಮಾಡುವ ಅಗತ್ಯವೇ ಇಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News