ದಿಟ್ಟ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ

Update: 2020-06-01 16:54 GMT

ಬೆಂಗಳೂರು, ಜೂ.1: ಹಲವಾರು ದಿಟ್ಟ ಕ್ರಮಗಳಿಂದ ಸರಕಾರವನ್ನು ಹಲವು ಬಾರಿ ಎದುರು ಹಾಕಿಕೊಂಡಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು ಸೇವೆಯಿಂದ ನಿವೃತ್ತರಾಗಿದ್ದಾರೆ.

14 ವರ್ಷಗಳ ಕಾಲ ಸರಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದ ಕೆ.ಮಥಾಯಿ ಸೇವೆಯಿಂದ ನಿವೃತ್ತರಾದರು. 2006ರಲ್ಲಿ ಅವರು ಶೃಂಗೇರಿಯಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ಆರಂಭಿಸಿದ್ದರು.

ಬಿಬಿಎಂಪಿ ಜಾಹೀರಾತು ಹಗರಣವನ್ನು ಬೆಳಕಿಗೆ ತಂದಿದ್ದ ಕೆ.ಮಥಾಯಿ ಅವರು ಭ್ರಷ್ಟಾಚಾರಕ್ಕೆ ತಡೆ ಹಾಕಿದ ಕಾರಣಕ್ಕಾಗಿಯೇ ಹಲವು ಬಾರಿ ವರ್ಗಾವಣೆಯಾಗಿದ್ದರು. ಕರ್ನಾಟಕದಲ್ಲಿ ಸಕಾಲ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರ ಪಾತ್ರವೂ ಮಹತ್ವದ್ದಾಗಿದೆ.

ವಾಯುಪಡೆಯಲ್ಲಿ 1 ವರ್ಷ ಕೆಲಸ ಮಾಡಿದ್ದ ಕೆ.ಮಥಾಯಿ ಅವರು 8 ವರ್ಷ ಮಂಗಳೂರಿನಲ್ಲಿ ವಕೀಲರಾಗಿ ಕೆಲಸ ಮಾಡಿದ್ದರು. ಜೋಯಿಡಾ, ಭಟ್ಕಳ, ಹಿರೇಕೆರೂರು, ಮಡಿಕೇರಿ, ಹಾಸನದಲ್ಲಿಯೂ ಅವರು ತಹಶೀಲ್ದಾರ್ ಆಗಿ ಕೆಲಸ ಮಾಡಿದ್ದರು.

ಕರ್ನಾಟಕ ಸರಕಾರ ಕಚೇರಿ ಕೆಲಸಕ್ಕೆ ವಾಹನ ನೀಡಲು ನಿರಾಕರಿಸಿದ ಕಾರಣಕ್ಕೆ ಮನೆಯಿಂದ ಎಂ.ಎಸ್.ಬಿಲ್ಡಿಂಗ್‍ನಲ್ಲಿರುವ ಕಚೇರಿಗೆ ಸೈಕಲ್‍ನಲ್ಲಿ ಆಗಮಿಸಿದ್ದರು. ಈ ವಿಚಾರ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು.

ಬಿಬಿಎಂಪಿಯಲ್ಲಿನ 2 ಸಾವಿರ ಕೋಟಿ ರೂ.ಹಗರಣವನ್ನು ಅವರು ಬಯಲಿಗೆಳೆದಿದ್ದರು. ಆಗ ಕೆಲವು ಬಿಬಿಎಂಪಿ ಸದಸ್ಯರು, ಜಾಹೀರಾತು ಏಜೆನ್ಸಿಯವರು ಕೆ.ಮಥಾಯಿ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News