ಆಂತರಿಕ ಕಚ್ಚಾಟದಿಂದಲೇ ಬಿಜೆಪಿ ಸರಕಾರ ಪತನವಾಗಲಿದೆ: ಮಾಜಿ ಸಿಎಂ ಸಿದ್ದರಾಮಯ್ಯ

Update: 2020-05-30 14:29 GMT

ಬೆಂಗಳೂರು, ಮೇ.30: ಕಾಂಗ್ರೆಸ್ ಪಕ್ಷದ ಯಾವ ಶಾಸಕರೂ ರಾಜೀನಾಮೆ ನೀಡುವುದಿಲ್ಲ. ಆಂತರಿಕ ಕಚ್ಚಾಟದಿಂದಲೇ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಅತ್ಯಂತ ಭ್ರಷ್ಟ ಸರ್ಕಾರ. ರಾಜ್ಯ ಮತ್ತು ರಾಜ್ಯದ ಜನತೆಯ ಹಿತದೃಷ್ಟಿಯಿಂದ ಈ ಸರ್ಕಾರ ಆದಷ್ಟು ಬೇಗ ಹೋಗುವುದು ಒಳ್ಳೆಯದು ಎಂದರು. 

ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡಲಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ತಮ್ಮ ಪಕ್ಷದಲ್ಲಿ ನಡೆಯುತ್ತಿರುವ ಜಗಳವನ್ನು ಮುಚ್ಚಿಕೊಳ್ಳಲು ಅವರು ಈ ರೀತಿ ಸುಳ್ಳಿನ ಮಾತುಗಳನ್ನು ಹೇಳುತ್ತಿದ್ದಾರೆ. ಜಾರಕಿಹೊಳಿಯವರು ನಮ್ಮ ಪಕ್ಷ ಬಿಟ್ಟು ಹೋದಾಗ ಮಹೇಶ್ ಕುಮುಟಳ್ಳಿ ಬಿಟ್ಟರೆ ಬೇರೆ ಶಾಸಕರು ಅವರ ಜೊತೆ ಇರಲಿಲ್ಲ. ಜೆಡಿಎಸ್‍ನ ಮೂವರು, ನಮ್ಮ ಪಕ್ಷದ 14 ಮಂದಿ ಆಪರೇಷನ್ ಕಮಲದಿಂದ ಬಿಜೆಪಿಗೆ ಹೋದರು. ಅಧಿಕಾರ ಮತ್ತು ಹಣಕ್ಕಾಗಿ ಅವರು ಪಕ್ಷಾಂತರ ಮಾಡಿದರು ಎಂದು ಕಿಡಿಕಾರಿದರು.

ರಮೇಶ್ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರು ರಹಸ್ಯ ಸಭೆ ನಡೆಸಿರುವುದನ್ನು ಮುಚ್ಚಿಡಲು ಈ ರೀತಿ ಹೇಳುತ್ತಿದ್ದಾರೆ. ಮಹೇಶ್ ಕುಮಟಳ್ಳಿ ಬಿಟ್ಟರೆ ಮೂರನೆಯವರು ಅವರ ಜೊತೆ ಇರಲಿಲ್ಲ. ಬಿಜೆಪಿಯಲ್ಲಿ ಬೆಂಕಿ ಬಿದ್ದಿದೆ. ಯಡಿಯೂರಪ್ಪ ನಮ್ಮ ನಾಯಕರಲ್ಲ, ಅವರ ಬರೇ ಮುಖ್ಯಮಂತ್ರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ಇದರಿಂದ ರವಾನೆಯಾಗುವ ಸಂದೇಶ ಏನು ? ಬಿಜೆಪಿಯ ಆಂತರಿಕ ಭಿನ್ನಮತದಲ್ಲಿ ಕಾಂಗ್ರೆಸ್ ಕೈ ಹಾಕುವುದಿಲ್ಲ. ಅವರ ಕಚ್ಚಾಟದಿಂದ ಸರ್ಕಾರ ಹೋದರೆ ನಾವು ಜವಾಬ್ದಾರರಲ್ಲ. ಇಂಥ ಕೆಟ್ಟ ಸರ್ಕಾರ ಎಂದೂ ಬಂದಿರಲಿಲ್ಲ. ಈ ಸರ್ಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಅಧಿಕಾರ ಚಲಾಯಿಸುವ ಮುಖ್ಯಮಂತ್ರಿ ಒಬ್ಬರು, ನಾಮ್‍ಕಾವಸ್ಥೆ ಮುಖ್ಯಮಂತ್ರಿ ಇನ್ನೊಬ್ಬರು ಎಂದು ಸಿದ್ದರಾಮಯ್ಯ  ಟೀಕಿಸಿದರು. 

ಬಾದಾಮಿ ವಿಧಾನಸಭೆ ಕ್ಷೇತ್ರಕ್ಕೆ 600 ಕೋಟಿ ರೂ. ಅನುದಾನ ನೀಡಲಾಗಿದೆ ಎಂಬುದು ಸುಳ್ಳು. ಕೊಟ್ಟಿದ್ದರೆ ಆದೇಶದ ಪ್ರತಿ ತೋರಿಸಲಿ ಎಂದು ಸಿದ್ದರಾಮಯ್ಯ ಅವರು ಸವಾಲು ಹಾಕಿದರು. 

ಉಮೇಶ್ ಕತ್ತಿಯವರು ನನ್ನನ್ನು ಭೇಟಿಯಾಗಲು ಪ್ರಯತ್ನ ಮಾಡಿದರು ಎಂಬುದು ಊಹಾಪೋಹ. ಅವರು ನನ್ನ ಸ್ನೇಹಿತರು. ಅವರು ನನ್ನೊಂದಿಗೆ ಜನತಾ ಪರಿವಾರದಲ್ಲಿದ್ದರು. ನನ್ನ ಮತ್ತು ಅವರ ಮಧ್ಯೆ ಗೆಳೆತನ, ವಿಶ್ವಾಸ ಇದೆ. ಆದರೆ ಅವರು ನನ್ನನ್ನು ಭೇಟಿಯಾಗುವ ಪ್ರಯತ್ನ ಮಾಡಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಹತ್ತು ಪರ್ಸೆಂಟ್ ಸರ್ಕಾರ ಎಂದು ಮೋದಿಯವರು ಹೇಳಿದ್ದರು. ಈಗಿನ ಸರ್ಕಾರ ಎಷ್ಟು ಪರ್ಸೆಂಟ್ ಸರ್ಕಾರ ಎಂಬುದನ್ನು ಬಿಜೆಪಿಯವರೇ ಹೇಳುತ್ತಿದ್ದಾರೆ. ವರ್ಗಾವಣೆ ಸೇರಿದಂತೆ ಎಲ್ಲದಕ್ಕೂ ಈ ಸರ್ಕಾರದಲ್ಲಿ ಹಣ ನೀಡಬೇಕು. ಕತ್ತಿಯವರ ಮನೆಯಲ್ಲಿ ಊಟಕ್ಕೆ ಸೇರಿದ್ದ ಶಾಸಕರೇ ಈ ಮಾತು ಹೇಳಿದ್ದಾರೆ ಎಂದರು ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News